

ಸಿಕ್ಕಿಂಗೆ ಭೇಟಿ ನೀಡಲು ಯೋಜಿಸುತ್ತಿರುವ ಪ್ರವಾಸಿಗರಿಗೆ ಬಲವಾದ ಸಂದೇಶ ನೀಡುವ ಮೂಲಕ ಉದ್ಯಮಿ ಆನಂದ್ ಮಹೀಂದ್ರಾ ಇದೀಗ ಮತ್ತೊಮ್ಮೆ ಇಂಟರ್ನೆಟ್ನಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮಹೀಂದ್ರಾ ಗ್ರೂಪ್ನ ಅಧ್ಯಕ್ಷರು ಹಿಮಾಲಯನ್ ರಾಜ್ಯದ ಕಟ್ಟುನಿಟ್ಟಾದ ಸ್ವಚ್ಛತಾ ಸಂಸ್ಕೃತಿಯನ್ನು ಶ್ಲಾಘಿಸಿದ್ದಾರೆ ಮತ್ತು ರಸ್ತೆಗಳಲ್ಲಿ ಕಸ ಎಸೆಯುವ ಅಭ್ಯಾಸವಿದ್ದರೆ, ಅಂತಹವರು ಅಲ್ಲಿಗೆ ಭೇಟಿ ನೀಡದಂತೆ ಎಚ್ಚರಿಸಿದ್ದಾರೆ.
ಎಕ್ಸ್ನಲ್ಲಿ ಹಂಚಿಕೊಂಡ ಅವರ ಪೋಸ್ಟ್ ವೈರಲ್ ಆಗಿದ್ದು, ನಾಗರಿಕ ಪ್ರಜ್ಞೆ ಮತ್ತು ಸಿಕ್ಕಿಂ ಭಾರತದ ಅತ್ಯಂತ ಸ್ವಚ್ಛ ರಾಜ್ಯಗಳಲ್ಲಿ ಒಂದಾಗಿ ಏಕೆ ಎದ್ದು ಕಾಣುತ್ತದೆ ಎಂಬುದರ ಕುರಿತು ವ್ಯಾಪಕ ಚರ್ಚೆಗೆ ನಾಂದಿ ಹಾಡಿತು.
ಎರಡು ವೈರಲ್ ವಿಡಿಯೋಗಳನ್ನು ಹಂಚಿಕೊಂಡ ಆನಂದ್ ಮಹೀಂದ್ರಾ, ಸಿಕ್ಕಿಂ ಸ್ವಚ್ಛತೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸ್ಥಳೀಯರು ಮತ್ತು ಪ್ರವಾಸಿಗರು ನಿಯಮಗಳನ್ನು ಹೇಗೆ ಪಾಲಿಸುತ್ತಾರೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.
ತಮ್ಮ ಪೋಸ್ಟ್ನಲ್ಲಿ, ‘ನೀವು ಸುಮ್ಮನೆ ನಿಮ್ಮ ಕಾರಿನ ಕಿಟಕಿಯಿಂದ ಕಸ ಎಸೆಯುವವರಾಗಿದ್ದರೆ, ಸಿಕ್ಕಿಂಗೆ ಭೇಟಿ ನೀಡುವ ಬಗ್ಗೆ ಯೋಚಿಸಬೇಡಿ. ಆದರೆ, ಈ ಕ್ಲಿಪ್ನಿಂದ ನಿಮಗೆ ಒಂದು ಮುಖ್ಯವಾದ ವಿಚಾರ ಮನವರಿಕೆಯಾದರೆ, ನಿಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿ ಅಲ್ಲಿಗೆ ಹೋಗುವುದು ನೀವು ತೆಗೆದುಕೊಳ್ಳುವ ಅತ್ಯುತ್ತಮ ಪ್ರಯಾಣ ನಿರ್ಧಾರಗಳಲ್ಲಿ ಒಂದಾಗಿರಬಹುದು. ಏಕೆಂದರೆ, ಸಿಕ್ಕಿಂ ಅನ್ನು ನಿಜವಾಗಿಯೂ ಸುಂದರ ತಾಣವನ್ನಾಗಿ ಮಾಡುವುದು ಅದರ ಭೂದೃಶ್ಯ ಮಾತ್ರವಲ್ಲ. ಅದು ಅಲ್ಲಿನ ಜನರ ಮನಸ್ಥಿತಿಯೂ ಹೌದು ಎಂದು ನಾನು ಭಾವಿಸುತ್ತೇನೆ’ ಎಂದು ಬರೆದಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರ ಮೇಲಿನ ಜವಾಬ್ದಾರಿ ಮತ್ತು ಗೌರವದ ಬಗ್ಗೆ ಅವರ ಮಾತುಗಳು ತಕ್ಷಣವೇ ಗಮನ ಸೆಳೆದವು. ಅವರು ಹಂಚಿಕೊಂಡ ವೈರಲ್ ಕ್ಲಿಪ್ಗಳು ಸಿಕ್ಕಿಂ ಅನ್ನು ಅದರ ಸ್ವಚ್ಛತೆಗಾಗಿ ಏಕೆ ಹೆಚ್ಚಾಗಿ ಪ್ರಶಂಸಿಸಲಾಗುತ್ತದೆ ಎಂಬುದನ್ನು ನಿಖರವಾಗಿ ತೋರಿಸಿದವು.
ಒಂದು ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಕಿತ್ತಳೆ ಸಿಪ್ಪೆಯನ್ನು ರಸ್ತೆಯ ಮೇಲೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣವೇ ಆತನನ್ನು ತಡೆದು ತಾನು ಎಸೆದಿದ್ದನ್ನು ತಾನೇ ಎತ್ತಿಕೊಂಡು ಸ್ವಚ್ಛಗೊಳಿಸುವಂತೆ ಮಾಡಲಾಗಿದೆ. ಸಿಕ್ಕಿಂನಲ್ಲಿ, ಒಬ್ಬ ವ್ಯಕ್ತಿಯು ನಿವಾಸಿಯಾಗಿರಲಿ ಅಥವಾ ಪ್ರವಾಸಿಗರಾಗಿರಲಿ, ಅವರು ರಾಜ್ಯದ ಸಾರ್ವಜನಿಕ ಸ್ಥಳಗಳು ಮತ್ತು ನೈಸರ್ಗಿಕ ಸೌಂದರ್ಯವನ್ನು ಗೌರವಿಸಬೇಕೆಂದು ನಿರೀಕ್ಷಿಸಲಾಗಿದೆ.
ಆನಂದ್ ಮಹೀಂದ್ರಾ ಅವರ ಪೋಸ್ಟ್ ಸಾವಿರಾರು ಭಾರತೀಯರ ಮನಸ್ಸನ್ನು ಮುಟ್ಟಿತು. ಅವರಲ್ಲಿ ಹಲವರು ಸಿಕ್ಕಿಂ ಅನ್ನು ಹೊಗಳಿದರು ಮತ್ತು ಇತರ ರಾಜ್ಯಗಳು ಅದರಿಂದ ಕಲಿಯಬೇಕು ಎಂದು ಹೇಳಿದರು. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ತಮ್ಮ ಪ್ರವಾಸದ ಅನುಭವವನ್ನು ನೆನಪಿಸಿಕೊಂಡರು. ‘ಅಲ್ಲದೆ, ಸಿಕ್ಕಿಂನಲ್ಲಿ 'ಹಾರ್ನ್ ಮಾಡಬಾರದು' ಇದನ್ನೂ ಒಂದು ಅಭ್ಯಾಸವಾಗಿ ಅನುಭವಿಸುವುದು ಅದ್ಭುತವಾಗಿದೆ. ನಾವು ಬಾಗ್ಡೋಗ್ರಾದಿಂದ ಸಿಕ್ಕಿಂಗೆ ಪ್ರಯಾಣಿಸಿದೆವು. ಆಗ ನಾವು ಆ ರಾಜ್ಯವನ್ನು ಪ್ರವೇಶಿಸಿದ ತಕ್ಷಣವೇ, ಚಾಲಕ ಹೆಚ್ಚು ಶಾಂತನಾದನು ಮತ್ತು ಹಾರ್ನ್ ಮಾಡದಿರುವುದು ಸೇರಿದಂತೆ ನಿಯಮಗಳನ್ನು ಅನುಸರಿಸಿದನು. ಸ್ಪಷ್ಟ ಮಾರ್ಗಸೂಚಿಗಳು ಮತ್ತು ನಿಯಮಗಳಿಂದಾಗಿ ಅವನ ನಡವಳಿಕೆ ಬದಲಾಯಿತು’ ಎಂದಿದ್ದಾರೆ.
ಸಿಕ್ಕಿಂ ತನ್ನ ಅದ್ಭುತ ಭೂದೃಶ್ಯಗಳು, ಶಾಂತಿಯುತ ಮಠಗಳು, ಹಿಮದಿಂದ ಆವೃತವಾದ ಪರ್ವತಗಳು ಮತ್ತು ತಾಜಾ ಪರ್ವತ ಗಾಳಿಗೆ ವರ್ಷಗಳಿಂದ ಮೆಚ್ಚುಗೆ ಪಡೆದಿದೆ. ಇಂಟರ್ನೆಟ್ ಬಳಕೆದಾರರು ಗಮನಿಸಿದಂತೆ, ಹೆಚ್ಚಿನ ರಾಜ್ಯಗಳು ಸಿಕ್ಕಿಂನ ಮಾದರಿಯನ್ನು ಅನುಸರಿಸಿದರೆ, ಭಾರತದ ಬೀದಿಗಳು ಮತ್ತು ಪ್ರವಾಸಿ ತಾಣಗಳು ತುಂಬಾ ವಿಭಿನ್ನವಾಗಿ ಕಾಣುತ್ತವೆ.
Advertisement