ಅತೃಪ್ತ ಶಾಸಕರ ಗುಂಪಿನಲ್ಲಿದ್ದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಪಕ್ಷೇತರರಾಗಿ ಗುರುತಿಸಿಕೊಂಡಿದ್ದ ಕೆಪಿಜೆಪಿಯ ಆರ್.ಶಂಕರ್ ಅವರನ್ನು ಅನರ್ಹ ಮಾಡಿ ಇಂದು ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಕಳೆದ ಕೆಲವು ವಾರಗಳಿಂದ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ನಾನು ಯಾರ ಮುಲಾಜಿಗೂ ಒಳಗಾಗಿ ಈ ನಿರ್ಣಯ ಕೈಗೊಂಡಿಲ್ಲ. ಸಂವಿಧಾನದ ಪ್ರಕಾರ ಏನು ಮಾಡಬಹುದಿತ್ತೋ ಅದನ್ನೇ ಮಾಡಿದ್ದೇನೆ. ಜನರಿಂದ ಬಂದವನು ನಾನು ಜನರಿಗಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ ಎಂದು ಹೇಳಿದರು.