ಎತ್ತಿನ ಹೊಳೆಗೆ ತಡೆ ಇಲ್ಲ: ಎಂ.ಬಿ.ಪಾಟೀಲ್
ವಿಧಾನಸಭೆ: ಎತ್ತಿನಹೊಳೆ ಯೋಜನೆಗೆ ಚೆನ್ನೈನ ಹಸಿರು ಪೀಠ ನೀಡಿರುವ ತಡೆಯಾಜ್ಞೆ ವಿಚಾರದಲ್ಲಿ ಅಗತ್ಯ ದಾಖಲೆ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಆದರೆ, ಇದು ತಡೆಯಾಜ್ಞೆ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಅರಣ್ಯೇತರ ಜಮೀನಿನಲ್ಲಿ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆ ಅನುಮತಿ ಬೇಕು ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆಯನ್ನೂ ಪಡೆದಿದ್ದೇವೆ. ಡಿ.7ರಂದು ಸ್ಪಷ್ಟನೆ ನೀಡುವವರೆಗೆ ಕಾಮಗಾರಿ ನಡೆಸುವುದಿಲ್ಲ ಎಂದು ನಮ್ಮ ನ್ಯಾಯವಾದಿಗಳು ಭರವಸೆ ನೀಡಿದ್ದಾರೆಯೇ ವಿನಃ ತಡೆಯಾಜ್ಞೆ ನೀಡಿಲ್ಲ ಎಂದು ವಾದಿಸಿದರು. ಅರಣ್ಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಸಿಗಲಿದೆ. ಕುಡಿಯುವ ನೀರಿನ ಯೋಜನೆ ಕಾರಣ ಪರಿಸರ ಇಲಾಖೆಯಿಂದ ವಿನಾಯಿತಿ ಸಿಕ್ಕಿದೆ ಎಂದರು.
ಶಾಸಕರ ಆಕ್ಷೇಪ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್,ಅರಣ್ಯೇತರ ಜಮೀನಿನಲ್ಲಿ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಅನುಮತಿ ಯಾಕೆ ಬೇಕು .ವಕೀಲರು ಯಾಕೆ ನಿರ್ಲಕ್ಷ್ಯ ಮಾಡಿದರು ಎಂದರು. ಸಚಿವ ಪಾಟೀಲ್ ಮಾಹಿತಿ ಇರಲಿಲ್ಲ ಎಂದಾಗ ಕೆರಳಿದ ರಮೇಶ್ ಕುಮಾರ್, ಹೆರಿಗೆ ನೋವು ಹೆತ್ತವಳಿಗೆ ಗೊತ್ತು. ನೀವು ಆಲಮಟ್ಟಿ ಕೆಳಗಿರುವವರು. ನಾವು 1100 ಅಡಿ ಪಾತಾಳದಲ್ಲಿದ್ದೇವೆ. ನಿಮಗೆ ಖುಷಿ ಬಂದಂತೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ