

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಕಾರು ಚಾಲಕನ ಪುತ್ರನಿಗೆ ಅದೃಷ್ಟ ಖುಲಾಯಿಸಿದೆ.
ನಟ-ರಾಜಕಾರಣಿ ವಿಜಯ್ ಅವರು ತಮ್ಮ ಕಾರು ಚಾಲಕನ ಪುತ್ರ ಆರ್ ಶಬರಿನಾಥನ್ ಅವರಿಗೆ ಟಿವಿಕೆ ಟಿಕೆಟ್ ನೀಡಿ, ವಿರುಗಂಬಕ್ಕಂ ಕ್ಷೇತ್ರದಿಂದ ಕಣಕ್ಕೀಳಿಸಿ ಗೆಲ್ಲಿಸಿಕೊಂಡು ಬಂದಿದ್ದಾರೆ.
ಶಬರಿನಾಥನ್ ಅವರು ಗೆಲುವು ಸಾಧಿಸುತ್ತಿದ್ದಂತೆ, ತಮಿಳಗ ವೆಟ್ರಿ ಕಳಗಂ(ಟಿವಿಕೆ) ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸಿಕೊಂಡ ನಂತರ ವೇದಿಕೆಯಲ್ಲೇ ವಿಜಯ್ ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಭಾವನಾತ್ಮಕ ಮತ್ತು ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ದಳಪತಿ ವಿಜಯ್ ಅವರ ಆಪ್ತ ಸಹಾಯಕನಾಗಿ ನೇಮಕಗೊಳ್ಳುವುದಕ್ಕೆ ಮುನ್ನ ಹಲವು ವರ್ಷಗಳ ಕಾಲ ಕಾರು ಚಾಲಕನಾಗಿ ಕೆಲಸ ಮಾಡಿದ್ದ ರಾಜೇಂದ್ರನ್ ಅವರ ಪುತ್ರ ಶಬರಿನಾಥನ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.
ವಿರುಗಂಬಕ್ಕಂ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಪ್ರಭಾಕರನ್ ರಾಜ್ ವಿರುದ್ಧ ಶಬರಿನಾಥನ್ ಅವರು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಕಣ್ಣೀರಿಟ್ಟಿದ್ದ ಶಬರಿನಾಥನ್
ದಳಪತಿ ವಿಜಯ್ ಎಲ್ಲಾ 234 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದಾಗಲೇ ವಿರುಗಂಬಕ್ಕಂ ಕ್ಷೇತ್ರಕ್ಕೆ ಶಬರಿನಾಥನ್ ಹೆಸರು ಘೋಷಿಸಿದ್ದರು. ಈ ವೇಳೆ ಅಪ್ಪ – ಮಕ್ಕಳಿಬ್ಬರೂ ವೇದಿಕೆಯಲ್ಲೇ ವಿಜಯ್ ಅವರನ್ನ ಅಪ್ಪಿಕೊಂಡು ಕಣ್ಣೀರಿಟ್ಟಿದ್ದರು. ವಿಜಯ್ ಪಾದಗಳನ್ನ ಮುಟ್ಟಿ ಶಬರಿನಾಥನ್ ಭಾವುಕರಾಗಿದ್ದರು.
Advertisement