ಬೆಂಗಳೂರು: ಜೆಡಿಎಸ್ - ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಇಲಾಖೆಗಳಿಂದ ಮಂಜೂರಾಗಿದ್ದ 40 ಕೋಟಿ ರೂ ಅನುದಾನಕ್ಕೆ ಹಾಲಿ ಬಿಜೆಪಿ ಸರ್ಕಾರ ಕತ್ತರಿ ಹಾಕಿರುವುದನ್ನು ಜೆಡಿಎಸ್ ಮುಖಂಡ, ಮಾಜಿ ಸಚಿವ ಸಾ.ರಾ. ಮಹೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಈ ಕುರಿತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿರುವ ಅವರು, ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಕೆಡಿಪಿ ಸಭೆಯಿಂದ ದೂರ ಉಳಿಯುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಏಳು ಕೋಟಿ ರೂಪಾಯಿ, ಪೌರಾಡಳಿತ ಇಲಾಖೆಯಿಂದ ಹತ್ತು ಕೋಟಿ, ಲೋಕೋಪಯೋಗಿ ಇಲಾಖೆಯಿಂದ ೧೧.೫೦ ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ ೧೮ ಕೋಟಿ ರೂಪಾಯಿ ಅನುದಾನವನ್ನು ಸಮ್ಮಿಶ್ರ ಸರ್ಕಾರ ಮಂಜೂರು ಮಾಡಿತ್ತು.
ಹೀಗೆ ವಿವಿಧ ಇಲಾಖೆಗಳಿಂದ ಕ್ಷೇತ್ರದ ಅಭಿವದ್ಧಿಗೆ ಎಂದು ಮಂಜೂರಾದ ಈ ಹಣವನ್ನು ನಿಮ್ಮ ಸರ್ಕಾರ ತಡೆಹಿಡಿದಿದ್ದುಇದನ್ನು ವಿರೋಧಿಸಿ ಕಳೆದ ವರ್ಷದ ಅಕ್ಟೋಬರ್ ೧ ರಂದು ನಾನು ನಿಮಗೆ ಪತ್ರ ಬರೆದು ಮೈಸೂರು ದಸರಾ ಮಹೋತ್ಸವ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ತಿಳಿಸಿದ್ದೇ. ಆದರೆ ನಿಮ್ಮ ಮನವಿ ಮೇರೆಗೆ ದಸರಾ ಉತ್ಸವದಲ್ಲಿ ಪಾಲ್ಗೊಂಡೆ. ಆದರೆ ಈ ಸಂಬಂಧ ಸಮಸ್ಯೆಯನ್ನು ತಮ್ಮ ಗಮನಕ್ಕೆ ತಂದು ಹಲವು ದಿನಗಳು ಕಳೆದರೂ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದ ಹಣವನ್ನು ಬಿಡುಗಡೆ ಮಾಡಿಸಲು ತಾವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾ.ರಾ.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಂತದಲ್ಲಿ ನೀವು ಕೆಡಿಪಿ ಸಭೆಗೆ ಬರುವಂತೆ ನನಗೆ ಆಹ್ವಾನ ನೀಡಿದ್ದೀರಿ. ನಾನು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಮೊದಲು ನಮ್ಮ ಸಮಸ್ಯೆ ಬಗೆಹರಿಸಿ ಎಂದು ಸಾ.ರಾ.ಮಹೇಶ್ ಪಟ್ಟು ಹಿಡಿದಿದ್ದಾರೆ.
Advertisement