

ತಿರುವನಂತಪುರಂ: ಕೇರಳ ಸಿಎಂ ಪಟ್ಟದ ರೇಸ್ ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ (K.C.Venugopal) ಅವರಿಗೆ ಮಹತ್ವದ ಉತ್ತೇಜನ ದೊರೆತಿದ್ದು, ಕಾಂಗ್ರೆಸ್ನ 63 ಮಂದಿ ಆಯ್ಕೆಯಾದ ಶಾಸಕರಲ್ಲಿ 47 ಮಂದಿ ಮುಂದಿನ ಕೇರಳ ಮುಖ್ಯಮಂತ್ರಿ ಆಗಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗುರುವಾರ ಎಐಸಿಸಿ ಕೇಂದ್ರ ವೀಕ್ಷಕರೊಂದಿಗೆ ನಡೆದ ವೈಯಕ್ತಿಕ ಸಭೆಗಳಲ್ಲಿ ಈ ಬೆಂಬಲ ವ್ಯಕ್ತವಾಗಿದ್ದು, ಪಕ್ಷದ ಹೈಕಮಾಂಡ್ ಈ ವಾರಾಂತ್ಯದೊಳಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ.
ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ (Sunny Joseph) ಸೇರಿದಂತೆ ಸಂದೀಪ್ ಜಿ ವರಿಯರ್, ಸಜೀವ್ ಜೋಸೆಫ್, ಟಿ ಓ ಮೋಹನ್ ಮತ್ತು ಉಷಾ ವಿಜಯನ್ ಅವರು ವೇಣುಗೋಪಾಲ್ ಅವರ ಹೆಸರನ್ನು ಪ್ರಸ್ತಾಪಿಸಿದ ಶಾಸಕರಲ್ಲಿ ಪ್ರಮುಖರಾಗಿದ್ದರು.
ಮುಖ್ಯಮಂತ್ರಿ ಹುದ್ದೆಯ ಮತ್ತೊಬ್ಬ ಆಕಾಂಕ್ಷಿ ರಮೇಶ್ ಚೆನ್ನಿಟಾಲ (Ramesh Chennithala) ಅವರಿಗೆ ಇದು ದೊಡ್ಡ ಹಿನ್ನಡೆಯಾಗಿದ್ದು, ಅವರ ಆಪ್ತ ಸಹೋದ್ಯೋಗಿ ಐ.ಸಿ. ಬಾಲಕೃಷ್ಣನ್ ಕೂಡ ವೇಣುಗೋಪಾಲ್ ಹಾಗೂ ಚೆನ್ನಿಟ್ಟಾಲ ಇಬ್ಬರಿಗೂ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಹಿಂದಿನ ಪ್ರತಿಪಕ್ಷ ನಾಯಕ ಚೆನ್ನಿಟ್ಟಾಲ ಅವರಿಗೆ ಎಂಟು ಮಂದಿ ಶಾಸಕರ ಬೆಂಬಲ ದೊರೆತಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ (V. D. Satheesan) ಅವರನ್ನು ಜನಪ್ರಿಯ ಆಯ್ಕೆಯೆಂದು ಪರಿಗಣಿಸಲಾಗುತ್ತಿದ್ದರೂ, ಅವರಿಗೆ ಆರು ಮಂದಿಯ ಬೆಂಬಲ ಮಾತ್ರ ಸಿಕ್ಕಿದೆ. ಸತೀಶನ್ ಮತ್ತು ಚೆನ್ನಿಟ್ಟಾಲ ಇಬ್ಬರೂ ವೀಕ್ಷಕರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಆದರೆ ವೇಣುಗೋಪಾಲ್ ಸಭೆಗೆ ಹಾಜರಾಗಿಲ್ಲ ಎನ್ನಲಾಗಿದೆ.
63 ಮಂದಿ ಶಾಸಕರ ಹೊರತಾಗಿ, ಎಐಸಿಸಿ ವೀಕ್ಷಕರಾದ ಅಜಯ್ ಮಕೇನ್ (Ajay Maken) ಮತ್ತು ಅವಿನಾಷ್ ಪಾಂಡೆ (Avinash Pande) ಅವರು ಕಾಂಗ್ರೆಸ್ ಸಂಸದರು ಹಾಗೂ ಹಿರಿಯ ನಾಯಕರೊಂದಿಗೆ ಕೂಡ ಪ್ರತ್ಯೇಕವಾಗಿ ಚರ್ಚಿಸಿ ಅವರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಮೂವರು ಮಾಜಿ ಕೆಪಿಸಿಸಿ ಅಧ್ಯಕ್ಷರು ಸತೀಶನ್ ಅವರಿಗೆ ಬೆಂಬಲ ಸೂಚಿಸಿದರೆ, ಹಲವು ಹಿರಿಯ ನಾಯಕರು ವೇಣುಗೋಪಾಲ್ ಪರ ನಿಂತಿದ್ದಾರೆ.
ದೆಹಲಿಗೆ ಮರಳಿದ ವೀಕ್ಷಕರು
ಈ ಎಲ್ಲ ವರದಿಗಳನ್ನು ಸಂಗ್ರಹಿಸಿರುವ ವೀಕ್ಷಕರು ದೆಹಲಿಗೆ ಮರಳಿದ್ದು, ತಮ್ಮ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಸಲ್ಲಿಸಲಿದ್ದಾರೆ. ಅಗತ್ಯವಿದ್ದಲ್ಲಿ ಸನ್ನಿ ಜೋಸೆಫ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಸತೀಶನ್ ಹಾಗೂ ಚೆನ್ನಿಟ್ಟಾಲ ಅವರನ್ನು ಚರ್ಚೆಗೆ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಕಾಂಗ್ರೆಸ್ ವಿಧಾನಮಂಡಲ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡುವ ಅಧಿಕಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸರ್ವಾನುಮತದಿಂದ ನೀಡಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಶನಿವಾರ ಅಥವಾ ಭಾನುವಾರ ಹೊಸ ಮುಖ್ಯಮಂತ್ರಿ ಹೆಸರನ್ನು ಘೋಷಿಸಲಾಗಬಹುದು.
ಘೋಷಣೆಯ ನಂತರ ಎರಡು ದಿನಗಳೊಳಗೆ ಹೊಸ ಮುಖ್ಯಮಂತ್ರಿ, ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಯುಡಿಎಫ್ ಮೈತ್ರಿ ಪಕ್ಷಗಳ ನಾಯಕರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
Advertisement