ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಪೋಣಿಸಿದ ಸುಳ್ಳಿನ ಮಣಿ ಭಗ್ನವಾಗಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಪ್ರಕರಣದಲ್ಲಿ ಆರಂಭದಿಂದಲೂ ಕಾಂಗ್ರೆಸ್ ಸುಳ್ಳನ್ನೇ ಹೇಳುತ್ತಾ ಬರುತ್ತಿದೆ. ಕಾಂಗ್ರೆಸ್ ಸತ್ಯ ಹೇಳಿದ್ದರೆ, ಪ್ರಕರಣ ವಜಾಗೊಳಿಸುವಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನ್ಯಾಯವಾದಿಗಳು ಮಾಡಿದ ವಾದವನ್ನು ನ್ಯಾಯಾಲಯ ವಜಾಗೊಳಿಸುತ್ತಿತ್ತೇ? ಎಂದು ಪ್ರಶ್ನಿಸಲಾಗಿದೆ.
ಸುಳ್ಳು ಪಾಪ, ಸತ್ಯ ತಪಸ್ಸು ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರ ವಂಶವಾಹಿನಿಯಲ್ಲೇ ಸುಳ್ಳು ಪ್ರವಹಿಸುತ್ತಿದೆ. ಸತ್ಯದ ಸಮಾಧಿ ಮಾಡಿ, ಸುಳ್ಳಿನ ಅರಮನೆ ಕಟ್ಟದೇ ಇದ್ದಿದ್ದರೆ ಕಾಂಗ್ರೆಸ್ ಇಷ್ಟು ವರ್ಷ ದೇಶದಲ್ಲಿ ಆಡಳಿತ ನಡೆಸಲು ಸಾಧ್ಯವೇ ಇರಲಿಲ್ಲ ಎಂದು ಸರಣಿ ಟ್ವೀಟ್ ನಲ್ಲಿ ಟೀಕಿಸಲಾಗಿದೆ.
ಈ ಪ್ರಕರಣ ನ್ಯಾಯಾಲಯದಲ್ಲಿ ದಾಖಲಾದ ದೂರಿನ ಅನ್ವಯ ನಡೆಯುತ್ತಿದೆ. ಇದು ವಾಸ್ತವ ಎಂದಿರುವ ಬಿಜೆಪಿ, ಸತ್ಯವೇ ನಮ್ಮ ತಾಯಿ -ತಂದೆ ಎನ್ನುತ್ತಾ ಸುಳ್ಳನ್ನೇ ಉಸಿರಾಡುವ ಕಾಂಗ್ರೆಸ್ ಮುಖಂಡರು, ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದರು ಎಂದು ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಸ್ವಾತಂತ್ರ್ಯ ಯೋಧರ ಪಟ್ಟ ಕಟ್ಟಲು ಹೊರಟಿದ್ದಾರೆ. ಇದು ಸ್ವಾತಂತ್ರ್ಯ ಯೋಧರಿಗೆ ಮಾಡಿದ ಅವಮಾನ ಎಂದು ಟೀಕಿಸಲಾಗಿದೆ.
Advertisement