ಬೆಂಗಳೂರು: ಮೆಟ್ರೋ ಮತ್ತು ಬಿಡಿಎನ ಮ್ಯೂಚ್ಯುಯಲ್ ಫಂಡ್ ಅವ್ಯವಹಾರ ಕುರಿತು ಪ್ರಸ್ತಾಪ ಮಾಡಿ 6 ತಿಂಗಳಾಯಿತು. ಯಾರ ಮೇಲೆ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರ ಜನತೆಗೆ ಮಾಹಿತಿ ನೀಡಿಲ್ಲ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯೂಚ್ಯುಯಲ್ ಫಂಡ್ ಅವ್ಯವಹಾರ ಸುಮಾರು 3 ಸಾವಿರ ಕೋಟಿಗೂ ಮಿಗಿಲಾಗಿದೆ ಎಂಬ ಮಾಹಿತಿ ಇದೆ. ಇದನ್ನು ವಿಧಾನಸಭೆ
ಕಲಾಪದಲ್ಲೇ ಪ್ರಸ್ತಾಪಿಸಿದೆ. ಆದರೆ, ಇನ್ನೂ ತನಿಖಾ ಹಂತದಲ್ಲೇ ಇದೆ ಎಂದು ಹೇಳುತ್ತಾರೆ ವಿನಾ ಯಾರ ಮೇಲಾದರೂ ಪ್ರಕರಣ ಹೂಡಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದರು.
ಕುಡಿವ ನೀರಿನ ಬಾಬ್ತು 550 ಕೋಟಿ ಅವ್ಯವಹಾರ ಪ್ರಕರಣದ ಬಗ್ಗೆ ಕುಮಾರಸ್ವಾಮಿಯವರು ಮಾಹಿತಿ ತಿಳಿದು ಮಾತನಾಡಲಿ ಎಂದು ಎಚ್.ಕೆ. ಪಾಟೀಲ್ ಸವಾಲೆಸೆದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ ಎಚ್ಡಿಕೆ, ದಾಖಲೆಗಳನ್ನು ಪ್ರಸ್ತುತಪಡಿಸಿದರು. ತನಿಖೆಯ ಮೊದಲ ವರದಿಯನ್ನು ಪ್ರದರ್ಶಿಸಿದ ಅವರು, ಈ ಪ್ರಕರಣದ ವಿಷಯ ಪ್ರಸ್ತಾಪ ಮಾಡಿ ಎಷ್ಟು ದಿನವಾಯಿತು, ತನಿಖೆ ನಡೆಸುವುದಕ್ಕೆ ಇಷ್ಟು ದಿನ ಬೇಕೆ? ಮುಖ್ಯಮಂತ್ರಿಯವರು ಈವರೆಗೆ ಉಸಿರೇ ಎತ್ತಿಲ್ಲ. ಯಾರನ್ನು ರಕ್ಷಿಸಲು ಹೊರಟಿದ್ದೀರಾ? ಯಾರ್ಯಾರು ಎಷ್ಟು ಹಂಚಿಕೊಳ್ಳಲು ಹೊರಟಿದ್ದಾರೆ ಎಂದು ಕೇಳಬೇಕಾಗುತ್ತದೆ ಎಂದರು.
ಎಚ್.ಕೆ. ಪಾಟೀಲರು 19 ಲಕ್ಷ ಶೌಚಾಲಯಗಳು ಕಾಣೆಯಾಗಿವೆ ಎಂದು ಎರಡು ವರ್ಷದ ಕೆಳಗೆ ಹೇಳಿದ್ದರು. ತನಿಖೆ ಏನಾಯಿತು? ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೇ
ಎಂದು ಪ್ರಶ್ನಿಸಿದರು.
Advertisement