ಬೆಂಗಳೂರು: ಎಪಿಎಂಸಿ ಕಾಯ್ದೆ, ಪ್ರಮುಖವಾಗಿ ಭೂ ಸುಧಾರಣೆ ಕಾಯ್ದೆಗಳಿಗೆ ಸರ್ಕಾರ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚೆ ನಡೆಸಲು ಆಗಸ್ಟ್ 4 ರಂದು ಜೆಡಿಎಸ್ ಸಭೆ ಕರೆದಿದೆ ಎಂದು ತಿಳಿದುಬಂದಿದೆ.
ರೈತರ ಪರವಾದ ಪಕ್ಷವೆಂದೇ ಹೆಸರು ಗಳಿಸಿರುವ ಜೆಡಿಎಸ್ ಪಕ್ಷ ಎರಡು ಕಾಯ್ದೆಗಳಿಗೆ ಸರ್ಕಾರ ತಂದಿರುವ ಬದಲಾವಣೆಗಳಿಗೆ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಕಾಯ್ದೆ ಕುರಿತು ಚರ್ಚೆ ನಡೆಸಲು ಎಲ್ಲಾ ಶಾಸಕರು, ಸಂಸದರು ಹಾಗೂ ಜಿಲ್ಲಾ ನಾಯಕರನ್ನು ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದೆ ಎನ್ನಲಾಗುತ್ತಿದೆ.
1961ರಲ್ಲಿ ಜಾರಿಗೆ ತರಲಾಗಿದ್ದ ಭೂ ಸುಧಾರಣಾ ಕಾಯ್ಗೆ ಸರ್ಕಾರ ಜುಲೈ ತಿಂಗಳಿನಲ್ಲಿ ಬದಲಾವಣೆಗಳನ್ನು ತಂದಿತ್ತು. ಕೃಷಿಯೇತರರಿಗೆ ಕೃಷಿಭೂಮಿಯನ್ನು ಖರೀದಿಸಲು ಅನುವು ಮಾಡಿಕೊಟ್ಟಿತ್ತು.
ಕಾಯ್ದೆ ತಿದ್ದುಪಡಿ ವಿಚಾರ ರಾಜ್ಯದ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪುರ್ ಅವರು ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರಬರುತ್ತಿದ್ದು, ಇದಕ್ಕೂ ಮುನ್ನ ಹಲವು ಸಭೆಗಳನ್ನು ನಡೆಸಲು ಜೆಡಿಎಸ್ ಯೋಜನೆ ರೂಪಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪಂಚಾಯಿತಿ ಚುನಾವಣೆಯಲ್ಲಿ ಈ ವರೆಗೂ ಜೆಡಿಎಸ್ ಉತ್ತಮ ಫಲಿತಾಂಶವನ್ನೇ ಪಡೆದುಕೊಂಡಿದೆ. ಅದೇ ರೀತಿಯ ಫಲಿತಾಂಶ ಈ ಬಾರಿ ಪಡೆಯಲು ಪಕ್ಷ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ.
Advertisement