ರಾಜಕೀಯ
ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ, ನಾನು ಬಯಸಿದರೆ ಬಿಜೆಪಿಯ 10 ಶಾಸಕರೇ ಹೈಜಾಕ್: ನಾರಾಯಣ ಗೌಡ
ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ, ನಾನು ಬಯಸಿದರೆ ಬಿಜೆಪಿಯ 10 ಶಾಸಕರನ್ನೇ ಹೈಜಾಕ್ ಮಾಡಿ ಜೆಡಿಎಸ್ ಪಕ್ಷಕ್ಕೆ ಸೇರಿಸಬಲ್ಲ ಎಂದು ಕೃಷ್ಣರಾಜಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಹೇಳಿದ್ದಾರೆ.
ಬೆಂಗಳೂರು: ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ, ನಾನು ಬಯಸಿದರೆ ಬಿಜೆಪಿಯ 10 ಶಾಸಕರನ್ನೇ ಹೈಜಾಕ್ ಮಾಡಿ ಜೆಡಿಎಸ್ ಪಕ್ಷಕ್ಕೆ ಸೇರಿಸಬಲ್ಲ ಎಂದು ಕೃಷ್ಣರಾಜಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಹೇಳಿದ್ದಾರೆ.
ಈ ಹಿಂದೆ ನಾಪತ್ತೆಯಾಗಿದ್ದ ಶಾಸಕ ನಾರಾಯಣ ಗೌಡ ಅವರು ರೆಬೆಲ್ ಶಾಸಕರೊಂದಿಗೆ ಮುಂಬೈನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರಕ್ಕೆ ಸಂಚಕಾರ ತರುತ್ತಾರೆ ಎಂಬ ಗುಮಾನಿಗಳು ಕೂಡ ಮೂಡಿತ್ತು. ಆದರೆ ಈ ಕುರಿತ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದ ನಾರಾಯಣಗೌಡ ಅವರು, ತಾವು ಎಲ್ಲಿಗೂ ಹೋಗಿಲ್ಲ. ತಾವು ಜೆಡಿಎಸ್ ನಲ್ಲೇ ಇದ್ದು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಅನಾರೋಗ್ಯ ಸಮಸ್ಯೆಯಿಂದಾಗಿ ಜೆಡಿಎಸ್ ಶಾಸಕಾಂಗ ಸಭೆಗೆ ಗೈರಾಗುತ್ತಿದ್ದೇನೆ ಎಂದು ಹೇಳಿದ್ದರು.
ಇದೀಗ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರುವ ನಾರಾಯಣ ಗೌಡ ಅವರು, ಯಾರೂ ಕೂಡ ನನ್ನನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಆದರೆ ನಾನು ಬಯಸಿದ್ದೇ ಆದರೆ ಬಿಜೆಪಿ 10 ಶಾಸಕರನ್ನು ಹೈಜಾಕ್ ಮಾಡಿ ಜೆಡಿಎಸ್ ಪಕ್ಷಕ್ಕೆ ಸೇರಿಸುವ ಸಾಮರ್ಥ್ಯ ತಮಗಿದೆ. ಫುಡ್ ಪಾಯ್ಸನ್ ಆಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ನನ್ನ ಬಳಿ ಆಸ್ಪತ್ರೆಯ ಬಿಲ್ ಗಳು ಮತ್ತು ಇತರೆ ದಾಖಲೆಗಳಿದ್ದು, ಅಗತ್ಯ ಬಿದ್ದರೆ ತೋರಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಭಿನ್ನಮತೀಯ ಚಟುವಟಿಕೆ ಕುರಿತು ಮಾತನಾಡಿದ ಅವರು, ಪಕ್ಷದಲ್ಲಿ ಕೆಲ ಆಂತರಿಕ ಸಮಸ್ಯೆಗಳಿವೆ. ತಮ್ಮ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಅಸಮಾಧಾನ ಕೂಡ ಇದೆ. ಆದರೆ ಇವೆಲ್ಲವೂ ಪಕ್ಷದ ಆಂತರಿಕ ವಿಚಾರ. ನಾವು ಇದನ್ನು ಆಂತರಿಕವಾಗಿಯೇ ಬಗೆಹರಿಸಿಕೊಳ್ಳುತ್ತೇವೆ ಎಂದು ನಾರಾಯಣಗೌಡ ಹೇಳಿದರು.