ವಿಧಾನಪರಿಷತ್ ಚುನಾವಣೆ: ಬೆಂಗಳೂರು ನಗರ ಜಿಲ್ಲೆಯಲ್ಲಿ ಗೆಲುವಿನ ನಗೆ ಬೀರಿದ ಆಡಳಿತಾರೂಢ ಬಿಜೆಪಿ

ತೀವ್ರ ಹಣಾಹಣಿ ನಿರೀಕ್ಷಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾ ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿಯ ಗೋಪಿನಾಥ್ ರೆಡ್ಡಿ ಸುಲಭ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷವು ಬೆಂಗಳೂರು ನಗರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿಸಿದೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ಅವರ ಸುತ್ತಲೂ ನಿಂತು ಸಂಭ್ರಮಿಸುತ್ತಿರುವ ಕಾರ್ಯಕರ್ತರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ಅವರ ಸುತ್ತಲೂ ನಿಂತು ಸಂಭ್ರಮಿಸುತ್ತಿರುವ ಕಾರ್ಯಕರ್ತರು.

ಬೆಂಗಳೂರು: ತೀವ್ರ ಹಣಾಹಣಿ ನಿರೀಕ್ಷಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾ ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿಯ ಗೋಪಿನಾಥ್ ರೆಡ್ಡಿ ಸುಲಭ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷವು ಬೆಂಗಳೂರು ನಗರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿಸಿದೆ.

ಚುನಾವಣೆಯಲ್ಲಿ 2070 ಮತಗಳು ಚಲಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿಯವರು 1227 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಹುಕೋಟಿಗಳ ಒಡೆಯ ಯೂಸೂಫ್ ಷರೀಫ್ ಅವರು 830 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು. ಇನ್ನು ಪಕ್ಷೇತರ ಅಭ್ಯರ್ಥಿ ಶೀನಪ್ಪ ಅವರು ಯಾವುದೇ ಮತ ಗಳಿಸದೆ ಶೂನ್ಯದ ಸಾಧನೆ ಮಾಡಿದರು.

ಈ ಸ್ಥಾನವನ್ನು ಹಿಂದೆ ಕಾಂಗ್ರೆಸ್ ಎಂಎಲ್ಸಿ ಎಂ ನಾರಾಯಣಸ್ವಾಮಿ ಪ್ರತಿನಿಧಿಸುತ್ತಿದ್ದರು ಮತ್ತು ಈ ಕ್ಷೇತ್ರವನ್ನು  ಯಾವಾಗಲೂ ಕಾಂಗ್ರೆಸ್ ಪಕ್ಷದ ನಾಯಕರೇ ಪ್ರತಿನಿಧಿಸುತ್ತಿದ್ದರು. 2016ರ ಚುನಾವಣೆಯಲ್ಲಿ ಗೋಪಿನಾಥ್ ಅವರು ಸ್ಪರ್ಧಿಸಿದ್ದರು. ಆ ವೇಳೆ ನಾರಾಯಣಸ್ವಾಮಿ ವಿರುದ್ಧ 12 ಮತಗಳ ಅಂತರದಿಂದ ಸೋಲು ಕಂಡಿದ್ದರು.

ಪ್ರಸ್ತುತ ಈ ಗೆಲುವು 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಎದುರಿಸಲು ಬಿಜೆಪಿಗೆ ಹೆಚ್ಚಿನ ಬಲವನ್ನು ನೀಡಿದಂತಾಗಿದೆ.

ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಮಾತನಾಡಿ, ಬಿಬಿಎಂಪಿ ಕೌನ್ಸಿಲ್ ಇಲ್ಲದ ಕಾರಣ ಈ ಬಾರಿ ಬೆಂಗಳೂರು ನಗರದ ಶಾಸಕರು ಮತ್ತು ಸಂಸದರು ಮತದಾನ ಮಾಡಲಿಲ್ಲ. ಬ್ಯಾಟರಾಯನಪುರ, ಯಲಹಂಕ, ಮಹದೇವಪುರ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಬೆಂಗಳೂರು ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮತದಾರರು ಮತದಾನ ಮಾಡಲು ಸಾಧ್ಯವಾಗಿಲ್ಲ. ಪ್ರಸ್ತುತ ಫಲಿತಾಂಶವು ಈ ಕ್ಷೇತ್ರಗಳ ಮತದಾರರು ಬಿಜೆಪಿಯತ್ತ ಒಲವು ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಈ ಗೆಲುವು ಬಿಬಿಎಂಪಿ ಚುನಾವಣೆ ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂಬ ಸೂಚನೆಯನ್ನು ನೀಡಿದೆ. ಚುನಾವಣಾ ಫಲಿತಾಂಶವು 28 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಮತ್ತು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸೂಚನೆಯನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಶ್ರೀಮಂತ ಅಭ್ಯರ್ಥಿ ಯೂಸುಫ್ ಷರೀಫ್ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಆದರೆ, ಅದು ಅವರಿಗೆ ಸಹಾಯ ಮಾಡಲಿಲ್ಲ. ಮತದಾರರು ಸಂವೇದನಾಶೀಲರಾಗಿದ್ದು, ಪರಿಷತ್ ಅಥವಾ ವಿಧಾನಸಭಾ ಚುನಾವಣೆಯಾಗಲೀ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಇದು ಅವರಿಗೆ ಬಿಜೆಪಿ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com