

ಮುಂಬೈ: ವಾರಾಂತ್ಯದ ಪ್ರವಾಸಕ್ಕೆ ತೆರಳಿದ್ದ 25 ವರ್ಷದ ಯುವಕನೋರ್ವ ಈಜುಕೊಳದಲ್ಲಿ ಮುಳುಗಿ ದುರಂತ ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಕೊಂಕಣ ಕರಾವಳಿಗೆ ವಾರಾಂತ್ಯದ ಪ್ರವಾಸಕ್ಕೆ ತೆರಳಿದ್ದ ಕೊಲ್ಹಾಪುರದ ಸ್ನೇಹಿತರ ತಂಡಕ್ಕೆ ಈ ದುರ್ಘಟನೆ ಎದುರಾಗಿದ್ದು, ಸಿಂಧುದುರ್ಗ ಜಿಲ್ಲೆಯ ಮಾಲವಣ್ನಲ್ಲಿರುವ ರೆಸಾರ್ಟ್ನ ಈಜುಕೊಳದಲ್ಲಿ 25 ವರ್ಷದ ಯುವಕ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಕಸ್ಬಾ ಸಂಗಾಂವ್ ಗ್ರಾಮದ ನಿವಾಸಿ ಶ್ರೇಣಿಕ್ ಮಿಲಿಂದ್ ತಕಲೆ (25) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ತಕಲೆ ತಮ್ಮ ಒಂಬತ್ತು ಸ್ನೇಹಿತರೊಂದಿಗೆ ಸುಮಾರು 500 ಕಿ.ಮೀ. ದೂರದ ಮಾಲವಣ್ಗೆ ಪ್ರವಾಸಕ್ಕೆ ತೆರಳಿದ್ದರು.
ಜೂನ್ 20ರಂದು ಸಂಜೆ 4ರಿಂದ 5 ಗಂಟೆಯ ನಡುವೆ ಅವರು ಕರಾವಳಿ ಪಟ್ಟಣ ತಲುಪಿ, ಮಾಲವಣಿ ಪಾಹುಂಚಾರ್ ರೆಸ್ಟೋರೆಂಟ್ ಮತ್ತು ರೆಸಾರ್ಟ್ ಎಂಬ ಹೋಂಸ್ಟೇ ಮಾದರಿಯ ವಸತಿ ಕೇಂದ್ರದಲ್ಲಿ ತಂಗಿದ್ದರು.
ಜೂನ್ 21ರಂದು ಮಧ್ಯಾಹ್ನ ಊಟದ ಬಳಿಕ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಈಜುಕೊಳದಲ್ಲಿ ಈಜಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆ ವೇಳೆ ತಕಲೆ ರೆಸಾರ್ಟ್ನ ಸುಮಾರು 4ರಿಂದ 4.5 ಅಡಿ ಆಳದ ಈಜುಕೊಳಕ್ಕೆ ಜಿಗಿದಿದ್ದರು. ಅವರ ಸ್ನೇಹಿತರು ಈಜುಕೊಳದಲ್ಲೇ ಆಟವಾಡುತ್ತಾ ಸಂಗೀತ ಆಲಿಸುತ್ತಿದ್ದರು. ಆದರೆ ನೀರಿಗೆ ಬಿದ್ದ ತಕಲೆ ಬಹಳ ಹೊತ್ತಾದರೂ ನೀರಿನಿಂದ ಮೇಲಕ್ಕೆ ಬಾರದಿದ್ದರಿಂದ ಸ್ನೇಹಿತರಿಗೆ ಅನುಮಾನ ಮೂಡಿತು. ತಕ್ಷಣವೇ ಅವರನ್ನು ನೀರಿನಿಂದ ಹೊರತೆಗೆದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು.
ತಕ್ಷಣ ಅವರನ್ನು ಮಾಲವಣ್ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಪರೀಕ್ಷಿಸಿ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಪ್ರಾಥಮಿಕ ವೈದ್ಯಕೀಯ ಮಾಹಿತಿಯ ಪ್ರಕಾರ, ನೀರಿನಲ್ಲಿ ಮುಳುಗಿದ ಪರಿಣಾಮ ಉಸಿರುಗಟ್ಟಿ (Asphyxiation due to submersion) ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ ಯಾವುದೇ ದುಷ್ಕೃತ್ಯದ ಸುಳಿವು ಇದುವರೆಗೆ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆಕಸ್ಮಿಕ ಮರಣ ಪ್ರಕರಣ (ADR) ದಾಖಲಿಸಿಕೊಂಡಿರುವ ಪೊಲೀಸರು, ಮುಳುಗಲು ಕಾರಣವಾದ ನಿಖರ ಸಂದರ್ಭಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವೈದ್ಯಕೀಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ದೃಢಪಡಿಸಲಾಗುವುದು.
ವಿಡಿಯೋ ವೈರಲ್
ಇನ್ನು ತಕಲೆ ಈಜುಕೊಳಕ್ಕೆ ಧುಮುಕಿದ ಕೊನೆಯ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದ್ದು, ಸ್ನೇಹಿತ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದರೂ ಅದರ ಪರಿವೇ ಇಲ್ಲದೆ ಆತನ ಸ್ನೇಹಿತರು ಮೋಜುಮಸ್ತಿಯಲ್ಲಿ ತೊಡಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.