ಬೆಂಗಳೂರು: ನಾನು ಕಾಂಗ್ರೆಸ್ ಪಕ್ಷ ಸೇರಲು ರಾಜ್ಯ ಘಟಕದ ಯಾವ ನಾಯಕರೂ ಕಾರಣರಲ್ಲ, ಸೋನಿಯಾಗಾಂಧಿ ಒಬ್ಬರೇ ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದೇ ತಾವು ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರಿಗೆ ನೇರ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ತಾವು ಕಾಂಗ್ರೆಸ್ ಗೆ ಬರಲು ರಾಜ್ಯದ ಯಾವ ನಾಯಕರೂ ಕಾರಣರಲ್ಲ. ಅಹ್ಮದ್ ಪಟೇಲ್ ಹಾಗೂ ಸೋನಿಯಾಗಾಂಧಿ ಅವರ ಅಹ್ನಾನದ ಮೇರೆಗೆ ಕಾಂಗ್ರೆಸ್ ಬಂದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಸಿಎಂ, "ನಾನು ಇದುವರೆಗೂ ಈ ವಿಷಯ ಮಾತನಾಡಿರಲಿಲ್ಲ. ಆದರೆ, ಈಗ ಮಾತನಾಡುತ್ತೇನೆ. ಯಾವ ರಾಜ್ಯ ಕಾಂಗ್ರೆಸ್ಸಿಗರಿಂದಾಗಿಯೂ ನಾನು ಈ ಪಕ್ಷಕ್ಕೆ ಬರಲಿಲ್ಲ. ನನಗೆ ಮೊದಲಿನಿಂದಲೂ ಪರಿಚಿತರಾಗಿದ್ದ ಅಹ್ಮದ್ ಪಟೇಲ್ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರು. ಬಳಿಕ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಸಿದರು. ಭೇಟಿಯ ವೇಳೆ ಜಾತಿವಾದಿಗಳ ವಿರುದ್ಧ ಹೋರಾಡಲು ನಮ್ಮ ಜತೆಗೂಡಿ ಎಂದು ಸೋನಿಯಾ ಗಾಂಧಿ ಮನವರಿಕೆ ಮಾಡಿದರು. ಇದಕ್ಕೆ ಒಪ್ಪಿ ನಾನು ಕಾಂಗ್ರೆಸ್ ಸೇರಿದೆ. ರಾಜ್ಯದ ಯಾವ ಕಾಂಗ್ರೆಸ್ ನಾಯಕನೂ ನನ್ನನ್ನು ಕರೆಯಲಿಲ್ಲ. ಅದೆಲ್ಲ ಸುಳ್ಳು ಹೇಳಿಕೆಗಳು. ಆಗ ನಾನು ಎಬಿಪಿಜೆಡಿ ಪಕ್ಷ ರಚನೆ ಮಾಡಿದ್ದೆ. ಸ್ವಲ್ಪ ಹಿನ್ನಡೆಯಾಗಿತ್ತು. ಆಗ ನನಗೆ ಪರಿಚಯವಿದ್ದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ನನ್ನನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷ ಸೇರುವಂತೆ ಕರೆದರು. ಅನಂತರ ಅವರೇ ಕರೆದುಕೊಂಡು ಹೋಗಿ ಸೋನಿಯಾ ಗಾಂಧಿ ಭೇಟಿ ಮಾಡಿಸಿದರು ಎಂದು ಹೇಳಿದರು.
ಪಕ್ಷ ಸೇರ್ಪಡೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾತ್ರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಮಹಾರಾಷ್ಟ್ರಕ್ಕೆ ತೆರಳಿ (ಆಗ ಎಸ್.ಎಂ. ಕೃಷ್ಣ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು) ಕೃಷ್ಣಾ ಅವರನ್ನು ಭೇಟಿ ಮಾಡಿದ್ದೆ ಮತ್ತು ಸಹಕಾರ ನೀಡುವಂತೆ ಕೋರಿದ್ದೆ ಅಷ್ಟೇ ಎಂದು ಹೇಳಿದರು.
Advertisement