ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿಯವರು ಅನವಶ್ಯಕವಾಗಿ ಮಾತನಾಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೇಳಿದ್ದಾರೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿಯವರು ಅನವಶ್ಯಕವಾಗಿ ಮಾತನಾಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೇಳಿದ್ದಾರೆ
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯವರ ಜೊತೆ ಸರ್ಕಾರ ಮಾಡಿದ್ದಾಗಲೂ ಇದೇ ರೀತಿಯ ಗ್ರಾಮ ವಾಸ್ತವ್ಯವನ್ನು ಕುಮಾರಸ್ವಾಮಿ ಮಾಡುತ್ತಿದ್ದರು, ಆಗ ಇಲ್ಲದ ಅಪಸ್ವರ ಈಗ ಏಕೆ ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸ್ಥಳದಲ್ಲೆ ಸಮಸ್ಯೆ ಪರಿಹಾರ ಮಾಡುವುದು ಒಳ್ಳೆಯ ಕೆಲಸ, ಇದನ್ನು ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ ಎಂದು ಅವರು ಚಾಟಿ ಬೀಸಿದರು.
ಹಿಂದೆ ಜಿಲ್ಲಾಧಿಕಾರಿಗಳು ಇಂತಹ ಕೆಲಸ ಮಾಡುತ್ತಿದ್ದರು, ಈಗ ಸ್ವತಃ ಮುಖ್ಯಮಂತ್ರಿ ಕೂಡ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ, ಇದಕ್ಕೆ ಯಾಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ?, ಗ್ರಾಮ ವಾಸ್ತವ್ಯ ಒಳ್ಳೆಯ ಚಿಂತನೆಯಿಂದ ಕೂಡಿದ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿ ಗ್ರಾಮವಾಸ್ತವ್ಯಕ್ಕೆ ಹೋಗುವುದು ಅಧಿಕಾರಿಗಳ ವೈಫಲ್ಯ ಎಂಬ ಅರ್ಥವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಮಸ್ಯೆಗಳಿಗೆ ಸಾವಿಲ್ಲ, ಪ್ರತಿ ಪ್ರತಿ ಗಳಿಗೆಯಲ್ಲಿಯೂ ಸಮಸ್ಯೆ ಹುಟ್ಟುತ್ತಲೇ ಇರುತ್ತದೆ, ಹಳ್ಳಿಯಲ್ಲಿ ರಾತ್ರಿಯೇ ಜನ ಸಿಗುತ್ತಾರೆ. ಹಾಗಾಗಿ ಅಧಿಕಾರಿಗಳು ರಾತ್ರಿ ಜನರ ಸಮಸ್ಯೆ ಆಲಿಸಬೇಕು, ಅಧಿಕಾರಿಗಳು ರಾತ್ರಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಬೇಕು, ಜಡವಾಗಿರುವ ಆಡಳಿತ, ಅಧಿಕಾರಿಗಳನ್ನು ಜಂಗಮವಾಗಿಸುವ ಕೆಲಸ ಗ್ರಾಮವಾಸ್ತವ್ಯದಿಂದ ಆಗಬೇಕಿದೆ ಎಂದರು
ಯಾವುದೇ ಅಧಿಕಾರಿ ಹಣ ದುರಪಯೋಗ ಮಾಡಿದರೆ, ನಿಗದಿತ ಅವಧಿಯಲ್ಲಿ ಕೆಲಸ ಮಾಡಿಕೊಡದಿದ್ದರೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸರ್ಕಾರಕ್ಕೆ ತಿಳಿಸುತ್ತದೆ. ಸಮಿತಿ ಆ ಕೆಲಸ ಮಾಡುತ್ತಿದೆ ಎಂದು ವಿಶ್ವನಾಥ್ ಹೇಳಿದರು.
ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರು ಬೇಕು, ಯಾರೇ ಮುಖ್ಯಮಂತ್ರಿಯದರೂ ಅವರಿಗೆ ಸಾಕಷ್ಟು ಕೆಲಸ ಇರುತ್ತದೆ, ಮೇಲಾಗಿ ಮುಖ್ಯಮಂತ್ರಿ ಬಳಿ ಹಲವು ಖಾತೆಗಳಿವೆ, ಹೀಗಾಗಿ ಸಮಯ ಸಾಕಾಗುವುದಿಲ್ಲ. ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರಿದ್ದರೆ ಉತ್ತಮ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com