

ಮುಂಬೈ: ಕೃಷ್ಣ ನದಿ ನೀರಿಗೆ ಕನ್ನ ಹಾಕಿರುವ ಮಹಾರಾಷ್ಟ್ರ ಸರ್ಕಾರ, ಕೊಲ್ಲಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ 'ರಾಧಾಕೃಷ್ಣ ನೀರಾವರಿ ಯೋಜನೆ'ಯಡಿ ಹೊಸ ಜಲಾಶಯ ನಿರ್ಮಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಘೋಷಿಸಿದ್ದಾರೆ. ಇದು ರಾಜ್ಯದ ಗಡಿ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ದೀರ್ಘಕಾಲದ ನೀರಿನ ಸಮಸ್ಯೆಯನ್ನು ಪರಿಹರಿಸಲು 3,200 ಕೋಟಿ ರೂ.ಗಳ ಪ್ರವಾಹ ನಿರ್ವಹಣೆ ಮಿಷನ್ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸೋಮವಾರ ಘೋಷಿಸಿದ್ದಾರೆ.
ಈ ಉಪಕ್ರಮವು ಮಳೆನೀರಿನ ಸಂಗ್ರಹವನ್ನು ಹೆಚ್ಚಿಸುವುದು ಮತ್ತು ಕೃಷ್ಣ ಹಾಗೂ ಪಂಚಗಂಗಾ ನದಿಗಳ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
3,200 ಕೋಟಿ ವೆಚ್ಚದ ಈ ಮಿಷನ್ ಕೊಲ್ಲಾಪುರ, ಸಾಂಗ್ಲಿ ಮತ್ತು ಇಚಲಕರಂಜಿಯಲ್ಲಿ ಮಳೆನೀರಿನ ಸಂಗ್ರಹವನ್ನು ಹೆಚ್ಚಿಸುವ ಮೂಲಕ, ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಾಮರ್ಥ್ಯವನ್ನು ಸುಧಾರಿಸುವ ಮತ್ತು ಮಳೆನೀರು ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ದೀರ್ಘಾವಧಿಯ ಪ್ರವಾಹ ಸ್ಥಿತಿಸ್ಥಾಪಕತ್ವದತ್ತ ಪ್ರಮುಖ ಹೆಜ್ಜೆಯಾಗಿದೆ ಎಂದು ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ.
ಆದರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ವಿಭಜಿತ ಆಂಧ್ರಪ್ರದೇಶದಲ್ಲಿ ಹರಿಯುವ ಕೃಷ್ಣಾ ಅಂತಾರಾಜ್ಯ ನದಿಯಾಗಿದೆ. ಕೃಷ್ಣಾ ನದಿ ನೀರು ಹಂಚಿಕೆ ಮತ್ತು ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ವಿಷಯದಲ್ಲೂ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ, ಈಗ ಕರ್ನಾಟಕದ ಪಾಲಿನ ನದಿ ನೀರನ್ನು ಅಕ್ರಮವಾಗಿ ಬಳಸಿಕೊಳ್ಳಲು ಮುಂದಾಗಿದೆ.
ಇಂಚಲಕರಂಜಿ ನಗರದ ಪಕ್ಕದಲ್ಲೇ ದೂಧಗಂಗಾ ನದಿ ಹರಿಯುತ್ತಿದ್ದರೂ ಅಲ್ಲಿಂದ 30 ಕಿ.ಮೀ. ದೂರದ ದಾನವಾಡ ಬಳಿ ಜಾಕವೆಲ್ ನಿರ್ಮಿಸಿ 4 ಟಿಎಂಸಿ ನೀರು ಕೊಂಡೊಯ್ಯುವ ರಾಧಾಕೃಷ್ಣ ನೀರಾವರಿ ಯೋಜನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಘೋಷಿಸಿದ್ದಾರೆ.
ಈ ಯೋಜನೆಯಿಂದ ಕೃಷ್ಣಾ ನದಿಯ ಸುಮಾರು 4 ಟಿಎಂಸಿ ನೀರನ್ನು ಮಹಾರಾಷ್ಟ್ರ ಬಳಸಿಕೊಳ್ಳಲಿದೆ. ಇದರಿಂದ ಕರ್ನಾಟಕಕ್ಕೆ ಹರಿಯುವ ನೀರಿನ ಪ್ರಮಾಣದಲ್ಲಿ ಕೊರತೆಯಾಗಲಿದ್ದು, ರಾಜ್ಯದ ಪ್ರಮುಖ ಹಿಪ್ಪರಗಿ ಬ್ಯಾರೇಜ್ ಹಾಗೂ ಆಲಮಟ್ಟಿ ಜಲಾಶಯಕ್ಕೆ ಬಂದು ಸೇರುವ ನೀರಿನ ಹರಿವು ತೀವ್ರವಾಗಿ ಕುಸಿಯಲಿದೆ. ಇದನ್ನು ಯಾವುದೇ ಕಾರಣಕ್ಕೂ ಅನುಮತಿಸದೆ ತಕ್ಷಣವೇ ತಡೆಯಬೇಕಾಗಿದೆ" ಎಂದು ಗಡಿ ಭಾಗದ ರೈತರು ಆಗ್ರಹಿಸಿದ್ದಾರೆ.