2029ರ ವೇಳೆಗೆ ಮಾದಕವಸ್ತು ಮುಕ್ತ ಭಾರತ ಮಾಡುವುದು ಮೋದಿ ಸರ್ಕಾರದ ಕಾರ್ಯಯೋಜನೆ: ಅಮಿತ್ ಶಾ; Video

ನಕ್ಸಲಿಸಂ ಮತ್ತು ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳಂತೆಯೇ, ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ದೇಶವನ್ನು ಮಾದಕವಸ್ತು ಮುಕ್ತಗೊಳಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
Amit Shah
ಅಮಿತ್ ಶಾ
Updated on

2029ರ ವೇಳೆಗೆ ಭಾರತವನ್ನು ಮಾದಕವಸ್ತು ಮುಕ್ತ ದೇಶವನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಯಯೋಜನೆ ರೂಪಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾದಕವಸ್ತು ಮುಕ್ತ ಯುವಶಕ್ತಿಯೇ 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಕಾರಣವಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ ಎಂದು ತಿಳಿಸಿದ್ದಾರೆ.

ನಕ್ಸಲಿಸಂ ಮತ್ತು ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳಂತೆಯೇ, ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ದೇಶವನ್ನು ಮಾದಕವಸ್ತು ಮುಕ್ತಗೊಳಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

‘ಡ್ರಗ್-ಫ್ರೀ ಇಂಡಿಯಾ’ ಗುರಿಯ ಭಾಗವಾಗಿ 2029ರ ವೇಳೆಗೆ ಮಾದಕವಸ್ತು ಕಳ್ಳಸಾಗಣೆ, ಹಣಕಾಸು ನೆರವು ಸೇರಿದಂತೆ ಸಂಪೂರ್ಣ ಮಾದಕವಸ್ತು ಜಾಲವನ್ನು ನಾಶಪಡಿಸುವುದರಿಂದ ಹಿಡಿದು ವ್ಯಸನಿಗಳ ಪುನರ್ವಸತಿ ತನಕ ಸಮನ್ವಯದ ರಾಷ್ಟ್ರಮಟ್ಟದ ಕಾರ್ಯತಂತ್ರವನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದ ಮಾದಕವಸ್ತು ನಿಯಂತ್ರಣ ಕುರಿತ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಮಾದಕವಸ್ತು ಮುಕ್ತ ಯುವಶಕ್ತಿಯೇ 2047ರ ವೇಳೆಗೆ ವಿಕಸಿತ ಭಾರತವನ್ನು ಮುನ್ನಡೆಸಬೇಕು ಎಂಬುದು ನರೇಂದ್ರ ಮೋದಿ ಅವರ ಗುರಿ ಎಂದು ಹೇಳಿದರು.

2014ಕ್ಕೂ ಮೊದಲು ಮಾದಕವಸ್ತುಗಳ ವಿರುದ್ಧದ ಹೋರಾಟವು ಸಣ್ಣ ಘಟಕಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತಿತ್ತು. ತನಿಖಾ ಸಂಸ್ಥೆಗಳು ಸಣ್ಣಪುಟ್ಟ ಆರೋಪಿಗಳನ್ನು ಬಂಧಿಸುವುದಕ್ಕೇ ತೃಪ್ತಿಪಡುತ್ತಿದ್ದವು. ಆದರೆ ನಮ್ಮ ಸರ್ಕಾರ ಈ ಹೋರಾಟವನ್ನು ರಾಷ್ಟ್ರೀಯ ಭದ್ರತೆಯ ಆದ್ಯತೆಯನ್ನಾಗಿ ಮಾಡಿದೆ ಎಂದು ಹೇಳಿದರು.

2019ರಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಸಮನ್ವಯ ಸಾಧಿಸಲು ಕಾರ್ಯನಿರ್ವಹಣಾ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಾಲ್ಕು ಹಂತಗಳ ರಾಷ್ಟ್ರೀಯ ಸಮನ್ವಯ ಸಮಿತಿ (NCORD) ವ್ಯವಸ್ಥೆಯನ್ನು ರಚಿಸಲಾಯಿತು ಎಂದು ತಿಳಿಸಿದರು.

Amit Shah
ಅಮಿತ್ ಶಾ-ಮೋದಿಗೆ 'ಜೆನ್‌-ಝೀ' ಈಗಾಗಲೇ ತಮ್ಮ ಸಾಮರ್ಥ್ಯ ತೋರಿಸಿದೆ: ಬಿ.ಕೆ ಹರಿಪ್ರಸಾದ್

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಮಾದಕವಸ್ತು ವಿರೋಧಿ ಕಾರ್ಯಪಡೆಗಳನ್ನು (ANTF) ರಚಿಸಲಾಗಿದ್ದು, ಸ್ಥಳೀಯ ಪೊಲೀಸರನ್ನೂ ರಾಷ್ಟ್ರೀಯ ಕಾರ್ಯತಂತ್ರದೊಂದಿಗೆ ಸಂಪರ್ಕಿಸಲಾಗಿದೆ ಎಂದು ಅವರು ಹೇಳಿದರು.

ದೊಡ್ಡ ಮಾದಕವಸ್ತು ಜಾಲಗಳು, ಅವುಗಳ ಅಂತಾರಾಷ್ಟ್ರೀಯ ಸಂಪರ್ಕಗಳು ಹಾಗೂ ಕಾರ್ಯಾಚರಣೆಯಲ್ಲಿನ ಲೋಪಗಳ ವಿರುದ್ಧ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಜಂಟಿಯಾಗಿ ನಿರ್ಧಾರ ಕೈಗೊಳ್ಳಲು 2019ರಲ್ಲಿ ಜಂಟಿ ಸಮನ್ವಯ ಸಮಿತಿಯನ್ನೂ ರಚಿಸಲಾಗಿದೆ ಎಂದು ತಿಳಿಸಿದರು.

ಮಾದಕವಸ್ತು ನಿಯಂತ್ರಣ ದಳದ (NCB) ಸಿಬ್ಬಂದಿ ವ್ಯವಸ್ಥೆಯನ್ನು ಪುನರ್‌ವ್ಯವಸ್ಥೆಗೊಳಿಸಿ, ಮಾನವ ಸಂಪನ್ಮೂಲ, ವಲಯವಾರು ಉಪಸ್ಥಿತಿ ಹಾಗೂ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸಂಸ್ಥೆಯನ್ನು ಬಲಪಡಿಸಲಾಗಿದೆ ಎಂದು ಶಾ ಹೇಳಿದರು. ಮಾದಕವಸ್ತುಗಳ ವಿರುದ್ಧದ ಹೋರಾಟ ಕೇವಲ ಕಾನೂನು ಜಾರಿ ಕ್ರಮಗಳಿಗೆ ಸೀಮಿತವಾಗಿಲ್ಲ ಎಂದು ಒತ್ತಿ ಹೇಳಿದರು.

ಜಾಗೃತಿ, ಚಿಕಿತ್ಸೆ, ಸಮಾಲೋಚನೆ, ಪುನರ್ವಸತಿ ಮತ್ತು ಜೀವನೋಪಾಯದ ಅವಕಾಶಗಳನ್ನು ಮಾದಕವಸ್ತು ವಿರೋಧಿ ಅಭಿಯಾನದೊಂದಿಗೆ ಸರ್ಕಾರ ಜೋಡಿಸಿದೆ. ಮಾದಕವಸ್ತು ವ್ಯಸನಕ್ಕೆ ಒಳಗಾದವರಿಗೆ ನೆರವು ನೀಡಲು 1933 ‘ಮಾನಸ್’ ಸಹಾಯವಾಣಿಯನ್ನೂ ಪರಿಚಯಿಸಲಾಗಿದೆ ಎಂದು ತಿಳಿಸಿದರು.

ರಾಜಕೀಯ ಇಚ್ಛಾಶಕ್ತಿ, ಸಮನ್ವಯದ ಕಾನೂನು ಜಾರಿ ಹಾಗೂ ವ್ಯಸನ ತಡೆ ಮತ್ತು ಸಂತ್ರಸ್ತರ ಪುನರ್ವಸತಿಗೆ ಒತ್ತು ನೀಡುವ ಕ್ರಮಗಳ ಮೂಲಕ ‘ಡ್ರಗ್-ಫ್ರೀ ಇಂಡಿಯಾ 2029’ ಗುರಿ ಸಾಧಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಮಾದಕವಸ್ತು ಮುಕ್ತ ಭಾರತದ ಗುರಿಗಾಗಿ ಮೋದಿ ಸರ್ಕಾರ ರೂಪಿಸಿರುವ ಮೂರು ವರ್ಷದ ಕಾರ್ಯಯೋಜನೆ ನಾಲ್ಕು ಸ್ತಂಭಗಳ ಕಾರ್ಯತಂತ್ರವನ್ನು ಆಧರಿಸಿದೆ ಎಂದು ತಿಳಿಸಿದರು.

ಗುಪ್ತಚರ ಮಾಹಿತಿ ಮತ್ತು ಕಾರ್ಯಾಚರಣೆ ಆಧಾರಿತ ಕಾನೂನು ಜಾರಿ, ಸಿಂಥೆಟಿಕ್ ಮಾದಕವಸ್ತುಗಳ ನಿಯಂತ್ರಣ, ಮಾದಕವಸ್ತು ಬೇಡಿಕೆ ಮತ್ತು ಹಾನಿ ಕಡಿತ ಹಾಗೂ ಸಾಮರ್ಥ್ಯ ಮತ್ತು ಸಮನ್ವಯ ನಿರ್ಮಾಣ ಈ ನಾಲ್ಕು ಸ್ತಂಭಗಳಾಗಿವೆ ಎಂದು ವಿವರಿಸಿದರು.

ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆ ಕುಸಿದ ನಂತರ ಪ್ರಗತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಅಲ್ಲಿ ಭಯೋತ್ಪಾದನೆ ಕ್ರಮೇಣ ಶೂನ್ಯಕ್ಕೆ ಸಮೀಪಿಸುತ್ತಿದೆ ಎಂದು ಹೇಳಿದರು.

370ನೇ ವಿಧಿ ರದ್ದಾದ ಬಳಿಕ ಪ್ರತ್ಯೇಕತಾವಾದದ ಮನೋಭಾವ ಕಡಿಮೆಯಾಗಿದೆ ಎಂದು ತಿಳಿಸಿದರು.

ಮೋದಿ ಸರ್ಕಾರದ ವ್ಯಾಪಕ ಆಂತರಿಕ ಭದ್ರತಾ ಕಾರ್ಯತಂತ್ರವು ದೀರ್ಘಕಾಲದಿಂದ ಎದುರಾಗಿದ್ದ ಮೂರು ಪ್ರಮುಖ ಸವಾಲುಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಾ ಹೇಳಿದರು. ಅವುಗಳೆಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆ, ಈಶಾನ್ಯ ರಾಜ್ಯಗಳಲ್ಲಿನ ದಂಗೆ ಹಾಗೂ ಎಡಪಂಥೀಯ ಉಗ್ರವಾದ.

ಆಂತರಿಕ ಭದ್ರತೆಯನ್ನು ಸುಧಾರಿಸಲು ಮತ್ತು ಬಲಪಡಿಸಲು ಮೋದಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ತಿರುಪತಿಯಿಂದ ಪಶುಪತಿವರೆಗೆ ರೆಡ್ ಕಾರಿಡಾರ್ ನಿರ್ಮಿಸುವ ಕನಸು ಕಂಡಿದ್ದವರು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದಾರೆ ಎಂದು ಹೇಳಿದರು.

ಈಶಾನ್ಯ ಭಾರತದ ಕುರಿತು ಮಾತನಾಡಿದ ಅಮಿತ್ ಶಾ, 2019ರಿಂದ 14 ಪ್ರಮುಖ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಸುಮಾರು 11,000 ಸಶಸ್ತ್ರ ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದಾರೆ ಎಂದು ತಿಳಿಸಿದರು.

ಭದ್ರತೆ, ಅಭಿವೃದ್ಧಿ ಮತ್ತು ವಿಶ್ವಾಸವನ್ನು ಒಟ್ಟುಗೂಡಿಸಿದ ಸಮನ್ವಯದ ಕಾರ್ಯತಂತ್ರದ ಮೂಲಕ ಸುಮಾರು ಆರು ದಶಕಗಳಷ್ಟು ಹಳೆಯದಾದ ಎಡಪಂಥೀಯ ಉಗ್ರವಾದದ ಸವಾಲನ್ನು 2026ರ ಮಾರ್ಚ್ 31ರಂದು ಭಾರತ ಕೊನೆಗೊಳಿಸಿದೆ ಎಂದು ಹೇಳಿದರು.

ನಾವು ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಿದ್ದೇವೆ. ಅದೇ ರೀತಿಯಲ್ಲಿ ಮಾದಕವಸ್ತುಗಳ ಹಾವಳಿಯನ್ನೂ ನಿಭಾಯಿಸುತ್ತೇವೆ ಎಂದರು.

2029ರ ಮಾರ್ಚ್ ವೇಳೆಗೆ 100 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾದಕವಸ್ತು ಜಾಲಗಳನ್ನು ನಾಶಪಡಿಸುವುದು ಹಾಗೂ 100 ಪರಾರಿಯಾಗಿರುವ ಆರೋಪಿಗಳನ್ನು ದೇಶಕ್ಕೆ ವಾಪಸ್ ಕರೆತರುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ತಿಳಿಸಿದರು.

2027ರ ಮಾರ್ಚ್ ವೇಳೆಗೆ ಮಾದಕವಸ್ತು ಪೂರೈಕೆ ಸರಪಳಿಯ ಸಂಪೂರ್ಣ ಮಾಹಿತಿಯನ್ನು ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ. 2026ರಲ್ಲಿ ಕನಿಷ್ಠ 75 ಅಕ್ರಮ ಮಾದಕವಸ್ತು ಪ್ರಯೋಗಾಲಯಗಳನ್ನು ನಾಶಪಡಿಸಲಾಗುವುದು ಎಂದು ಹೇಳಿದರು.

ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಭಾರತಕ್ಕೆ ವಾಪಸ್ ಕರೆತರಲು ಸರ್ಕಾರ ಮಿಷನ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

2019ರ ಜುಲೈನಿಂದ 2026ರ ಜುಲೈವರೆಗೆ 36 ದೇಶಗಳಿಂದ 274 ಮಂದಿ ಬೇಕಾಗಿದ್ದ ಅಥವಾ ತಲೆಮರೆಸಿಕೊಂಡಿದ್ದ ಅಪರಾಧಿಗಳನ್ನು ಭಾರತಕ್ಕೆ ಕರೆತರಲಾಗಿದೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ 401 ರೆಡ್ ಕಾರ್ನರ್ ನೋಟಿಸ್‌ಗಳನ್ನು ಹೊರಡಿಸಲಾಗಿದ್ದು, 2026ರ ಜುಲೈವರೆಗೆ 182 ನೋಟಿಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಇಂಟರ್‌ಪೋಲ್ ಮೂಲಕ 1,400ಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದ್ದು, ಇದರಿಂದ ಮಾಹಿತಿಯ ತ್ವರಿತ ವಿನಿಮಯ ಸಾಧ್ಯವಾಗಿದೆ ಎಂದು ಹೇಳಿದರು.

2019ರಿಂದ 2026ರ ನಡುವೆ ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ಸೇರಿದ 17,874 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 18,762 ಕೋಟಿ ರೂ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದ್ದು ಅಥವಾ ಮರಳಿ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸೈಬರ್ ಅಪರಾಧದ ವಿರುದ್ಧದ ಸರ್ಕಾರದ ಕ್ರಮಗಳನ್ನೂ ಪ್ರಸ್ತಾಪಿಸಿದರು. 2026ರ ಜೂನ್ 30ರ ವೇಳೆಗೆ 32.8 ಲಕ್ಷ ದೂರುಗಳಿಗೆ ಸಂಬಂಧಿಸಿದಂತೆ ಸೈಬರ್ ವ್ಯವಸ್ಥೆಯ ಮೂಲಕ 11,158 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಉಳಿಸಲಾಗಿದೆ ಎಂದು ಹೇಳಿದರು.

ಗಡಿ ಮತ್ತು ಕರಾವಳಿ ಭದ್ರತೆಯನ್ನು ಬಲಪಡಿಸುವುದು, ಮೂರು ಹೊಸ ಅಪರಾಧ ಕಾನೂನುಗಳ ಅನುಷ್ಠಾನ ಹಾಗೂ ‘ವೈಬ್ರೆಂಟ್ ವಿಲೇಜಸ್’ ಕಾರ್ಯಕ್ರಮ ಸೇರಿದಂತೆ ಹಲವು ಕ್ರಮಗಳನ್ನು ಆಂತರಿಕ ಭದ್ರತೆಯನ್ನು ಬಲಪಡಿಸಲು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಭಯೋತ್ಪಾದನೆಯ ವಿರುದ್ಧ ಸರ್ಕಾರ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಅಳವಡಿಸಿಕೊಂಡಿದೆ. ವಿಪತ್ತು ನಿರ್ವಹಣೆಯಲ್ಲಿ ಮೊದಲ ಪ್ರತಿಕ್ರಿಯೆ ನೀಡುವ ವ್ಯವಸ್ಥೆಗೂ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಮೂರು ಹೊಸ ಅಪರಾಧ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದಕ್ಕಾಗಿ ಗೋವಾ ಪೊಲೀಸರನ್ನು ಶಾ ಶ್ಲಾಘಿಸಿದರು. ಇದರ ಪರಿಣಾಮವಾಗಿ ಶಿಕ್ಷೆಯ ಪ್ರಮಾಣ ಶೇ.22ರಿಂದ ಶೇ.53.2ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com