ಚಾಮರಾಜನಗರ ದುರಂತ: ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ; ಸ್ವಪಕ್ಷೀಯರ ವಿರುದ್ಧ ಬಿಜೆಪಿ ಮುಖಂಡ ವಿಶ್ವನಾಥ್ ಗರಂ!

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್'ಸಿ ಎ.ಹೆಚ್.ವಿಶ್ವನಾಥ್ ಅವರು ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. 
ಬಿಜೆಪಿ ಎಂಎಲ್'ಸಿ ಎ.ಹೆಚ್.ವಿಶ್ವನಾಥ್
ಬಿಜೆಪಿ ಎಂಎಲ್'ಸಿ ಎ.ಹೆಚ್.ವಿಶ್ವನಾಥ್

ಮೈಸೂರು: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್'ಸಿ ಎ.ಹೆಚ್.ವಿಶ್ವನಾಥ್ ಅವರು ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಪರಿಹಾರವನ್ನು ಘೋಷಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಬಹುದಿತ್ತು. ಕೂಡಲೇ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಎಲ್ಲಾ ಪಿಡಬ್ಲ್ಯೂಡಿ ಕೆಲಸಗಳನ್ನು ನಿಲ್ಲಿಸಿ, ಪರಿಹಾರಕ್ಕೆ ಹಣವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದರು. 

ನಾವು ಜಡ್ಜ್‌ಗಳನ್ನ ಸರ್ವಜ್ಞರು ಎಂದೇ ನೋಡುತ್ತೇವೆ. ಕೇಂದ್ರಕ್ಕೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಹೈಕೋರ್ಟ್‌ಗಳೆ ಸೂಚನೆ ಕೊಡುತ್ತಿವೆ. ಚಾಮರಾಜನಗರ ಘಟನೆಯಲ್ಲಿ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿದ್ದರಿಂದಲೇ ಮೈಸೂರಿನ ಗೌರವಕ್ಕೆ ಯಾವುದೇ ಧಕ್ಕೆ ಬರಲಿಲ್ಲ ಎಂದು ವಿಶ್ವನಾಥ್ ಹೇಳಿದರು. 

ಅಧಿಕಾರಿಗಳೇ ಆಗಿದ್ದರೆ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಸತ್ತವರು ಮೂರೇ ಜನ. ಇದಕ್ಕೆ ಮೈಸೂರು  ಜಿಲ್ಲಾಧಿಕಾರಿಯೇ ಕಾರಣ ಎಂದು ವರದಿ ನೀಡುತ್ತಿದ್ದರು. ಆದರೆ ನ್ಯಾಯಾಂಗ ಯಾವತ್ತೂ ನ್ಯಾಯದ ಪರವಾಗಿಯೇ ಇರುತ್ತದೆ. ಹಾಗಾಗಿ ನ್ಯಾಯಾಂಗ ವ್ಯವಸ್ಥೆಗೆ ನನ್ನ ಧನ್ಯವಾದ ಎಂದು ತಿಳಿಸಿದ್ದಾರೆ. 

ಸದಾನಂದಗೌಡರು ಕೇಂದ್ರ ಸಚಿವರಾಗಿರುವವರು. ಸಿ.ಟಿ.ರವಿ ಸಚಿವರಾಗಿದ್ದವರು. ಇವರೆ ಸರ್ಕಾರ.  ಸರ್ಕಾರದ ಭಾಗವಾಗಿದ್ದ ಇವರುಗಳು ಈ ರೀತಿಯ ಮಾತುಗಳನ್ನಾಡುವುದು ಸಮಂಜಸವಲ್ಲ. ಸದಾನಂದಗೌಡರು ನೇಣು ಹಾಕಿಕೊಳ್ಳಲಾ ಎಂದರೆ ಸರ್ಕಾರವೇ ನೇಣು ಹಾಕಿಕೋಳ್ಳುತ್ತಾ? ಈ ದೇಶದಲ್ಲಿ ಕಾನೂನು ಇದೆ. ನಾಯಕರಿಂದಲೆ ಈ ರೀತಿಯ ವರ್ತನೆ ಸೂಕ್ತವಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com