

ನವದೆಹಲಿ: ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ಭಿನ್ನಮತ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಈ ಹಿಂದೆ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರೇ ಮುಂದಿನ ಪ್ರಧಾನಿ ಎಂದು ಪರಾಕು ಹೇಳುತ್ತಿದ್ದ ಟಿಎಂಸಿ ಸಂಸದೆ ಸಾಯೋನಿ ಘೋಷ್ ಅವರು ಈಗ ದೀದಿಗೇ ಉಲ್ಟಾ ಹೊಡೆಯುತ್ತಿದ್ದು, ಅಚ್ಚರಿಯ ರೀತಿಯಲ್ಲಿ ಬಂಡಾಯ ಬಣದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿಸ್ಪರ್ಧಿಗಳ ವಿರುದ್ಧ ತೀಕ್ಷ್ಣವಾದ ಟೀಕೆ ಮತ್ತು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಬಗ್ಗೆ ಅತ್ಯುತ್ತಮ ಹೇಳಿಕೆ ನೀಡುವುದಕ್ಕೆ ಹೆಸರುವಾಸಿಯಾದ ಘೋಷ್, ಬಂಡಾಯ ಬಣ ಸೇರಿರುವ ಬಗ್ಗೆ ಇನ್ನೂ ಅಧಿಕೃತವಾಗಿ ಮಾತನಾಡಿಲ್ಲ. ಆದರೆ ಮೂಲಗಳ ಪ್ರಕಾರ ತೃಣಮೂಲ ಪಕ್ಷದ ಆರಂಭದಿಂದಲೂ ಇರುವ ಅತಿದೊಡ್ಡ ಬಿಕ್ಕಟ್ಟಿನ ನಡುವೆ ಅವರು ಈಗಾಗಲೇ ಬಂಡಾಯ ಬಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಒಂದು ತಿಂಗಳ ನಂತರ ಪಕ್ಷವನ್ನು ಧಿಕ್ಕರಿಸಿ ಸಂಸತ್ತಿನಲ್ಲಿ ಪ್ರತ್ಯೇಕ ಬಣವನ್ನು ರಚಿಸಿ, ಎನ್ ಡಿಗೆ ಬೆಂಬಲ ಘೋಷಿಸಿದ 20 ಸಂಸದರಲ್ಲಿ ಜಾದವ್ಪುರ ಸಂಸದೆ ಘೋಷ್ ಸಹ ಒಬ್ಬರಾಗಿದ್ದಾರೆ.
ಲೋಕಸಭಾ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ, 20 ಸಂಸದರು ಕಳೆದ ಸೋಮವಾರ ಎನ್ಡಿಎಗೆ ಬೆಂಬಲ ನೀಡುವುದಾಗಿ ಸ್ಪೀಕರ್ಗೆ ಪತ್ರ ಬರೆದಿದ್ದರು.
Advertisement