

ನವದೆಹಲಿ: ಅಸ್ಸಾಂ ಪೊಲೀಸರು ದಾಖಲಿಸಿದ್ದ ಮಾನನಷ್ಟ ಮತ್ತು ನಕಲಿ ದಾಖಲೆಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಗುವಾಹಟಿ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರಿದ್ದ ಪೀಠ, ಪ್ರಕರಣದ ಹಿನ್ನೆಲೆ ಪರಿಶೀಲಿಸಿದಾಗ ರಾಜಕೀಯ ಪೈಪೋಟಿಯ ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಅಭಿಪ್ರಾಯಪಟ್ಟಿತು.
ಈ ಹಂತದಲ್ಲಿ ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಪಾಡುವುದು ಮುಖ್ಯ ಎಂದು ಹೇಳಿ, ಖೇರಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.
ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಖೇರಾ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಕುರಿತು ಅವರು ಗಂಭೀರ ಆರೋಪಗಳನ್ನು ಮಾಡಿದ್ದರು.
ಬಹು ಪಾಸ್ಪೋರ್ಟ್ ಹೊಂದಿರುವುದು ಹಾಗೂ ವಿದೇಶಗಳಲ್ಲಿ ಘೋಷಿಸದ ಆಸ್ತಿ ಹೊಂದಿರುವ ಬಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳ ಆಧಾರವಾಗಿ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಏಪ್ರಿಲ್ 7ರಂದು ಪೊಲೀಸರು ಖೇರಾ ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದರೂ ಅವರು ಅಲ್ಲಿ ಇರಲಿಲ್ಲ. ಬಳಿಕ ಖೇರಾ ಅವರು ನಂತರ ಅವರು ತೆಲಂಗಾಣ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 10 ರಂದು ಜಾಮೀನು ದೊರೆತಿತ್ತು. ಬಳಿಕ ಪ್ರಕರಣದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದರು.
ಏಪ್ರಿಲ್ 15 ರಂದು, ಸುಪ್ರೀಂ ಕೋರ್ಟ್ ಅಸ್ಸಾಂ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ತೆಲಂಗಾಣ ಹೈಕೋರ್ಟ್ ಆದೇಶವನ್ನು ತಡೆಹಿಡಿಯಿತು ಮತ್ತು ನಂತರ ಏಪ್ರಿಲ್ 17 ರಂದು ನಿರೀಕ್ಷಣಾ ಜಾಮೀನು ಅವಧಿಯನ್ನು ವಿಸ್ತರಿಸಲು ನಿರಾಕರಿಸಿತು, ಅಲ್ಲದೆ, ಗುವಾಹಟಿ ಹೈಕೋರ್ಟ್ಗೆ ಸಂಪರ್ಕಿಸುವಂತೆ ನಿರ್ದೇಶಿಸಿತು.
ನಂತರ ಖೇರಾ ಅವರು ಗುವಾಹಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು, ಎಫ್ಐಆರ್ ರಾಜಕೀಯ ದ್ವೇಷದ ಪರಿಣಾಮವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ನನ್ನ ಹೇಳಿಕೆಗಳನ್ನು ಸಾರ್ವಜನಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಮಾಡಲಾಗಿದೆ ಎಂದು ವಾದಿಸಿದರು. ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲುಆರೋಪಗಳನ್ನು ಬಳಸಲಾಗಿದೆ ಎಂದು ಹೇಳಿದರು.
ಆದಾಗ್ಯೂ, ಏಪ್ರಿಲ್ 24 ರಂದು, ಗುವಾಹಟಿ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತು, ಅಲ್ಲದೆ, ಕಸ್ಟಡಿ ವಿಚಾರಣೆ ಅಗತ್ಯ ಎಂದು ನಿರ್ದೇಶಿಸಿತು.
ಮುಖ್ಯಮಂತ್ರಿಗಳು ರಾಜಕೀಯ ಟೀಕೆಗಳ ಅಡಿಯಲ್ಲಿ ಬರಬಹುದಾದರೂ, ಸಾರ್ವಜನಿಕ ಹುದ್ದೆಯನ್ನು ಹೊಂದಿರದ ವ್ಯಕ್ತಿಯನ್ನು ವಿವಾದಕ್ಕೆ ಎಳೆದು ತರುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯವು ತಿಳಿಸಿತು. ಇದರ ಬಳಿ ಖೇರಾ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಇದೀಗ ಸುಪ್ರೀಂಕೋರ್ಟ್, ಗುವಾಹಟಿ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ, ಖೇರಾ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Advertisement