ಮೇಕೆದಾಟು ವಿಚಾರದಲ್ಲಿ ಕರ್ನಾಟಕ ದಿಟ್ಟ ಹೆಜ್ಜೆ; CWC ಮುಖ್ಯಸ್ಥರ ಜೊತೆ ಸಚಿವರ ಮಹತ್ವದ ಮಾತುಕತೆ

ಯೋಜನೆಗೆ ಅಗತ್ಯವಿರುವ ಕಾನೂನುಬದ್ಧ ಹಾಗೂ ತಾಂತ್ರಿಕ ಅನುಮೋದನೆಗಳು, ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಕುರಿತು ಈ ಹಿಂದೆ CWC ಎತ್ತಿದ್ದ ಆಕ್ಷೇಪಣೆಗಳು ಮತ್ತು ತಾಂತ್ರಿಕ ವಿಚಾರಗಳಿಗೆ ಪ್ರತಿ..
Minister Chaluvarayswamy meets CWC chairman
CWC ಮುಖ್ಯಸ್ಥರ ಜೊತೆ ಸಚಿವ ಚಲುವರಾಯಸ್ವಾಮಿ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ವೇಗ ನೀಡಲು ಕರ್ನಾಟಕ ಸರ್ಕಾರ ತನ್ನ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸಿದೆ.

ರಾಜ್ಯ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ಜಲ ಆಯೋಗದ (CWC) ಅಧ್ಯಕ್ಷ ಅನುಪಮ್ ಪ್ರಸಾದ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಯೋಜನೆಗೆ ಅಗತ್ಯವಿರುವ ಕಾನೂನುಬದ್ಧ ಹಾಗೂ ತಾಂತ್ರಿಕ ಅನುಮೋದನೆಗಳು, ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಕುರಿತು ಈ ಹಿಂದೆ CWC ಎತ್ತಿದ್ದ ಆಕ್ಷೇಪಣೆಗಳು ಮತ್ತು ತಾಂತ್ರಿಕ ವಿಚಾರಗಳಿಗೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಅನುಸರಣೆ ವರದಿ (Compliance Report) ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಯೋಜನೆಯ ತಾಂತ್ರಿಕ ಪರಿಶೀಲನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಅಗತ್ಯ ತಾಂತ್ರಿಕ ಸಹಕಾರ ಒದಗಿಸುವಂತೆ ಸಚಿವ ಚಲುವರಾಯಸ್ವಾಮಿ ಅವರು CWCಗೆ ಮನವಿ ಮಾಡಿದರು ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Minister Chaluvarayswamy meets CWC chairman
ಮೇಕೆದಾಟು ಯೋಜನೆ: ಕೇಂದ್ರದ ಬಾಗಿಲು ತಟ್ಟಲು ರಾಜ್ಯ ಸರ್ಕಾರ ಸಜ್ಜು; ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ- ಡಿ.ಕೆ ಶಿವಕುಮಾರ್..!

ಪರಿಶೀಲನಾ ಪ್ರಕ್ರಿಯೆಯಲ್ಲಿ ಹೆಚ್ಚುವರಿ ತಾಂತ್ರಿಕ ಮಾಹಿತಿ ಅಥವಾ ಯಾವುದೇ ಸ್ಪಷ್ಟೀಕರಣದ ಅಗತ್ಯವಿದ್ದರೆ, ಜಲಸಂಪನ್ಮೂಲ ಇಲಾಖೆ ತಕ್ಷಣವೇ ಒದಗಿಸಲಿದೆ ಎಂದು ಸಚಿವರು CWCಗೆ ಭರವಸೆ ನೀಡಿದರು. ಇತ್ತೀಚೆಗೆ CWC ಸದಸ್ಯ ಯೋಗೇಶ್ ಪೈತಂಕರ್ ಅವರು ಮೇಕೆದಾಟು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.

ಕರ್ನಾಟಕದ ನಿಯೋಗವು ಉದ್ದೇಶಿತ ಯೋಜನಾ ಸ್ಥಳದಲ್ಲಿನ ವಾಸ್ತವಿಕ ಭೌಗೋಳಿಕ ಪರಿಸ್ಥಿತಿಗಳ ಕುರಿತು ವಿವರಗಳನ್ನು ಹಂಚಿಕೊಂಡಿತು. ಅಲ್ಲದೆ, ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಗಮನಕ್ಕೆ ಬಂದ ತಾಂತ್ರಿಕ ಅಂಶಗಳ ಬಗ್ಗೆಯೂ ಚರ್ಚೆ ನಡೆಯಿತು.

ಬೆಂಗಳೂರಿನ ದೀರ್ಘಾವಧಿಯ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಮೇಕೆದಾಟು ಯೋಜನೆಯ ಮಹತ್ವ ಹೆಚ್ಚುತ್ತಿದೆ ಎಂದು ಚಲುವರಾಯಸ್ವಾಮಿ ಸಭೆಯಲ್ಲಿ ಒತ್ತಿ ಹೇಳಿದರು. ಹೆಚ್ಚುತ್ತಿರುವ ನೀರಿನ ಬೇಡಿಕೆ, ಮಳೆಯಲ್ಲಿನ ಏರಿಳಿತ ಹಾಗೂ ಕೆಲ ಅವಧಿಗಳಲ್ಲಿ ಎದುರಾಗುತ್ತಿರುವ ನೀರಿನ ಕೊರತೆಯ ಹಿನ್ನೆಲೆಯಲ್ಲಿ ಯೋಜನೆ ಅಗತ್ಯವಾಗಿದೆ ಎಂದು ಅವರು ವಿವರಿಸಿದರು.

ಪ್ರಸ್ತಾವಿತ ಸಮತೋಲನ ಜಲಾಶಯವು ಬೆಂಗಳೂರು ಮತ್ತು ನೆರೆಯ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವುದರ ಜೊತೆಗೆ, ಜಲವಿದ್ಯುತ್ ಉತ್ಪಾದನೆ ಹಾಗೂ ಕೆಳಹರಿವಿನಲ್ಲಿ ನೀರಿನ ಸಮರ್ಪಕ ನಿರ್ವಹಣೆ ಮತ್ತು ನಿಯಂತ್ರಿತ ಹರಿವಿಗೆ ಸಹಕಾರಿಯಾಗಲಿದೆ ಎಂದು ಸರ್ಕಾರ ಹೇಳಿದೆ.

ಮಳೆ ಕೊರತೆಯಿರುವ ವರ್ಷಗಳಲ್ಲೂ ಮೇಕೆದಾಟು ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಸಚಿವರು ತಿಳಿಸಿದರು. ನೀರಿನ ಸಂಗ್ರಹ ಮತ್ತು ನಿಯಂತ್ರಣ ವ್ಯವಸ್ಥೆ ಸುಧಾರಿಸುವುದರಿಂದ ನೀರಿನ ನಿರ್ವಹಣೆ ಬಲಗೊಳ್ಳಲಿದೆ. ಜತೆಗೆ, ಅನ್ವಯವಾಗುವ ನಿಯಮಗಳಂತೆ ಕೆಳಹರಿವಿಗೆ ನೀರನ್ನು ನಿಯಂತ್ರಿತವಾಗಿ ಹರಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ನಿಯೋಗ ಪುನರುಚ್ಚರಿಸಿತು. ನಿಗದಿತ ಪ್ರಕ್ರಿಯೆಯಂತೆ ನಡೆಯುತ್ತಿರುವ ತಾಂತ್ರಿಕ ಪರಿಶೀಲನೆಯನ್ನು ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಕೇಂದ್ರ ಜಲ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಇಲಾಖೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಅಗತ್ಯ ತಾಂತ್ರಿಕ ಕ್ಲಿಯರೆನ್ಸ್‌ಗಳನ್ನು ಪಡೆಯುವ ಮೂಲಕ ಮೇಕೆದಾಟು ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವ ಕರ್ನಾಟಕದ ಪ್ರಯತ್ನದಲ್ಲಿ ಈ ಸಭೆ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಸಚಿವರ ಕಚೇರಿ ತಿಳಿಸಿದೆ.

Minister Chaluvarayswamy meets CWC chairman
ಮೇಕೆದಾಟು ಅಣೆಕಟ್ಟು: ಕುಡಿಯುವ ನೀರಿಗಾಗಿ ಅಗತ್ಯವಿರುವ 5 ಟಿಎಂಸಿ ಹೊರತುಪಡಿಸಿ, ಉಳಿದ ನೀರು ತಮಿಳುನಾಡಿಗೆ- ಸಿಎಂ ಡಿ.ಕೆ ಶಿವಕುಮಾರ್

ಏನಿದು ಮೇಕೆದಾಟು ಯೋಜನೆ?

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಉದ್ದೇಶಗಳಿಗಾಗಿ ಮೇಕೆದಾಟು ಬಹುಉದ್ದೇಶಿತ ಯೋಜನೆಯನ್ನು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ.

ಆದರೆ, ಯೋಜನೆ ನಿರ್ಮಾಣವಾದರೆ ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ತಮಿಳುನಾಡು ಸರ್ಕಾರ ಯೋಜನೆಯನ್ನು ವಿರೋಧಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com