ಗುಜರಾತ್ ಬೆನ್ನಲ್ಲೇ ರಾಜ್ಯದಲ್ಲೂ ಅವಧಿ ಪೂರ್ವ ಚುನಾವಣೆ?: ಅಂತಹ ಯಾವುದೇ ಚಿಂತನೆಗಳಿಲ್ಲ ಎಂದ ಬಿಜೆಪಿ

ಗುಜರಾತ್ ರಾಜ್ಯ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲೂ ಅವಧಿ ಪೂರ್ವ ಚುನಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಬಗ್ಗೆ ಯಾವುದೇ ಚಿಂತನೆಗಳಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಗುಜರಾತ್ ರಾಜ್ಯ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲೂ ಅವಧಿ ಪೂರ್ವ ಚುನಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಬಗ್ಗೆ ಯಾವುದೇ ಚಿಂತನೆಗಳಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

“ಗುಜರಾತ್‌ನಂತೆ ಅವಧಿ ಪೂರ್ವ ಚುನಾವಣೆಗೆ ಹೋದರೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ನಾವಿಲ್ಲ. ನಮ್ಮಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳು ಜಾರಿಯಾಗಬೇಕಿದ್ದು, ಸರ್ಕಾರದ ರಿಪೋರ್ಟ್ ಕಾರ್ಡ್ ಕೈಯಲ್ಲಿ ಹಿಡಿದು ಚುನಾವಣೆಗೆ ಮುಂದಾಗುತ್ತೇವೆ. ಬೊಮ್ಮಾಯಿ ಸರ್ಕಾರ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಬೇಕಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಎಸ್‌ಸಿ/ಎಸ್‌ಟಿ ಮೀಸಲಾತಿಯಲ್ಲಿ ಶೇಕಡಾ 6 ರಷ್ಟು ಹೆಚ್ಚಳ, 11,133 ಪೌರಕಾರ್ಮಿಕರನ್ನು ಕಾಯಂಗೊಳಿಸುವುದು ಮತ್ತು ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ರಾಜ್ಯಾದ್ಯಂತ 32 ಲಕ್ಷ ಮನೆಗಳಿಗೆ ಕುಡಿಯುವ ನೀರು ಯೋಜನೆಗಳು ಪಕ್ಷಕ್ಕೆ ಸಹಕಾರಿಯಾಗಲಿದೆ.

ಭ್ರಷ್ಟಾಚಾರ, ಗಡಿ ವಿವಾದ, ಇತರ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳದ ಬೇಡಿಕೆಗಳು, ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ಮತ್ತು ಕಬ್ಬಿಗೆ ನ್ಯಾಯಯುತ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಹೆಚ್ಚಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

ಏತನ್ಮಧ್ಯೆ, ಪಕ್ಷವು ತನ್ನ ಹಿಂದೂ ಪರ ನಿಲುವಿಗೆ ಬಲವಾಗಿ ನಿಲ್ಲಬೇಕಿದ್ದು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಬೊಮ್ಮಾಯಿ ಅವರು ಮಾರ್ಚ್ 2023 ರಲ್ಲಿ ಜನಪ್ರಿಯ ಚುನಾವಣಾ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಅವಧಿ ಪೂರ್ವ ಚುನಾವಣೆ ಮಾತುಗಳು ವಿರೋಧಪಕ್ಷಗಳು ಪ್ರಮುಖವಾಗಿ ಕಾಂಗ್ರೆಸ್ ಪಕ್ಷಕ್ಕೆ ಕಳವಳವನ್ನುಂಟು ಮಾಡಿದೆ. ಚುನಾವಣೆಗೆ ಸಿದ್ಧತೆಗಳ ನಡೆಸಲು ಕಾಲಾವಕಾಶ ಬೇಕಿದ್ದು, ಅವಧಿ ಪೂರ್ವವಾಗಿ ಚುನಾವಣೆ ನಡೆಸಿದ್ದೇ ಆದರೆ, ಆದು ಬಿಜೆಪಿಗೆ ಲಾಭದಾಯಕವಾಗಲಿದೆ. ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಈಗಾಗಲೇ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭಿಸಿದ್ದು, ಜನರಿಂದ ಭಾರೀ ವಿಶ್ವಾಸವನ್ನು ಪಡೆದುಕೊಳ್ಳುತ್ತಿದೆ.

ಇನ್ನು ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಈ ನಡುವೆ ಜನವರಿ 8 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ತನ್ನ ಎಸ್‌ಸಿ/ಎಸ್‌ಟಿ ಸಮಾವೇಶ, ಐಕ್ಯತಾ ಸಮಾವೇಶವನ್ನು ಕಾಂಗ್ರೆಸ್ ವಿಳಂಬಗೊಳಿಸಲು ನಿರ್ಧರಿಸಿದೆ.

ಬೊಮ್ಮಾಯಿ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಂಶವನ್ನು ಮುಖ್ಯವಾಗಿ ಅವಲಂಬಿಸಿರುವುದರಿಂದ ಅವಧಿಪೂರ್ವಚುನಾವಣೆಯನ್ನು ಎದುರಿಸಲು ಪಕ್ಷಕ್ಕೆ ಕಷ್ಟಕರವಾಗಲಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com