ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲು ವಿಪಕ್ಷಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಯ ನಿಗದಿಪಡಿಸಿದ್ದಾರೆ
ವಿರೋಧ ಪಕ್ಷದ ನಾಯಕರ ಕೋರಿಕೆಯಂತೆ, ವಿವಿಧ ಪಕ್ಷಗಳ ಮುಖಂಡರ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನಾಳೆ ಶುಕ್ರವಾರ ಬೆಳಗ್ಗೆ 11.30 ಗಂಟೆಗೆ ಗೃಹ ಕಛೇರಿ 'ಕೃಷ್ಣಾ' ದಲ್ಲಿ ಸಮಯಾವಕಾಶವನ್ನು ನಿಗದಿಗೊಳಿಸಿದ್ದಾರೆ
ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ನಿಯೋಗದಲ್ಲಿ ಭಾಗವಹಿಸಿರುವ ನಾಯಕರ ಪಟ್ಟಿಯನ್ನು 15 ಮಂದಿಗೆ ಸೀಮಿತಗೊಳಿಸಿ ಮುಂಚಿತವಾಗಿ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ
ರಾಜ್ಯದಲ್ಲಿ ಲಾಕ್ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವವರಿಗೆ ಯಡಿಯೂರಪ್ಪ 1,610 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಆಟೋ,ಟ್ಯಾಕ್ಸಿ,ಮಡಿವಾಳ, ಸವಿತಾ ಸಮಾಜ, ನೇಕಾರರಿಗೆ ಸಹಾಯಧನ ಪ್ರಕಟಿಸಲಾಗಿದೆ. ಅವರು ಸೇರಿದಂತೆ ಇತರೆ ಅಸಂಘಟಿತ ಕಾರ್ಮಿಕರ ಬೇಡಿಕೆಗಳ ಪಟ್ಟಿಯೊಂದಿಗೆ ಚರ್ಚಿಸಲು ವಿಪಕ್ಷ ನಾಯಕರಿಗೆ ಸಮಯಾವಕಾಶ ನೀಡುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.
Advertisement