ಬೆಂಗಳೂರು: ಕಾಂಗ್ರೆಸ್ ಹಿರಿಯರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಅಸಮಾಧಾನದಿಂದ ಪಕ್ಷಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್,ಎಂ ಕೃಷ್ಣ, ನನಗೆ ರಾಹುಲ್ ಗಾಂಧಿ ಮುಖ್ಯರಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮಾಜಿ ವಿದೇಶಾಂಗ ಸಚಿವ ಎಸ್ .ಎಂ ಕೃಷ್ಣ ನಾನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಗ್ಗೆ ಮಾತ್ರ ಮಾತನಾಡಬಲ್ಲೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಪಕ್ಷ ಎಂದ ಮೇಲೆ ಅದರ ಅಧ್ಯಕ್ಷರಷ್ಟೇ ನನಗೆ ಮುಖ್ಯ. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಕಡೆಗೆ ನೋಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಪಕ್ಷ ಮುನ್ನಡೆಸಲು ಸಮರ್ಥರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಹಿರಿತನದ ಕಾರಣದಿಂದ ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ಮಾತ್ರ ಮಾತನಾಡುವೆ. ಪ್ರಾದೇಶಿಕ ಘಟಕದ ಅಧ್ಯಕ್ಷರಾಗಿದ್ದವರು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಕಡೆಗೆ ನೋಡುತ್ತಾರೆ. ನಾನ್ಯಾಕೆ ಅವರ ಕಡೆ ನೋಡಲಿ ಎಂದು ವ್ಯಂಗ್ಯವಾಗಿ ಉತ್ತರಿಸಿದರು.
ರಾಜ್ಯ ಸರ್ಕಾರದ ಜೊತೆ ನನಗೆ ಘರ್ಷಣೆಯಿಲ್ಲ ಎಂದು ಹೇಳಿರುವ ಕೃಷ್ಣ ರಾಜ್ಯ ಕಾಂಗ್ರೆಸ್ ನಾಕರು ನಿಮ್ಮನ್ನು ಕಡಗಣಿಸಿದರೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಕರೆತರುವಲ್ಲಿ ನನ್ನ ಪಾತ್ರವೂ ಇದೆ ಎಂದು ಕೃಷ್ಣ ಹೇಳಿದರು. ಮಹಾರಾಷ್ಟ್ರ ರಾಜ್ಯಪಾಲನಾಗಿದ್ದಾಗ ರಾಜಭವನಕ್ಕೆ ಅತಿಥಿಯಾಗಿ ಬಂದಿದ್ದ ಅವರೆಲ್ಲಾ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ದೆಹಲಿಗೆ ಹೋಗಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಲಾಭವಾಗುತ್ತದೆ ಎಂದು ಹೇಳಿದ್ದೆ. ನಾನೇ ಸೇರಿಸಿದ್ದೆ ಎಂದಲ್ಲ, ಅದರಲ್ಲಿ ನನ್ನ ಪಾತ್ರವೂ ಇತ್ತು ಎಂದು ಎಸ್ ಎಂ ಕೃಷ್ಣ ಹೇಳಿದರು.
Advertisement