

ಚೆನ್ನೈ: ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಕಾಣಿಸಿಕೊಂಡಿದೆ.
ಡ್ರಾವಿಡ ರಾಜಕೀಯದಲ್ಲಿ ಬೇರೂರಿರುವ ಎಐಎಡಿಎಂಕೆ ಮತ್ತು ಟಿವಿಕೆ ಪಕ್ಷಗಳು ಕೂಡಾ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ಸರ್ಕಾರ ರಚನೆ, ಮೈತ್ರಿ ರಾಜಕಾರಣ ಮತ್ತು ಒಳ ಕಲಹಗಳ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಆದರೆ ಎಐಎಡಿಎಂಕೆಯಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ಕಾಂಗ್ರೆಸ್ ಮತ್ತು ಎಐಎಡಿಎಂಕೆಯ ಒಂದು ವಿಭಾಗವು ವಿಜಯ್ ನೇತೃತ್ವದ ಟಿವಿಕೆಗೆ ಸರ್ಕಾರ ರಚಿಸುವಲ್ಲಿ ಬಾಹ್ಯ ಬೆಂಬಲ ನೀಡಲು ಇಚ್ಛೆ ವ್ಯಕ್ತಪಡಿಸುತ್ತಿರುವುದರಿಂದ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ಅಸಮಾಧಾನಗೊಂಡಿವೆ.
ಟಿವಿಕೆಯ ರಾಜಕೀಯ ನಿರೀಕ್ಷೆಗಳು ಎರಡೂ ದ್ರಾವಿಡ ಪ್ರಮುಖ ಪಕ್ಷಗಳ ನೇತೃತ್ವದ ಮೈತ್ರಿಕೂಟಗಳ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತವೆ, ಇದು ವಿಭಜನೆಯ ಊಹಾಪೋಹಗಳಿಗೆ ಕಾರಣವಾಗಿದೆ. ಲಾಲ್ಗುಡಿಯಿಂದ ಎಐಎಡಿಎಂಕೆ ಟಿಕೆಟ್ನಲ್ಲಿ ಗೆದ್ದ ಲೀಮಾ ರೋಸ್ ಮಾರ್ಟಿನ್, ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ವಿಲ್ಲಿವಕ್ಕಂನಿಂದ ಗೆದ್ದ ಅವರ ಅಳಿಯ ಆಧವ್ ಅರ್ಜುನ ಟಿವಿಕೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಮೇ 5 ರಂದು, ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರೊಂದಿಗಿನ ಸಭೆಯಿಂದ ಹೊರಬಂದ ಮಾಜಿ ಎಐಎಡಿಎಂಕೆ ಸಚಿವ ಓ ಎಸ್ ಮಣಿಯನ್, ಎಐಎಡಿಎಂಕೆ ಸರ್ಕಾರ ರಚಿಸುವಲ್ಲಿ ಟಿವಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ 47 ಸ್ಥಾನಗಳೊಂದಿಗೆ ಮೂರನೇ ಸ್ಥಾನ ಪಡೆದ ಎಐಎಡಿಎಂಕೆ, ಬುಧವಾರ ನಡೆಯಬೇಕಿದ್ದ ತನ್ನ ಶಾಸಕರ ಸಭೆಯನ್ನು ರದ್ದುಗೊಳಿಸಿದೆ, ವಿಜಯ್ ಮೇ 7 ರಂದು ಪ್ರಮಾಣವಚನ ಸ್ವೀಕಾರಕ್ಕೆ ಸಜ್ಜಾಗುತ್ತಿದ್ದಂತೆ, ಪೊಲೀಸರು ಅವರ ನಿವಾಸದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.
TVK ಪಕ್ಷವು ತನ್ನ ಚುನಾಯಿತ ಶಾಸಕರನ್ನು ಮಾಮಲ್ಲಪುರಂನ ರೆಸಾರ್ಟ್ನಲ್ಲಿ ಇರಿಸಿದ್ದು ಏಕಕಾಲದಲ್ಲಿ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಜೊತೆ ಮಾತುಕತೆಯಲ್ಲಿ ತೊಡಗಿದೆ ಎಂದು ಮೂಲವೊಂದು ತಿಳಿಸಿದೆ.
59 ಸ್ಥಾನಗಳನ್ನು ಸ್ವಂತವಾಗಿ ಗೆದ್ದ ಡಿಎಂಕೆ, ಮೇ 7 ರಂದು ಸಂಜೆ ತನ್ನ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯನ್ನು ಕರೆದಿದೆ. ಚೆಪಾಕ್-ತಿರುವಲ್ಲಿಕೇನಿಯಿಂದ ಗೆದ್ದ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರನ್ನು ತನ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಪಕ್ಷ ಆಯ್ಕೆ ಮಾಡುವ ಸಾಧ್ಯತೆಯಿದೆ.
ಟಿವಿಕೆ ಮುಖ್ಯಸ್ಥ ವಿಜಯ್ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ಕೋರಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ. ವಿಜಯ್ ಅವರು ಸರ್ಕಾರ ರಚಿಸಲು ಕಾಂಗ್ರೆಸ್ನ ಬೆಂಬಲ ಕೋರಿದ್ದಾರೆ. ಬಿಜೆಪಿ ಅಥವಾ ಅದರ ಪರವಾಗಿರುವ ಯಾವುದೇ ಪಕ್ಷಗಳು ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
ಅದರಂತೆ, ಚುನಾವಣಾ ತೀರ್ಪಿನಲ್ಲಿ ಪ್ರತಿಫಲಿಸಿರುವ ರಾಜ್ಯದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ವಿಜಯ್ ಅವರ ವಿನಂತಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ತಮಿಳುನಾಡು ಕಾಂಗ್ರೆಸ್ ಸಮಿತಿಗೆ ಹೈಕಮಾಂಡ್ ಸೂಚಿಸಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ವೇಣುಗೋಪಾಲ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ, ‘ಕಾಂಗ್ರೆಸ್ ‘ಬೆನ್ನಿಗೆ ಇರಿಯುವವರಂತೆ’ ವರ್ತಿಸುತ್ತಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಕೇಂದ್ರ ನಾಯಕತ್ವವೇ ತೆಗೆದುಕೊಳ್ಳುವಾಗ ಈ ನಿರ್ಧಾರವನ್ನು ಮಾತ್ರ ಸ್ಥಳೀಯ ಘಟಕಕ್ಕೆ ಬಿಟ್ಟಿದ್ದು ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಬೆನ್ನಿಗೆ ಇರಿದವರು’ (Backstabbers) ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ಸಿಗರ ವಿರುದ್ಧ ಅಣ್ಣಾದೊರೈ ಅಸಮಾಧಾನ ಹೊರಹಾಕಿದ್ದಾರೆ. ಮೈತ್ರಿ ಪಾಲುದಾರರ ನಡುವೆ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗಿರುವುದು ಇದೇ ಮೊದಲು. 4 ಸ್ಥಾನಗಳನ್ನು ಗೆದ್ದ ಪಿಎಂಕೆ ಮತ್ತು ಎಐಎಡಿಎಂಕೆಯ ಎರಡೂ ಮಿತ್ರಪಕ್ಷಗಳು ಇನ್ನೂ ತಮ್ಮ ನಿರ್ಧಾರವನ್ನು ಪ್ರಕಟಿಸಿಲ್ಲ.
Advertisement