ಬೆಂಗಳೂರು: ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತದೇ ಹಳೆ ಕ್ಯಾಸೆಟ್, ಆತ್ಮವಂಚನೆಯ ಮಾತುಗಳನ್ನಾಡಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಪ್ರಧಾನಿ ಭಾಷಣ ಕುರಿತು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ನರೇಂದ್ರ ಮೋದಿ ಶೇ.40 ರಷ್ಟು ಕಮಿಷನ್ ಲೂಟಿ ಬಗ್ಗೆ ಮಾತನಾಡದಿರುವುದು ಆತ್ಮ ವಂಚಕತನವಲ್ಲವೇ ಎಂದು ಪ್ರಶ್ನಿಸಿದೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ ಎಂದು ಹಳೆ ಸುಳ್ಳನ್ನು ಪುನರಾವರ್ತಿಸುವ ಮೂಲಕ ತಮ್ಮ ನಯವಂಚಕತನವನ್ನು ತೋರಿದ್ದಾರೆ ಎಂದು ಆರೋಪಿಸಿದೆ..
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರೆ ಹಾನಿ ಪ್ರದೇಶಗಳ ಭೇಟಿಗೆ ಪ್ರಧಾನಿಯನ್ನು ಆಹ್ವಾನಿಸಲಿಲ್ಲವೇಕೆ? ಅತಿವೃಷ್ಟಿ ವರದಿ ನೀಡಿ, ಪರಿಹಾರಕ್ಕೆ ಬೇಡಿಕೆ ಇಡಲಿಲ್ಲವೇಕೆ? ಜಿಎಸ್ ಟಿ ಬಾಕಿ ಮತ್ತು ರಾಜ್ಯದ ಪಾಲಿನ ಅನುದಾನಗಳ ಬಿಡುಗಡೆಗೆ ಕೇಳಲಿಲ್ಲವೇಕೆ? ಸೇರಿದಂತೆ ಸರಣಿ ಪ್ರಶ್ನೆ ಮಾಡಲಾಗಿದೆ.
ಜನರನ್ನು ಕರೆತರಲು ಹಗಲು ರಾತ್ರಿ ಶತಪ್ರಯತ್ನ ಮಾಡಿದ್ದರೂ ಸಮಾವೇಶಕ್ಕೆ ಸೇರಿದ್ದು ಕೆಲವೇ ಸಾವಿರ ಜನ. ರಾಜ್ಯದ ಜನತೆಗೆ ಮೋದಿ ಮೋಸದ ಅಸಲಿ ಬಂಡವಾಳ ತಿಳಿದುಹೋಗಿದೆ. ರಾಜ್ಯದ ಭ್ರಷ್ಟ ಸರ್ಕಾರದ ಮೇಲೆ ಆಕ್ರೋಶ ಇಮ್ಮಡಿಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
Advertisement