

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒಳಗಿನ ಆಂತರಿಕ ದಂಗೆಗೆ ಸಂಬಂಧಿಸಿದ ಕಳವಳದ ನಡುವೆ, ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ಮಂಗಳವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪಕ್ಷದೊಳಗಿನ ಭಿನ್ನಮತೀಯ ಧ್ವನಿಗಳ ವಿರುದ್ಧ ಕಿಡಿಕಾರಿದ್ದಾರೆ. ಆಡಳಿತ ಪಕ್ಷವು ಕೇಂದ್ರದ ತನಿಖಾ ಸಂಸ್ಥೆಗಳನ್ನು ಹೊಂದಿದೆ. ಆದರೆ, ಟಿಎಂಸಿಯು 'ಮಾ, ಮಾತಿ, ಮಾನುಷ್' ಮತ್ತು ಬಂಗಾಳದ ಜನರನ್ನು ಹೊಂದಿದೆ ಎಂದರು.
ಬ್ಯಾನರ್ಜಿ ಮತ್ತು ಕೀರ್ತಿ ಆಜಾದ್ ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬ್ಯಾನರ್ಜಿ ಪಕ್ಷದ ಸಿದ್ಧಾಂತಕ್ಕೆ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದರೆ, ಆಜಾದ್ ರೆಬೆಲ್ ನಾಯಕರ ಮೇಲೆ ವಾಗ್ದಾಳಿ ನಡೆಸಿದರು.
ಪಕ್ಷದಲ್ಲಿನ ಬಂಡಾಯದ ವಿಷಯದ ಕುರಿತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, 'ನೀವು (ಬಿಜೆಪಿ) ಮುಖ್ಯಮಂತ್ರಿ, ಇಡಿ, ಸಿಬಿಐ ಮತ್ತು ಇತರ ಅಧಿಕಾರಗಳನ್ನು ಹೊಂದಿದ್ದೀರಿ. ಆದರೆ, ನನಗೆ 'ಮಾ, ಮಾತಿ, ಮಾನುಷ್', ನನ್ನ ಪಕ್ಷ, ಪಕ್ಷದ ಕಾರ್ಯಕರ್ತರು ಮತ್ತು ಪಶ್ಚಿಮ ಬಂಗಾಳದ ಜನರು ಇದ್ದಾರೆ' ಎಂದು ಹೇಳಿದರು.
ಈಮಧ್ಯೆ, ಕೀರ್ತಿ ಆಜಾದ್ ಮಾತನಾಡಿ, 'ನಮ್ಮ 29 ನಾಯಕರು 'ಮಾ, ಮಾತಿ ಮತ್ತು ಮಾನುಷ್' ಹೆಸರಿನಲ್ಲಿ ಗೆದ್ದರು ಮತ್ತು ಸಂಸದರಾದರು. ಈ ದೇಶದ್ರೋಹಿಗಳಿಂದ ನಾನು ತಿಳಿದುಕೊಳ್ಳಲು ಬಯಸುತ್ತೇನೆ - ಚುನಾವಣೆಯ ನಂತರ ನೀವು ನಿಮ್ಮ ಕಷ್ಟಗಳ ಬಗ್ಗೆ ಏಕೆ ಮಾತನಾಡಿದ್ದೀರಿ, ಅದಕ್ಕೂ ಮೊದಲು ಏಕೆ ಮಾತನಾಡಲಿಲ್ಲ? ಸುಖೇಂದು ಶೇಖರ್ ರಾಯ್ ಅವರಿಗೆ ರಾಜೀನಾಮೆ ನೀಡುವ ರಾಜಕೀಯ ನೈತಿಕತೆಯಾದರೂ ಇತ್ತು. ನಿಮಗೂ ರಾಜಕೀಯ ನೈತಿಕತೆ ಇದ್ದರೆ, ನೀವೆಲ್ಲರೂ ರಾಜೀನಾಮೆ ನೀಡಿ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿ' ಎಂದು ರೆಬೆಲ್ ನಾಯಕರಿಗೆ ಸವಾಲೆಸೆದರು.
ಮಮತಾ ಬ್ಯಾನರ್ಜಿ ಅವರೊಂದಿಗೆ ಸಮಸ್ಯೆ ಹೊಂದಿರುವವರು 'ದೇಶದ್ರೋಹಿಗಳು'. ಅಂತಹವರು ಚುನಾವಣೆಗೆ ಮೊದಲೇ ಏಕೆ ರಾಜೀನಾಮೆ ನೀಡಲಿಲ್ಲ. ಅವರು ಇನ್ನೂ ಸಂಖ್ಯೆಗಳನ್ನು ಬಹಿರಂಗಪಡಿಸಿಲ್ಲ ಮತ್ತು ಸ್ಪೀಕರ್ಗೆ ಸಲ್ಲಿಸಿದ ಪತ್ರವನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ. ಯಾರಾದರೂ ಬಿಜೆಪಿಗೆ ಹೋಗಲು ಬಯಸಿದರೆ, ಅವರು ಹಾಗೆ ಮಾಡಲು ಸ್ವತಂತ್ರರು ಎಂದು ಟೀಕಿಸಿದರು.
'ಉದರ್ ಕೆ ಸಿಂಧೂರ್ ಕೋ ಬಿಜೆಪಿ ನೆ ಅಪ್ನೆ ಮಾಂಗ್ ಮೆ ಲಗಾ ಲಿಯಾ'. ಟಿಎಂಸಿ ಚುನಾವಣೆಯಲ್ಲಿ ಸೋತಿಲ್ಲ ಆದರೆ ಉದ್ದೇಶಪೂರ್ವಕವಾಗಿ ಸೋಲಿಸಲಾಗಿದೆ. 2029ರಲ್ಲಿ ಬಂಗಾಳ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ವನಾಶವಾಗಲಿದೆ. ಬಿಜೆಪಿ ಸೇರುವುದು ಸರಿ, ಆದರೆ ಟಿಎಂಸಿ ಹೆಸರನ್ನು ಬಳಸಬಾರದು ಎಂದು ಕಿಡಿಕಾರಿದರು.
ಇಂದು ಮುಂಜಾನೆ, ಟಿಎಂಸಿಯ 20 ಸದಸ್ಯರ 'ಪ್ರತ್ಯೇಕ ಗುಂಪು' ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಗೆ ಬೆಂಬಲ ನೀಡಲಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಪೋಸ್ಟ್ ಅನ್ನು ತಳ್ಳಿಹಾಕಿದ್ದರು. ಇದು ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊರಡಿಸಿದ 'ನಕಲಿ ಮತ್ತು ಕಟ್ಟುಕಥೆ'. ಪಕ್ಷದೊಳಗೆ ಬಿರುಕು ಮೂಡಿಸುವ ಪ್ರಯತ್ನ ವಿಫಲವಾಗಿದೆ ಮತ್ತು ಪಟ್ಟಿಯಲ್ಲಿ ಉಲ್ಲೇಖಿಸಲಾದ ಹಲವಾರು ಸಂಸದರು ಅಂತಹ ಯಾವುದೇ ದಾಖಲೆಗಳಿಗೆ ಸಹಿ ಹಾಕಿಲ್ಲ ಎಂದು ಕೀರ್ತಿ ಆಜಾದ್ ಕರೆದಿದ್ದರು.
'ಅಮಿತ್ ಶಾರಿಂದ ಯೂಸುಫ್ ಪಠಾಣ್ ಸಂಪರ್ಕ'
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
'ನಾನು ನಿನ್ನೆ ಯೂಸುಫ್ ಪಠಾಣ್ ಅವರೊಂದಿಗೆ ಮಾತನಾಡಿದೆ. ಅವರು ಬರೋಡಾದಲ್ಲಿದ್ದರು. ಅಮಿತ್ ಶಾ ಅವರಿಗೆ ಕರೆ ಮಾಡಿದ್ದಾರೆ ಮತ್ತು ಅವರನ್ನು ಭೇಟಿ ಮಾಡಲು ತಾವು ದೆಹಲಿಗೆ ಬರುತ್ತಿರುವುದಾಗಿ ಹೇಳಿದರು... ಅಮಿತ್ ಶಾ ಪಕ್ಷ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಅದಕ್ಕೆ ಅವರೇ ಸೂಕ್ತ ವ್ಯಕ್ತಿ' ಎಂದು ಅವರು ಆರೋಪಿಸಿದರು.
'ವಿರೋಧ ಪಕ್ಷಗಳನ್ನು ದುರ್ಬಲಗೊಳಿಸುವ ವಿಶಾಲ ಪ್ರಯತ್ನ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವಿರಬೇಕು. ವಿರೋಧ ಪಕ್ಷದ ಸಂಸದರನ್ನು ಖರೀದಿಸುವ ಮೂಲಕ ಅವರು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ. ಬೆಂಬಲಿಸುವವರಿಗೆ ಅನುಕೂಲಗಳು ಸಿಗುತ್ತವೆ. ಅವರಿಗೆ ಪೊಲೀಸ್ ಅಧಿಕಾರ ನೀಡಲಾಗುವುದು' ಎಂದು ಬ್ಯಾನರ್ಜಿ ಹೇಳಿದ್ದಾರೆ.
20 ಸಂಸದರ ಬೆಂಬಲವನ್ನು ಹೊಂದಿದ್ದೇವೆ ಎಂಬ ಬಂಡಾಯ ಬಣದ ಹೇಳಿಕೆಯನ್ನು ಪ್ರಶ್ನಿಸಿದ ಬ್ಯಾನರ್ಜಿ, 'ಅವರು ಪತ್ರವನ್ನು ಏಕೆ ತೋರಿಸುತ್ತಿಲ್ಲ? ಆ 20 ಸಂಸದರು ಯಾರು ಎಂದು ನಿಮಗೆ ತಿಳಿದಿದೆಯೇ?' ಎಂದು ಅವರು ಕೇಳಿದರು.
ಪಕ್ಷಾಂತರಗಳಿಂದ ಪಕ್ಷಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ನಾಯಕಿ ಮಮತಾ. ಚಿಹ್ನೆ ಟಿಎಂಸಿ ಚಿಹ್ನೆ. ಅವರು 20ಕ್ಕಿಂತ ಹೆಚ್ಚು ಇದ್ದರೂ ಅದು ಸಮಸ್ಯೆಯಲ್ಲ. ಪಕ್ಷಾಂತರಗಳ ಹೊರತಾಗಿಯೂ ಪಕ್ಷವು ತನ್ನ ರಾಜಕೀಯ ಹೋರಾಟವನ್ನು ಮುಂದುವರಿಸುತ್ತದೆ. ಟಿಎಂಸಿ ಕಾರ್ಯಕರ್ತರು ನಾಯಕತ್ವದ ಹಿಂದೆ ದೃಢವಾಗಿ ಉಳಿದಿದ್ದಾರೆ ಎಂದು ಹೇಳಿದರು.