

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್(BRICS) ಶೃಂಗಸಭೆಯಲ್ಲಿ, 2025ರ ಏಪ್ರಿಲ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಲಾಗಿದೆ. ಇದು ಭಾರತದ ರಾಜತಾಂತ್ರಿಕತೆಗೆ ಸಿಕ್ಕ ಅತಿ ದೊಡ್ಡ ಗೆಲುವು ಎಂದು ಬಣ್ಣಿಸಲಾಗುತ್ತಿದೆ.
ಬ್ರಿಕ್ಸ್ ಶೃಂಗಸಭೆ ಶನಿವಾರ ಅಂಗೀಕರಿಸಿದ ನವದೆಹಲಿ ಘೋಷಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು, ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಗೆ ಕರೆ ನೀಡಿದೆ.
'ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ' ಎಂಬ ಶೀರ್ಷಿಕೆಯ ಸಮಗ್ರ ಘೋಷಣೆಯು ಜಾಗತಿಕ ಭಯೋತ್ಪಾದನೆ, ಅಕ್ರಮ ಹಣಕಾಸಿನ ನೆರವು, ಸೈಬರ್ ವಂಚನೆ ಮತ್ತು ಗಡಿಯಾಚೆಗಿನ ಹಗರಣ ಜಾಲಗಳ ವಿರುದ್ಧ ಏಕೀಕೃತ ನಿಲುವು ತೆಗೆದುಕೊಳ್ಳಲಾಗಿದೆ.
ಭಯೋತ್ಪಾದನೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ, ನಾಗರಿಕತೆ ಅಥವಾ ಜನಾಂಗೀಯ ಗುಂಪಿನೊಂದಿಗೆ ಲಿಂಕ್ ಮಾಡಬಾರದು ಎಂದು ಸದಸ್ಯ ರಾಷ್ಟ್ರಗಳು ಪುನರುಚ್ಚರಿಸಿದವು. ಆದರೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಎಲ್ಲರನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಬೇಕು ಎಂದು ಬ್ರಿಕ್ಸ್ ಪ್ರತಿಪಾದಿಸಿದೆ.
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಎರಡು ದಿನಗಳ ಶೃಂಗಸಭೆಯ ಮೊದಲ ದಿನದ ಚರ್ಚೆಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ನವದೆಹಲಿ ಘೋಷಣೆಯ ಅಂಗೀಕಾರವನ್ನು ಪ್ರಕಟಿಸಿದರು.
"ಇಂದು ಅಂಗೀಕರಿಸಲಾದ ನವದೆಹಲಿ ಘೋಷಣೆಯು ನಮ್ಮ ಹಂಚಿಕೆಯ ಸಂಕಲ್ಪಕ್ಕೆ ಸ್ಪಷ್ಟ ದಿಕ್ಕನ್ನು ನೀಡುತ್ತದೆ. ಈ ನಿರ್ಣಯಗಳನ್ನು ಸ್ಪಷ್ಟ ಫಲಿತಾಂಶಗಳನ್ನಾಗಿ ಪರಿವರ್ತಿಸುವುದು ಈಗ ನಮ್ಮ ಜವಾಬ್ದಾರಿಯಾಗಿದೆ," ಎಂದು ಪ್ರಧಾನಿ ಮೋದಿ ಹೇಳಿದರು.