

ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ. ಈ ದುರಂತಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಉಜ್ವಲ್ ನಿಕಮ್ (Ujjwal Nikam) ನೀಡಿರುವ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೌದು, ನಿಕಮ್ ಪ್ರಕಾರ, "ನಟ ಸಂಜಯ್ ದತ್ ಮನಸ್ಸು ಮಾಡಿದ್ದರೆ ಈ ಮಹಾಸ್ಫೋಟವನ್ನು ತಡೆಯಬಹುದಿತ್ತು" ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.
ಏನಿದು 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ?
1993ರ ಮಾರ್ಚ್ 12 ರಂದು ಮಹಾರಾಷ್ಟ್ರದ ಮುಂಬೈನ 12 ಕಡೆ ಬಾಂಬ್ಗಳು ಸ್ಪೋಟಗೊಂಡು 257 ಜನರು ಅಸುನೀಗಿದ್ದರು. ಇನ್ನು ಸ್ಪೋಟಕ್ಕೂ ಮುನ್ನ ಭೂಗತ ಪಾತಕಿ ಅಬು ಸಲೇಂ ಶಸ್ತ್ರಾಸ್ತ್ರಗಳಿಂದ ತುಂಬಿದ್ದ ವಾಹನವನ್ನು ನಟ ಸಂಜಯ್ ದತ್ ಮನೆಗೆ ತಂದಿದ್ದನು. ಆ ವಾಹನದಲ್ಲಿದ್ದ ಶಸ್ತ್ರಾಸ್ತ್ರಗಳನ್ನು ನೋಡಿದ್ದ ಸಂಜಯ್ ದತ್, ಕೇವಲ ತನ್ನ ಹವ್ಯಾಸ ಹಾಗೂ ಸ್ವಯಂ ರಕ್ಷಣೆಗಾಗಿ ಅದರಿಂದ ಎಕೆ-56 ರೈಫಲ್ ಅನ್ನು ಪಡೆದುಕೊಂಡಿದ್ದರು.
ಇದಾದ ನಂತರ ಸಂಜಯ್ ದತ್ ಅವರ ಮೇಲೆ ಟಾಡಾ ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪದ ಪ್ರಕಾರ 1993 ರಲ್ಲಿ ನಡೆದ ಸ್ಫೋಟದ ಸಂದರ್ಭದಲ್ಲಿ ಅವರ ಬಳಿ ಅಕ್ರಮವಾಗಿ ಶಸ್ತ್ರಾಸ್ತ್ರಗಳಿದ್ದವು ಎನ್ನಲಾಗಿತ್ತು. 2013ರಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಸಂಜಯ್ ದತ್ ಅವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿತು. ಅದರಲ್ಲಿ ಅವರು ಈಗಾಗಲೇ 18 ತಿಂಗಳು ಜೈಲಿನಲ್ಲಿ ಕಳೆದಿದ್ದರಿಂದ ಇನ್ನೂ 42 ತಿಂಗಳು ಶಿಕ್ಷೆ ಅನುಭವಿಸಬೇಕಾಯಿತು. ಅದರಂತೆ 2016 ರಲ್ಲಿ ಅವರು ಜೈಲಿನಿಂದ ಬಿಡುಗಡೆಯಾದರು.
ಏತನ್ಮಧ್ಯೆ, ಕೋರ್ಟ್ ವಿಚಾರಣೆ ವೇಳೆ ಸಂಜಯ್ ದತ್ ಅವರಿಗೆ ಸ್ಫೋಟದ ಬಗ್ಗೆ ಮುಂಚಿತವಾಗಿ ಮಾಹಿತಿ ಇತ್ತು ಎಂಬ ಆರೋಪ ಸಾಬೀತಾಗಿಲ್ಲ. ಆದರೆ, ಅವರು ಶಸ್ತ್ರಾಸ್ತ್ರಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು ಎಂಬ ಕಾರಣಕ್ಕೆ ಮಾತ್ರ ಶಿಕ್ಷೆ ಅನುಭವಿಸಿದರು. ನಂತರ ನ್ಯಾಯಾಲಯ ಅವರನ್ನು ಭಯೋತ್ಪಾದನಾ ಆರೋಪದಿಂದ ಮುಕ್ತಗೊಳಿಸಿತ್ತು.
ಉಜ್ವಲ್ ನಿಕಮ್ ಹೇಳಿದ್ದೇನು?
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಿರಿಯ ವಕೀಲ ಉಜ್ವಲ್ ನಿಕಮ್, "ಮುಂಬೈ ಸ್ಫೋಟಕ್ಕೂ ಮುನ್ನ, ಸಂಜಯ್ ದತ್ ತಮಗೆ ಆಯುಧ ಸರಬರಾಜಾದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಇಡೀ ಭಯೋತ್ಪಾದನಾ ಜಾಲವನ್ನು ಮುಂಚಿತವಾಗಿಯೇ ಪತ್ತೆ ಹಚ್ಚಬಹುದಿತ್ತು. ಇದರಿಂದಾಗಿ ಸಂಚು ಮುಂಚಿತವಾಗಿಯೇ ಬಯಲಿಗೆ ಬಂದು, 257 ಅಮಾಯಕರ ಪ್ರಾಣ ಉಳಿಯುತ್ತಿತ್ತು" ಎಂದು ಹೇಳಿದ್ದಾರೆ.