

ಬೆಂಗಳೂರು: ದೇಶದ ಕಠಿಣ ಆರ್ಥಿಕ ಪರಿಸ್ಥಿತಿ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕೆಲ ಸಲಹೆಗಳ ವಿಚಾರವಾಗಿ ದೇಶಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕೂಡ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಎಕ್ಸ್ ನಲ್ಲಿ ಈ ಕುರಿತು ಸರಣಿ ಪೋಸ್ಟ್ ಮಾಡಿರುವ ನಟಿ ರಮ್ಯಾ, 'ಸರ್ಕಾರವು ನಾಗರಿಕರಿಗೆ ಇಂಧನ, ಪ್ರವಾಸ, ತಿನಿಸಿನ ಎಣ್ಣೆ ಮತ್ತು ಚಿನ್ನದಂತಹ ವೈಯಕ್ತಿಕ ಖರ್ಚುಗಳನ್ನು ಕಡಿಮೆ ಮಾಡಲು ಹೇಳುತ್ತಿರುವುದು ಆರ್ಥಿಕ ಒತ್ತಡ, ಆಮದುಗಳ ಮೇಲಿನ ಭಾರ ಮತ್ತು ದರ ಏರಿಕೆಯ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ' ಎಂದಿದ್ದಾರೆ.
ಅಂತೆಯೇ, 'ಇದು 2008ರ ಜಾಗತಿಕ ಆರ್ಥಿಕ ಮಂದಿಯ ಸಮಯದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಭಾರತ ತೋರಿಸಿದ್ದ ಆತ್ಮವಿಶ್ವಾಸಕ್ಕೆ ವಿರುದ್ಧವಾಗಿದೆ. ಆ ಸಮಯದಲ್ಲಿ ಜಾಗತಿಕ ಆರ್ಥಿಕ ಕುಸಿತ ಇದ್ದರೂ ಭಾರತ ಹೆಚ್ಚು ಆರ್ಥಿಕವಾಗಿ ಸ್ಥಿರವಾಗಿಯೇ ಕಾಣಿಸಿಕೊಂಡಿತ್ತು. ಮನಮೋಹನ್ ಸಿಂಗ್ ಅವರು ಆರ್ಥಿಕತೆಯನ್ನು ಪ್ರೌಢತೆ ಮತ್ತು ಆತ್ಮವಿಶ್ವಾಸದಿಂದ ನಿರ್ವಹಿಸಿದ್ದರು ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಮತ್ತೊಂದು ಟ್ವೀಟ್ ನಲ್ಲಿ ಇಂದಿರಾಗಾಂಧಿ ಹೆಸರು ಪ್ರಸ್ತಾವನೆ ಕುರಿತೂ ಮಾತನಾಡಿರುವ ನಟಿ ರಮ್ಯಾ, '1967ರಲ್ಲಿ ಇಂದಿರಾಗಾಂಧಿ ಜನರಿಗೆ ಚಿನ್ನ ಖರೀದಿಸಬೇಡಿ ಎಂದು ಹೇಳಿದಾಗ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಕೇವಲ 20 ವರ್ಷಗಳಷ್ಟೇ ಆಗಿತ್ತು.
ಆ ಸಮಯದಲ್ಲಿ ಭಾರತ ಇನ್ನೂ ಬಡ ಮತ್ತು ಅಭಿವೃದ್ಧಿ ಹೊಂದುತ್ತಿದ್ದ ದೇಶವಾಗಿದ್ದು, ಕೊರತೆಗಳು ಮತ್ತು ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿತ್ತು. ಆ ಐತಿಹಾಸಿಕ ಹಿನ್ನೆಲೆಯಲ್ಲಿಯೇ ಅದು ಅರ್ಥಪೂರ್ಣವಾಗಿತ್ತು. ಆದರೆ 2026ರಲ್ಲಿ ಭಾರತ ಒಂದು ಪ್ರಮುಖ ಆರ್ಥಿಕ ಶಕ್ತಿಯ ದೇಶವಾಗಿರುವ ಈ ಹೊತ್ತಿನಲ್ಲೂ ಇದೇ ರೀತಿಯ ಮನವಿಗಳನ್ನು ಮಾಡುವುದು ಆರ್ಥಿಕ ಒತ್ತಡವನ್ನು ಸೂಚಿಸುತ್ತದೆ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ವೈಫಲ್ಯ
ಅಂತೆಯೇ ಇದು ಮೋದಿ ಸರ್ಕಾರದ ವೈಫಲ್ಯ ಎಂದು ಕರೆದಿರುವ ನಟಿ ರಮ್ಯಾ, 'ಹಲವಾರು ವರ್ಷಗಳ ಹಿಂದೆ ಹೊರತಂದ ಸಾವೆರಿನ್ ಗೋಲ್ಡ್ ಬಾಂಡ್ಗಳ (SGB) ಅನೇಕ ಹಂತಗಳು ಈಗ ಮ್ಯಾಚ್ಯೂರಿಟಿಗೆ ಬರುತ್ತಿವೆ. ಚಿನ್ನದ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ.
ಅದರ ಪರಿಣಾಮವಾಗಿ ಸರ್ಕಾರವು ಬಾಂಡ್ ಹೂಡಿಕೆದಾರರಿಗೆ ಅವರು ಹೂಡಿಕೆ ಮಾಡಿದ ಸಮಯಕ್ಕಿಂತ ಬಹಳ ಹೆಚ್ಚಿನ ಬೆಲೆಯಲ್ಲಿ ಹಣವನ್ನು ಮರುಪಾವತಿಸಬೇಕಾಗಿದೆ. ಇದರಿಂದ ಸರ್ಕಾರದ ಪಾವತಿ ಭಾರವು ಗಮನಾರ್ಹವಾಗಿ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರವು ಚಿನ್ನ ಖರೀದಿಯನ್ನು ನಿರುತ್ಸಾಹಗೊಳಿಸುತ್ತಿದೆ.
ಆ ಹಣವನ್ನು ಬೇರೆ ಯೋಜನೆಗಳಿಗೆ ಬಳಸಬೇಕಾದ ಅಗತ್ಯವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಹಾಗಾದರೆ ಸರ್ಕಾರವು ಚಿನ್ನದ ಖರೀದಿಯನ್ನು ನಿರುತ್ಸಾಹಗೊಳಿಸುತ್ತಿರುವುದಕ್ಕೆ ಕಾರಣ, ಆ ಹಣವನ್ನು ಇತರೆ ಯೋಜನೆಗಳಿಗೆ ಬಳಸಬೇಕಾದ ಅಗತ್ಯವೇ? ಎಂಬ ಗಂಭೀರ ಪ್ರಶ್ನೆಯನ್ನು ನಟಿ ರಮ್ಯಾ ಎತ್ತಿದ್ದಾರೆ.
Advertisement