ಬೆಂಗಳೂರು: ವಿಧಾನಸೌಧದಲ್ಲೂ ಹಾಜರಿರದ, ಜಿಲ್ಲಾ ಪ್ರವಾಸಗಳನ್ನೂ ಮಾಡದ, ತಮ್ಮ ವಿಧಾನಸಭಾ ಕ್ಷೇತ್ರದಲ್ಲೂ ಕಾಣಸಿಗದ ರಾಜ್ಯದ ಸಚಿವ ಸಂಪುಟ ಸಚಿವರು ಪ್ರಯಾಣ ಭತ್ಯೆಯನ್ನು ಮಾತ್ರ ಉದಾರವಾಗಿ ಪಡೆದು ಕೊಂಡಿರುವ ಸಂಗತಿ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ
ಸಚಿವರು ಎಲ್ಲೂ ಕಾಣಸಿಗುವುದಿಲ್ಲ ಎಂಬುದು ಸಾರ್ವಜನಿಕರಷ್ಟೇ ಅಲ್ಲದೇ ಕಾಂಗ್ರೆಸ್ ಪಾಳಯದಲ್ಲೂ ಕೇಳಿಬಂದ ಮಾತು, ಅಷ್ಟೇ ಅಲ್ಲದೇ, ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲೂ ಈ ವಿಚಾರ ಚರ್ಚೆಗೆ ಬಂದಿತ್ತು. ಶಾಸಕರ ಮಾತಿನ ಏಟಿಗೆ ಸಚಿವರು ತಲೆ ಅಡಿಗೆ ಹಾಕಿದ್ದರು. ಆದರೆ, ಆರ್ ಟಿಐನಲ್ಲಿ ಬಂದಿರುವ ಮಾಹಿತಿಯನ್ನು ಗಮನಿಸಿದರೆ, ಸಚಿವರು ಮಾತ್ರ ಸಾಕಷ್ಟು ಸುತ್ತಾಡಿದ್ದಾರೆ. ಇದಕ್ಕಾಗಿ ಭರ್ತಿ ಭತ್ಯೆ ಭಾಗ್ಯ ಜೇಬಿಗಿಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಹೊರತುಪಡಿಸಿ 29 ಸಚಿವರಿಗೆ ಸರ್ಕಾರ ಪ್ರಯಾಣ ಭತ್ಯೆ ಎಂದು ಖರ್ಚು ಮಾಡಿರುವುದು ಬರೋಬ್ಬರಿ ರು.7.53 ಕೋಟಿ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಇನ್ನೊಂದು ಅಚ್ಚರಿ ಸಂಗತಿ ಎಂದರೆ, ಸಚಿವರಿಗೆ ಪ್ರತಿ ಕಿಲೋ ಮೀಟರ್ ಮೇಲೆ ನೀಡುವ ಭತ್ಯೆ ಗಣನೀಯವಾಗಿ ಹೆಚ್ಚಾಗಿರುವುದು ಎಲ್ಲರ ಹುಬ್ಬೇರಿಸಿದೆ. ಸಚಿವರು ತಮ್ಮ ಪ್ರಯಾಣ ಭತ್ಯೆಯ ದರವನ್ನು ಕಿ.ಮೀಗೆ ರು.20 ರಿಂದ 30 ಗಳಿಗೆ ಹೆಚ್ಚಿಸಿಕೊಂಡಿದ್ದಾರೆ. ಇದು ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿರುವುದಕ್ಕೆ ಉದಾ ಹರಣೆ ಎಂಬುದು ವಿಷಯ ಬಹಿರಂಗ ಪಡಿಸಿದ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗುಂಡಪ್ಪ ಗಡಾದ ಅಭಿಪ್ರಾಯ.
ಸಚಿವರು ತಮ್ಮ ಕ್ಷೇತ್ರಕ್ಕೂ ಹೋಗದೇ, ಜಿಲ್ಲಾ ಪ್ರವಾಸವನ್ನೂ ಮಾಡದೇ, ವಿಧಾನ ಸೌಧದಲ್ಲೂ ಕೂರದೇ ಎಲ್ಲಿ ಸುತ್ತಾಡಿದ್ದಾಕ್ಕಾಗಿ ಇಷ್ಟೊಂದು ಭತ್ಯೆ ಪಡೆದಿದ್ದಾರೆ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಒಟ್ಟು ಭತ್ಯೆ: ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿಯವ ರನ್ನು ಹೊರತುಪಡಿಸಿ ಉಳಿದ ಸಚಿವರ ವೇತನ, ಮನೆ ಬಾಡಿಗೆ ಹಾಗೂ ವಿವಿಧ ಭತ್ಯೆಗಳು ಮತ್ತು ಪ್ರಯಾಣ ಭತ್ಯೆ ಸಲುವಾಗಿ ರಾಜ್ಯದ ಬೊಕ್ಕಸದಿಂದ ಒಟ್ಟು ರು.13,79,98,244 ವೆಚ್ಚ ಮಾಡಲಾಗಿದೆ.
Advertisement