

ಕೋಲ್ಕತ್ತಾ: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸೋತ ನಂತರ ಮೊದಲ ಬಾರಿಗೆ ಸಾರ್ವಜನಿಕ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡ ಮಾಜಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee), ಬದುಕಿದ್ದರೆ ಖಂಡಿತಾ ಕೇಂದ್ರದಿಂದ ಬಿಜೆಪಿ ಕಿತ್ತೊಗೆಯುತ್ತೇನೆ ಎಂದು ಹೇಳಿದ್ದಾರೆ.
ರಾಜಧಾನಿ ಕೋಲ್ಕತ್ತಾದ ಬೀದಿಗಳಲ್ಲಿ ಪ್ರತಿಭಟನೆಗೆ ನೇತೃತ್ವ ವಹಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ, "ನಾನು ಬದುಕಿದ್ದರೆ ಕೇಂದ್ರದಲ್ಲಿರುವ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತೇನೆ" ಎಂದರು. ಚುನಾವಣೆಯ ನಂತರ ಟಿಎಂಸಿಯನ್ನು ಒಡೆಯಲು ಹಾಗೂ ತಮ್ಮನ್ನು ರಾಜಕೀಯವಾಗಿ ತಡೆಯಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೂ ವಾಗ್ದಾಳಿ ನಡೆಸಿದರು.
"ನೀವು ಯಾರಿಗೆ ಜವಾಬ್ದಾರಿ ನೀಡಿದ್ದೀರಿ ಎಂಬುದನ್ನು ನೋಡಿ. ಪಶ್ಚಿಮ ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿ," ಎಂದು ಅವರು ಹೇಳಿದರು. ಅಲ್ಲದೆ, ದೇಶದ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ಕೈಜೋಡಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಉರುಳಿಸುವುದಾಗಿ ಸೂಚಿಸಿದರು.
ಚುನಾವಣೋತ್ತರ ಹಿಂಸಾಚಾರ ವಿರುದ್ಧ ಪ್ರತಿಭಟನೆ
ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ತಮ್ಮ ಕಾಳಿಘಾಟ್ ನಿವಾಸದಿಂದ ಹೊರಟ ಮಮತಾ ಬ್ಯಾನರ್ಜಿ ಮೊದಲು ರೆಡ್ ರೋಡ್ಗೆ ತೆರಳಿ ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ನಂತರ ಅವರು ನೇರವಾಗಿ ವೈ-ಚಾನೆಲ್ನಲ್ಲಿ ಆಯೋಜಿಸಿದ್ದ ಪಕ್ಷದ ಪ್ರತಿಭಟನಾ ವೇದಿಕೆಗೆ ತೆರಳಿದರು. ಚುನಾವಣೋತ್ತರ ಹಿಂಸಾಚಾರ ಹಾಗೂ ಹೊಸ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆಯ ವಿರುದ್ಧ ಪ್ರತಿಭಟಿಸಿದ ಅವರು, ಈ ಕ್ರಮಗಳಿಂದ ಅನೇಕ ಬಡ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
"ಇಂದಿನ ಪ್ರತಿಭಟನೆ ಜೀವ ಮತ್ತು ಜೀವನೋಪಾಯವನ್ನು ಉಳಿಸುವುದಕ್ಕಾಗಿ. ನಿಮ್ಮ ಉತ್ತಮ ದಿನಗಳಲ್ಲಿ ಇರದಿದ್ದರೂ, ಸಂಕಷ್ಟದ ಸಮಯದಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ," ಎಂದು ಅವರು ಹೇಳಿದರು.
ಸೋಮವಾರ ರಾಣಿ ರಶ್ಮೋನಿ ಅವೆನ್ಯೂನಲ್ಲಿ ಪ್ರತಿಭಟನೆ ನಡೆಸಲು ತಮ್ಮ ಪಕ್ಷಕ್ಕೆ ಅನುಮತಿ ನೀಡದ ಪೊಲೀಸರ ಕ್ರಮವನ್ನು ಟೀಕಿಸಿದ ಮಮತಾ, "ಇಲ್ಲಿಯೂ ಧ್ವನಿವರ್ಧಕಗಳನ್ನು ಬಳಸಲು ನಮಗೆ ಅನುಮತಿ ನೀಡಲಿಲ್ಲ. ನಾನು ಎಲ್ಲಿ ಸಾಧ್ಯವೋ ಅಲ್ಲಿ ಕುಳಿತುಕೊಳ್ಳುತ್ತೇನೆ. ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವುದನ್ನು ಅವರು ತಡೆಯಲು ಸಾಧ್ಯವಾಯಿತೇ? ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮುಂದೆ ನಾನು ಪ್ರಮಾಣ ಮಾಡಿದ್ದೇನೆ. ಈ ದಬ್ಬಾಳಿಕೆ ಮುಂದುವರಿಯುವವರೆಗೂ ನಾನು ಅದರ ವಿರುದ್ಧ ಹೋರಾಡುತ್ತೇನೆ," ಎಂದು ಹೇಳಿದರು.
ಪ್ರತಿಭಟನಾ ಸ್ಥಳದಲ್ಲಿ ಶೋಭಂದೇಬ್ ಚಟ್ಟೋಪಾಧ್ಯಾಯ, ಮದನ್ ಮಿತ್ರಾ, ನಯನಾ ಬಂದ್ಯೋಪಾಧ್ಯಾಯ, ಕಲ್ಯಾಣ್ ಬ್ಯಾನರ್ಜಿ, ಚಂದ್ರಿಮಾ ಭಟ್ಟಾಚಾರ್ಯ ಮತ್ತು ಕುನಾಲ್ ಘೋಷ್ ಸೇರಿದಂತೆ ಹಲವು ಟಿಎಂಸಿ ನಾಯಕರು ಅವರೊಂದಿಗೆ ಉಪಸ್ಥಿತರಿದ್ದರು.
ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವೇದಿಕೆಗೆ ತಲುಪಲು ತಾವು ಸ್ವತಃ ಬ್ಯಾರಿಕೇಡ್ಗಳನ್ನು ತೆರವುಗೊಳಿಸಬೇಕಾಯಿತು ಎಂದು ಮಮತಾ ಆರೋಪಿಸಿದರು. ಪಕ್ಷದ ಕಾರ್ಯಕರ್ತರನ್ನು ಒಳಗೆ ಪ್ರವೇಶಿಸದಂತೆ ತಡೆಯಲು ಪೊಲೀಸರು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಅವರು, "ಅವರನ್ನು ಒಳಗೆ ಬಿಡಿ. ಇಲ್ಲದಿದ್ದರೆ ನಾವು ಲಾಲ್ಬಜಾರ್ ಅನ್ನು ಸುತ್ತುವರಿಯುತ್ತೇವೆ," ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.
ಅಲ್ಲದೆ "ನಾನು ಪೊಲೀಸರನ್ನು ದೂಷಿಸುತ್ತಿಲ್ಲ. ಅವರಿಗೆ ಮೇಲಿಂದ ಬರುವ ಆದೇಶವನ್ನು ಅವರು ಪಾಲಿಸುತ್ತಾರೆ," ಎಂದು ಅವರು ಹೇಳಿದರು.
ಶನಿವಾರ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಯ ವಿಷಯವನ್ನೂ ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ, "ಅದು ತುಂಬಾ ಕಿರಿದಾದ ರಸ್ತೆ ಆಗಿತ್ತು. ಅವರು ಹೆಲ್ಮೆಟ್ ಧರಿಸಿರದಿದ್ದರೆ, ಎಸೆದ ಕಲ್ಲು ನೇರವಾಗಿ ಅವರ ತಲೆಗೆ ಬಡಿಯುತ್ತಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ, ಆಸ್ಪತ್ರೆ ಅಧಿಕಾರಿಗಳು ಸಿಇಒ ಅವರ ಅನುಮತಿ ಕೇಳಿದರು. ಪೊಲೀಸರು ಅವರಿಗೆ ಬೆದರಿಕೆ ಹಾಕಿದರು," ಎಂದು ಆರೋಪಿಸಿದರು.
Advertisement