ಕಾಂಗ್ರೆಸ್ ಹಿರಿಯ ನಾಯಕ ಬ್ರಿಜೇಶ್ ಕಾಳಪ್ಪ ಎಎಪಿ ಸೇರ್ಪಡೆ

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಅವರು ಆಮ್‌ ಆದ್ಮಿ ಪಾರ್ಟಿಗೆ ಸೋಮವಾರ ಸೇರ್ಪಡೆಯಾದರು.
ಆಪ್ ಸೇರಿದ ಬ್ರಿಜೇಷ್ ಕಾಳಪ್ಪ
ಆಪ್ ಸೇರಿದ ಬ್ರಿಜೇಷ್ ಕಾಳಪ್ಪ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಅವರು ಆಮ್‌ ಆದ್ಮಿ ಪಾರ್ಟಿಗೆ ಸೋಮವಾರ ಸೇರ್ಪಡೆಯಾದರು.

ಬೆಂಗಳೂರಿನ ಹೊಟೇಲ್‌ ಪರಾಗ್‌ನಲ್ಲಿ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಎಎಪಿಯ ಕರ್ನಾಟಕ ಉಸ್ತುವಾರಿ ದಿಲೀಪ್‌ ಪಾಂಡೆರವರು ಬ್ರಿಜೇಶ್‌ ಕಾಳಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷ ಸೇರಿ ಮಾತನಾಡಿದ ಬ್ರಿಜೇಶ್‌ ಕಾಳಪ್ಪ, “ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು ಹೊಸಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟ ಆಡಳಿತ ಹೇಗಿರುತ್ತದೆ ಎಂಬುದನ್ನು ದೇಶಕ್ಕೆ ತೋರಿಸಿಕೊಡುತ್ತಿದೆ. ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೇ ದುರಾಡಳಿತ ನೀಡುತ್ತಿರುವ ಬಿಜೆಪಿಗೆ ಸಡ್ಡು ಹೊಡೆಯುವ ಸಾಮರ್ಥ್ಯವು ಆಮ್‌ ಆದ್ಮಿ ಪಾರ್ಟಿಗಿದೆ. ಮುಂಬರುವ ವಿವಿಧ ಚುನಾವಣೆಗಳಲ್ಲಿ ಎಎಪಿ ಜಯಗಳಿಸಿ ಅಧಿಕಾರ ಹಿಡಿದರೆ ಮಾತ್ರ ದೇಶದ ಭವಿಷ್ಯ ಬಲಗೊಳ್ಳಲಿದೆ” ಎಂದರು.

ಬ್ರಿಜೇಶ್‌ ಕಾಳಪ್ಪರವರನ್ನು ಸ್ವಾಗತಿಸಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ದೇಶದಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಹಂಬಲವಿರುವ ನಾಯಕರಲ್ಲಿ ಬ್ರಿಜೇಶ್‌ ಕಾಳಪ್ಪ ಒಬ್ಬರು. ರಾಜಕೀಯ ಹಾಗೂ ಆಡಳಿತದಲ್ಲಿ ಆಮ್‌ ಆದ್ಮಿ ಪಾರ್ಟಿಯು ಬದಲಾವಣೆ ತಂದಿರುವುದನ್ನು ಮನಗಂಡು ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜನಪರ ಕಾಳಜಿಯಿರುವವರಿಗೆ ಹಾಗೂ ದೇಶದ ಭವಿಷ್ಯಕ್ಕಾಗಿ ದುಡಿಯುವ ಹಂಬಲ ಇರುವವರಿಗೆ ಎಎಪಿಯು ಉತ್ತಮ ವೇದಿಕೆಯಾಗಿದ್ದು, ಇದನ್ನು ಇನ್ನಷ್ಟು ನಾಯಕರು ಸದುಪಯೋಗ ಪಡಿಸಿಕೊಳ್ಳಬೇಕು” ಎಂದರು.

“ಸಜ್ಜನ ನಾಯಕರನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಂತಹ ಪಕ್ಷಗಳು ಮೂಲೆಗುಂಪು ಮಾಡುತ್ತಿವೆ. ಅವುಗಳಿಗೆ ಕಮಿಷನ್‌ ರೂಪದಲ್ಲಿ ಜನರ ತೆರಿಗೆ ಹಣವನ್ನು ಕೊಳ್ಳೆಹೊಡೆಯುವ ನಾಯಕರು ಬೇಕೇ ವಿನಹ ಪ್ರಾಮಾಣಿಕರು ಬೇಡ. ಹಣಬಲ ಹಾಗೂ ತೋಳುಬಲವಿಲ್ಲದ ಒಳ್ಳೆಯ ಜನರನ್ನು ಅಧಿಕಾರದಿಂದ ದೂರವಿಡಲು ಆ ಪಕ್ಷಗಳ ನಾಯಕರು ಸದಾ ಯೋಜನೆ ರೂಪಿಸುತ್ತಿರುತ್ತಾರೆ. ಇದರಿಂದಾಗಿ ಅನೇಕ ಸಜ್ಜನ ರಾಜಕಾರಣಿಗಳು ಆಮ್‌ ಆದ್ಮಿ ಪಾರ್ಟಿಯತ್ತ ಮುಖ ಮಾಡುತ್ತಿದ್ದಾರೆ. ಎಎಪಿಯ ಸತ್ಯ-ನಿಷ್ಠೆಯ ರಾಜಕಾರಣ ಹಾಗೂ ಕೊಟ್ಟ ಮಾತಿಗೆ ತಪ್ಪದಿರುವ ಗುಣವು ಒಳ್ಳೆಯ ಮನಸ್ಸುಗಳನ್ನು ಆಕರ್ಷಿಸುತ್ತಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಮಾಜಿ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಪಕ್ಷದ ಮಾಧ್ಯಮ ವಕ್ತಾರ ಕೆ. ಮಥಾಯಿ, ಪಕ್ಷದ ಮುಖಂಡರಾದ ಮೋಹನ್‌ ದಾಸರಿ, ಸಂಚಿತ್ ಸಹವಾನಿ, ಜಗದೀಶ್‌ ವಿ ಸದಂ, ಕುಶಲಸ್ವಾಮಿ, ಚನ್ನಪ್ಪಗೌಡ ನಲ್ಲೂರು, ಸುರೇಶ್ ರಾಥೋಡ್ ,ದರ್ಶನ್ ಜೈನ್ ಮತ್ತಿತರ ನಾಯಕರು, ಕಾರ್ಯಕರ್ತರು ಹಾಗೂ ಬ್ರಿಜೇಶ್‌ ಕಾಳಪ್ಪರವರ ಅನೇಕ ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com