ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಶೇ.75ಕ್ಕೆ ಹೆಚ್ಚಿಸುತ್ತೇವೆ: ಸಿದ್ದರಾಮಯ್ಯ (ಸಂದರ್ಶನ)

ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಸಿದ್ಥತೆಗಳನ್ನು ನಡೆಸುತ್ತಿದೆ. ಈ ನಡುವಲ್ಲೇ ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ಎಲ್ಲಾ ಅರ್ಹ ಸಮುದಾಯಗಳಿಗೆ ಒಟ್ಟಾರೆ ಮೀಸಲಾತಿಯನ್ನು ಶೇ.75 ಹೆಚ್ಚುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ.
ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ.

ಬೆಂಗಳೂರು: ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಸಿದ್ಥತೆಗಳನ್ನು ನಡೆಸುತ್ತಿದೆ. ಈ ನಡುವಲ್ಲೇ ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ಎಲ್ಲಾ ಅರ್ಹ ಸಮುದಾಯಗಳಿಗೆ ಒಟ್ಟಾರೆ ಮೀಸಲಾತಿಯನ್ನು ಶೇ.75 ಹೆಚ್ಚುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎಲ್ಲಾ ಅರ್ಹ ಸಮುದಾಯಗಳಿಗೇಕೆ ಮೀಸಲಾತಿಯನ್ನು ಶೇ.75ಕ್ಕೆ ಹೆಚ್ಚಿಸಬಾರದು? ಆರ್ಥಿಕವಾಗಿ ದುರ್ಬಲ ವರ್ಗಗಳು ಸೇರಿದಂತೆ ಎಲ್ಲಾ ವರ್ಗಗಳಿಗೆ ಮೀಸಲಾತಿ ಸಿಕ್ಕಿದೆ, ಸಾಮಾನ್ಯ ವರ್ಗಕ್ಕೇಕೆ ಹೆಚ್ಚಿನ ಮೀಸಲಾತಿ ಬೇಕು ಎಂದು ಪ್ರಶ್ನಿಸಿದ್ದಾರೆ.

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಪ್ರಸ್ತತ ರಾಜಕೀಯ ಪರಿಸ್ಥಿತಿಯನ್ನು ಹೇಗೆ ನೋಡುತ್ತೀರಿ?
ಪ್ರಸ್ತುತ ರಾಜ್ಯದ ಬೆಳವಣಿಗೆಗಳನ್ನು ನೋಡಿದರೆ, ಪರಿಸ್ಥಿತಿ ಕಾಂಗ್ರೆಸ್ ಪರವಾಗಿದೆ. ಏಕೆಂದರೆ ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಕಾರಣದಿಂದ ಬಿಜೆಪಿ ಸರ್ಕಾರದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಎದ್ದಿದೆ. ರೈತರು, ಮಹಿಳೆಯರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯದ ಜನತೆ ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತು ಹೋಗಿದ್ದಾರೆ. ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಜನರು ಸರ್ಕಾರವನ್ನು ಬದಲಾಯಿಸಲು ಬಯಸಿದ್ದಾರೆ. ನಾವು ಎಲ್ಲಿಯೇ ಹೋದರೂ ಜನರು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ.

ಕಾಂಗ್ರೆಸ್ ಹಲವಾರು ಯೋಜನೆಗಳನ್ನು ಘೋಷಿಸಿದೆ, ಆದರೆ, ಬಜೆಟ್‌ನ ಗಾತ್ರದ ದೃಷ್ಟಿಯಲ್ಲಿ ನೋಡುವುದಾದರೆ, ಅವುಗಳನ್ನು ಜಾರಿಗೆ ತರುವುದು ಅಸಾಧ್ಯ ಎಂದು ಬಿಜೆಪಿ ಹೇಳುತ್ತಿದೆ?
ಅದಕ್ಕೆ ಬೇಕಾಗುವ ಬಜೆಟ್ ಅಂದಾಜಿನ ನಂತರವೇ ‘ಕಾಂಗ್ರೆಸ್ ಗ್ಯಾರಂಟಿ’ ಯೋಜನೆಯನ್ನು ಘೋಷಿಸಿದ್ದೇವೆ. ಅವರಿಗೆ ಸುಮಾರು 50,000 ಕೋಟಿ ರೂಪಾಯಿ ಬೇಕಾಗಬಹುದು, ಆದರೆ ಬಜೆಟ್‌ನ ಗಾತ್ರವು 3.10 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಈ ಗಾತ್ರ ರೂ. 3.30 ಲಕ್ಷ ಕೋಟಿಗೂ ಹೋಗಬಹುದು. ನಮ್ಮ ಪ್ರಣಾಳಿಕೆ ಘೋಷಣೆಗಳನ್ನು ಐದು ವರ್ಷದಲ್ಲಿ ಪೂರ್ಣಗೊಳಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಭರವಸೆಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದೇವೆ. ಅಸಲು ಮತ್ತು ಬಡ್ಡಿಯ ಮರುಪಾವತಿ 56,000 ಕೋಟಿ ರೂ ಆಗಿರುವಾಗ, ಈ ಯೋಜನೆಗಳಿಗೆ ನಾವು ರೂ 50,000 ಕೋಟಿ ನೀಡಲು ಸಾಧ್ಯವಿಲ್ಲವೇ?

ವರುಣಾದಲ್ಲಿ ನಿಮ್ಮ ವಿರುದ್ಧ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು, ನಿಮ್ಮ ಗೆಲುವು ಕಷ್ಟವಾಗುತ್ತದೆ ಎಂದೆನಿಸುತ್ತದೆಯೇ?
ಬಿಜೆಪಿಯನ್ನು ಎದುರಿಸಬೇಕು ಮತ್ತು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತಗಳ ವಿರುದ್ಧ ಹೋರಾಡಬೇಕಾಗಿರುವುದರಿಂದ ನನ್ನ ವಿರುದ್ಧ ಅಭ್ಯರ್ಥಿ ಯಾರು ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ವರುಣಾದಲ್ಲಿ 2008ರಲ್ಲಿ 28,000, 2013ರಲ್ಲಿ 31,000 ಮುನ್ನಡೆಯೊಂದಿಗೆ ಗೆಲುವು ಸಾಧಿಸಿದ್ದೆ. 2018ರಲ್ಲಿ ನನ್ನ ಮಗ 58,000 ಮತಗಳೊಂದಿಗೆ ಗೆಲವು ಸಾಧಿಸಿದ್ದ.ಈ ಬಾರಿಯೂ ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತೇನೆ.

ನಿಮ್ಮನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದವಾಗಾದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?
ವರುಣಾದಲ್ಲಿ ಜೆಡಿಎಸ್‌ ಮಾಜಿ ಶಾಸಕ ಭಾರತಿ ಶಂಕರ್‌ ಅವರನ್ನು ಕಣಕ್ಕಿಳಿಸುತ್ತಿರುವುದೇಕೆ? ಇದರ ಉದ್ದೇಶ ಪರಿಶಿಷ್ಟ ಜಾತಿ ಮತಗಳನ್ನು ವಿಭಜಿಸುವುದಾಗಿದೆ. .2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ವಿರುದ್ಧ ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆ ಅಭ್ಯರ್ಥಿ ಕೇವಲ 3 ಸಾವಿರ ಮತಗಳನ್ನು ಪಡೆದಿದ್ದರು. ಆದರೆ, ಬಿಜೆಪಿಯ ಸಂಪೂರ್ಣ ಮತಗಳು ಜೆಡಿಎಸ್‌ಗೆ ಸೇರಿದ್ದವು. ಇದನ್ನು ನೋಡಿದರೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಳಒಪ್ಪಂದವಾಗಿರುವುದು ಖಚಿತ.

ನಿಮ್ಮ ಪಕ್ಷದೊಳಗೆ ನಿಮ್ಮ ವಿರುದ್ಧ ಶತ್ರುಗಳಿದ್ದಾರೆ ಎಂದು ನೀವು ಭಾವಿಸುವುದಿಲ್ಲವೇ?
ನನ್ನ ಪಕ್ಷದಲ್ಲಿ ನನಗೆ ಯಾವುದೇ ಶತ್ರುಗಳಿಲ್ಲ. ಅವರೆಲ್ಲರೂ ನನ್ನ ಒಡನಾಡಿಗಳು.

ಪ್ರಸ್ತುತದ ಪರಿಸ್ಥಿತಿಯನ್ನು ಗಮನಿಸಿದರೆ ಲಿಂಗಾಯತರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ನೀವು ಭಾವಿಸುತ್ತೀರಾ?
ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದ್ದು, ಎಲ್ಲಾ ಸಮುದಾಯಗಳು ಮತಗಳು ಪಕ್ಷಕ್ಕೆ ಬಂದಿವೆ. ಎಲ್ಲಾ ಸಮುದಾಯಗಳನ್ನು ಗೌರವಿಸುವ ಏಕೈಕ ಪಕ್ಷ ನಮ್ಮದಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ಸಾಧ್ಯತೆ ಬಗ್ಗೆ ನಿಮ್ಮ ಅಭಿಪ್ರಾಯ?
ಖರ್ಗೆ ಅವರು ಸಿಎಂ ಆಕಾಂಕ್ಷಿಯಲ್ಲ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಶ್ರಮಿಸುತ್ತಿದ್ದೇವೆ ಮತ್ತು ಹೊಸದಾಗಿ ಆಯ್ಕೆಯಾದ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ.

ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಅಧಿಕಾರ-ವಿರೋಧಿಯನ್ನು ಜಯಿಸಲು ಇದು ಅವರಿಗೆ ಸಹಾಯ ಮಾಡುತ್ತದೆ ಎಂದು ನೀವು ಭಾವಿಸುತ್ತೀರಾ?
ಇದು ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ. ಕೆಲವು ಕ್ಷೇತ್ರಗಳಲ್ಲಿ ಅವರು ಹಾಲಿ ಶಾಸಕರನ್ನು ಬದಲಾಯಿಸಿರಬಹುದು, ಆದರೆ, ಕರ್ನಾಟಕದಲ್ಲಿ ಬಿಜೆಪಿ ಮತ್ತು ಅದರ ಸರ್ಕಾರದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಎದ್ದಿದೆ. ಯಾರೇ ಬದಲಾದರೂ ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ಅಳಿಸಲು ಸಾಧ್ಯವಿಲ್ಲ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 40 ಪರ್ಸೆಂಟ್ ಕಮಿಷನ್ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ?
ನಾವು ವಿಶೇಷ ಆಯೋಗವನ್ನು ರಚಿಸುತ್ತೇವೆ ಮತ್ತು ಈ ಎಲ್ಲಾ ಆರೋಪಗಳ ತನಿಖೆ ನಡೆಸುವಂತೆ ಸೂಚನೆ ನೀಡಲಾಗುತ್ತದೆ.

ಮೂರು ಪಕ್ಷಗಳ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?
ನನ್ನ ಪ್ರಕಾರ ಕಾಂಗ್ರೆಸ್ 130ರಿಂದ 150 ಸ್ಥಾನ, ಜೆಡಿಎಸ್ 20ರಿಂದ 25, ಬಿಜೆಪಿ 55ರಿಂದ 60 ಸ್ಥಾನ ಗೆಲ್ಲಬಹುದು.

ಇದನ್ನೂ ಓದಿ:

‘ಆಪರೇಷನ್ ಕಮಲ’ ನಿಜವಾಗಿಯೂ ಕಾಳಜಿವಹಿಸಬೇಕಾದ ವಿಚಾರವೇ?
ನಾವು 115 ಅಥವಾ 120 ಸೀಟುಗಳನ್ನು ಪಡೆದರೆ, ಅವರು ಈ ಪ್ರಯತ್ನಗಳನ್ನು ಮಾಡುವ ಸಾಧ್ಯತೆಗಳಿವೆ. ಆದರೆ, ನಾವು ಕನಿಷ್ಠ 130 ಸೀಟುಗಳನ್ನು ಪಡೆಯುವುದರಿಂದ ಇಂತಹ ಪರಿಸ್ಥಿತಿ ಎದುರಾಗುವುದಿಲ್ಲ. ಈ ಆಪರೇಷನ್ ಕಮಲಕ್ಕೆ ನಾಂದಿ ಹಾಡಿದವರು ಯಡಿಯೂರಪ್ಪ. ಅದಕ್ಕೂ ಮೊದಲು ಕರ್ನಾಟಕದಲ್ಲಿ ಇಂತಹ ಪದ್ಧತಿ ಇರಲಿಲ್ಲ. ಅಧಿಕಾರ ಮತ್ತು ಹಣದ ಹೆಸರಿನಲ್ಲಿ ಅವರು ಪ್ರಯತ್ನಿಸಬಹುದು, ಆದರೆ. ಅವರು ಇಡೀ ಕಾಂಗ್ರೆಸ್ ಖರೀದಿ ಮಾಡಲು ಸಾಧ್ಯವಿಲ್ಲ. ಅವರು ಅಂತಹ ಸರ್ಕಾರವನ್ನು ರಚಿಸಿದರೂ, ಆ ಸರ್ಕಾರ ಉಳಿಯುತ್ತದೆ ಎಂದು ನೀವು ಭಾವಿಸುತ್ತೀರಾ?

ಬಿಜೆಪಿ ನೀಡಿರುವ ಒಳಮೀಸಲಾತಿ ಕಾಂಗ್ರೆಸ್‌ಗೆ ಸಮಸ್ಯೆಯನ್ನು ತಂದೊಡ್ಡಲಿದೆಯೇ?
ನಾವೂ ಕೂಡ ಒಳಮೀಸಲಾತಿ ನೀಡಲು ಬಯಸಿದ್ದೇವೆ. ಆದರೆ. ಭೋವಿ, ಕೊರ್ಚ ಮತ್ತಿತರ ಸಮುದಾಯಗಳು ಇದನ್ನು ವಿರೋಧಿಸಿವೆ. ಇದೂವರೆಗೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯ ಕಲಾಪದಲ್ಲಿ ಮಂಡಿಸಿಲ್ಲ. ವರದಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ನಾವು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ. ಬಿಜೆಪಿ ಸರಕಾರ ತರಾತುರಿಯಲ್ಲಿ ಈ ನಿರ್ಧಾರವನ್ನು ಕೈಗೊಂಡದೆ.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸಿರುವುದರಿಂದ ಈಗ ಮೀಸಲಾತಿಯು ಶೇಕಡಾ 56 ರಷ್ಟಿದೆ. ಸದಾಶಿವ ವರದಿಯಲ್ಲಿ ಎಸ್ಸಿಗಳಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ಈಗ ಅದು ಶೇ 17ಕ್ಕೆ ಏರಿಕೆಯಾಗಿದೆ. ಎಸ್‌ಸಿ ಎಡಗೈಗೆ ಶೇ.6, ಎಸ್‌ಸಿ ಬಲಗೈಗೆ ಶೇ.5,5, ಸ್ಪೃಶ್ಯರಿಗೆ ಶೇ. 4.5 ಹಾಗೂ ಇತರರಿಗೆ ಶೇ. 1 ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿದೆ. ಆದರೆ. ಶೇ.17 ಹೆಚ್ಚಿಸಿದ ಮೀಸಲಾತಿ ಇನ್ನೂ ಮಾನ್ಯವಾಗಿಲ್ಲ. ಅಲ್ಲದೆ, ಮುಸ್ಲಿಮರಿಗೆ ನೀಡಿರುವ ಶೇ.4ರ ಮೀಸಲಾತಿಯನ್ನು ರದ್ದು ಪಡಿಸಿ, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿಸಲಾಗಿದೆ. ಇದು ಹೇಗೆ ಸಾಧ್ಯ?

ಸಂವಿಧಾನದ ಕಲಂ 15 ಮತ್ತು 16 ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದು ಹೇಳುತ್ತದೆ. ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆದರೆ. ಈಗ ಸಾಮಾಜಿಕವಾಗಿ ಹಿಂದುಳಿದವರಿಗೆ (ಬ್ರಾಹ್ಮಣರಿಗೆ) ಮೀಸಲಾತಿ ನೀಡಲಾಗಿದೆ. ಮೊದಲನೆಯದಾಗಿ, ಸಂವಿಧಾನಕ್ಕೆ ತಿದ್ದುಪಡಿಯ ಅಗತ್ಯವಿದೆ. ಮುಸ್ಲಿಮರಿಗೆ ಶೇ.4ರ ಮೀಸಲಾತಿಯನ್ನು ರದ್ದುಪಡಿಸಲು ನ್ಯಾಯಾಲಯದಿಂದ ಏನಾದರೂ ಆದೇಶವಿದೆಯೇ? ಒಕ್ಕಲಿಗರು ತಮ್ಮ ಜನಸಂಖ್ಯೆಯ ಆಧಾರದ ಮೇಲೆ 12 ಪ್ರತಿಶತ ಮೀಸಲಾತಿಯನ್ನು ಕೋರಿದ್ದರು ಮತ್ತು ಲಿಂಗಾಯತರು 2ಎ ವರ್ಗದಲ್ಲಿರಲು ಬಯಸಿದ್ದರು. ಆದರೆ. ಇದನ್ನು ಬಿಟ್ಟು ಸರಕಾರ ಮುಸ್ಲಿಮರಿಗೆ ಶೇ.4ರ ಮೀಸಲಾತಿಯನ್ನು ರದ್ದುಗೊಳಿಸಿತು.

ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿ ನೀತಿಯನ್ನು ಬದಲಾಯಿಸುತ್ತೀರಾ?
ಪ್ರಸ್ತುತ, ನಾವು ಇಡಬ್ಲ್ಯೂಎಸ್ ಕೋಟಾದಲ್ಲಿ 56 ಶೇಕಡಾ ಮೀಸಲಾತಿ ಇದೆ. ಅದನ್ನೇಕೆ ಶೇ.75ಕ್ಕೆ ಏಕೆ ಹೆಚ್ಚಿಸಬಾರದು? ಆರ್ಥಿಕವಾಗಿ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲಾ ವರ್ಗಗಳಿಗೆ ಮೀಸಲಾತಿ ಸಿಕ್ಕಿದೆ, ಹಾಗಾದರೆ ಸಾಮಾನ್ಯ ವರ್ಗಕ್ಕೆ ಏಕೆ ಹೆಚ್ಚಿಸಬೇಕು? ತಮಿಳುನಾಡಿನಲ್ಲಿ ಶೇ.69 ರಷ್ಟಕ್ಕೆ ಹೆಚ್ಚಳ ಮಾಡಲಾಗಿದೆ. ಅದನ್ನು 9ನೇ ಶೆಡ್ಯೂಲ್‌ಗೆ ಸೇರಿಸಿದ್ದಾರೆ.

ಮೀಸಲಾತಿ ಪ್ರಮಾಣ ಶೇ 75ಕ್ಕೆ ಹೆಚ್ಚಿಸಿದರೆ ಇತರರಿಗೆ ಸಮಸ್ಯೆಯಾಗುತ್ತದೆ ಎಂದು ನಿಮಗನ್ನಿಸುವುದಿಲ್ಲೇವೇ?
ಅವರಿಗೆ ಹೇಗೆ ಸಮಸ್ಯೆಯಾಗುತ್ತದೆ? 10 ಪ್ರತಿಶತ ಇಡಬ್ಲ್ಯೂಎಸ್ ಕೋಟಾವನ್ನು ಇತರರಿಗೆ ನೀಡಿದರೆ, ಅವರಿಗೆ ಸಮಸ್ಯೆಯಾಗುವುದಿಲ್ಲವೇ? ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡಬೇಕು. ನಾವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುತ್ತೇವೆ.

ಆದರೆ, ಇದನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕೇ?
ಹೌದು, ಸಂಸತ್ತಿನಲ್ಲಿ ಅಂಗೀಕಾರಕ್ಕೆ ಒತ್ತಾಯಿಸಿ ಒತ್ತಡ ಹೇರುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಾರಿ ಮಾಡುತ್ತೇವೆ.

ದಲಿತ ಸಿಎಂ ವಿಚಾರ ತಾರಕ್ಕೇರಿದರೆ, ಸಿದ್ದರಾಮಯ್ಯ ಸಿಎಂ ಸ್ಥಾನವನ್ನು ಖರ್ಗೆಗೆ ತ್ಯಾಗ ಮಾಡುತ್ತಾರಾ?
ಇದೇ ಪ್ರಶ್ನೆಯನ್ನು ಬೇರೆ ರೂಪದಲ್ಲಿ ಕೇಳಿದ್ದರೂ ಕೂಡ ನನ್ನ ಉತ್ತರ ಒಂದೇ ಆಗಿರುತ್ತದೆ. ನಾಯಕತ್ವ ವಿಚಾರದಲ್ಲಿ ನಾವು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಅನುಸರಿಸುತ್ತೇವೆ. ಶಾಸಕರೇ ಸಿಎಂ ಆಯ್ಕೆ ಮಾಡುತ್ತಾರೆ.

2024ರಲ್ಲಿ ಮೋದಿಯನ್ನು ಸೋಲಿಸಲು ಸಾಧ್ಯವೇ?
ಯಾಕಿಲ್ಲ? ಸಾಮಾನ್ಯ ಅಜೆಂಡಾ ಹೊಂದಿರುವ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿದರೆ ಬಿಜೆಪಿ ಮತ್ತು ಮೋದಿಯನ್ನು ಸೋಲಿಸಲು ಸಾಧ್ಯ. ಬಿಜೆಪಿ ಶೇ.60 ಅಥವಾ 70ರಷ್ಟು ಮತಗಳನ್ನು ಪಡೆದಿಲ್ಲ. ಅವರಿಗೂ ಶೇ.50ಕ್ಕಿಂತ ಕಡಿಮೆ ಮತಗಳಿವೆ.

ಇದು ನಿಮ್ಮ ಕೊನೆಯ ಚುನಾವಣೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತು ನೀವು ಮುಖ್ಯಮಂತ್ರಿಯಾದರೆ ಈ ಬಾರಿ ರಾಜ್ಯಕ್ಕೆ ಯಾವ ರೀತಿಯ ಕೊಡುಗೆ ನೀಡುತ್ತೀರಿ?
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೇ ಹೇಳಬಲ್ಲೆ ಹೊರತು ಅದಕ್ಕೂ ಮುನ್ನ ಹೇಳಲು ಸಾಧ್ಯವಿಲ್ಲ.

ಮೋದಿ, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ವ್ಯಾಪಕ ಪ್ರಚಾರ ನಡೆಸಲಿದ್ದಾರೆ?
ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ವ್ಯತ್ಯಾಸವಾಗಲಿಲ್ಲವೇಕೆ? ಪಶ್ಚಿಮ ಬಂಗಾಳದಲ್ಲಿ ಆಗಲಿಲ್ಲವೇಕೆ? ಕೆಲವು ಸ್ಥಳಗಳಲ್ಲಿ (ಗುಜರಾತ್ ಮತ್ತು ಯುಪಿ) ಅಸ್ತಿತ್ವದಲ್ಲಿರುವ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಅವರ ಪರ ಅಲೆ ಎದ್ದಿರಬಹುದು. ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಸಮಸ್ಯೆಗಳು ಚರ್ಚೆಯಾಗುತ್ತವೆಯೇ ಹೊರತು ರಾಷ್ಟ್ರೀಯ ವಿಚಾರಗಳಲ್ಲ. ರಾಷ್ಟ್ರೀಯ ಸಮಸ್ಯೆಗಳು ಗೌಣವಾಗಿವೆ.

ಕರಾವಳಿ ಪ್ರದೇಶವು ಹೆಚ್ಚು ಕೋಮುವಾದಿಯಾಗುತ್ತಿದೆ ಅದನ್ನು ಎದುರಿಸಲು ಇರುವ ಸವಾಲುಗಳೇನು?
ಮತಗಳ ಧ್ರುವೀಕರಣಕ್ಕಾಗಿ ಬಿಜೆಪಿ ಸಮಾಜದಲ್ಲಿ ಕೋಮುವಾದ ಸೃಷ್ಟಿಸಲು ಯತ್ನಿಸುತ್ತಿದೆ. ಮಂಗಳೂರು ಮತ್ತು ಉಡುಪಿ ಆರ್‌ಎಸ್‌ಎಸ್‌ನ ಪ್ರಯೋಗಶಾಲೆಯಾಗಿ ಬಳಕೆಯಾಗುತ್ತಿದೆ. ಅದರ ನಡುವೆಯೂ ಉಡುಪಿಯ ಐದರಲ್ಲಿ ಮೂರು ಸೇರಿದಂತೆ ಹಿಂದೆ (2013) ಎಂಟರಲ್ಲಿ ಏಳು ಸ್ಥಾನಗಳನ್ನು ಗೆದ್ದಿದ್ದೇವೆ.

ಕಳೆದ ಬಾರಿ ನಾವು ಒಂದು ಕ್ಷೇತ್ರದಲ್ಲಿ ಗೆದ್ದಿದ್ದರೆ, ಬಿಜೆಪಿ 7 ಸ್ಥಾನಗಳಲ್ಲಿ ಗೆದ್ದಿತ್ತು. ಕೋಮು ರಾಜಕಾರಣದಿಂದ ಜನ ಬೇಸತ್ತಿರುವುದರಿಂದ ಈ ಬಾರಿ ಬದಲಾವಣೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಇತ್ತೀಚೆಗೆ ತಮ್ಮ ಕಾರ್ಯಕರ್ತರಿಗೆ ಅಭಿವೃದ್ಧಿಯ ಬಗ್ಗೆ ಪ್ರಚಾರ ಮಾಡಬೇಡಿ. ಆದರೆ, ಲವ್ ಜಿಹಾದ್ ಬಗ್ಗೆ ಪ್ರಚಾರ ಮಾಡುವಂತೆ ಸೂಚಿಸಿದ್ದರು. ಜನರು ಅವರನ್ನು ಸ್ವೀಕರಿಸುತ್ತಾರೆಯೇ? ಹಿಜಾಬ್ ಮತ್ತು ಹಲಾಲ್ ಸಮಸ್ಯೆಗಳು ಎತ್ತಬೇಕೆ? ಜನರನ್ನು ಪರಸ್ಪರ ವಿರುದ್ಧವಾಗಿ ಪ್ರಚೋದಿಸುವ ಮೂಲಕ ಮತ್ತು ಕೋಮು ವಿಷಯಗಳ ಬಗ್ಗೆ ಹೃದಯವನ್ನು ಒಡೆಯುವ ಮೂಲಕ ಬಿಜೆಪಿ ಕೋಮು ಸೌಹಾರ್ದತೆಗೆ ಧಕ್ಕೆ ತರಲು ಸಾಧ್ಯವಿಲ್ಲ. ನಾವು ಯಾವುದೇ ಭಾಷೆ ಅಥವಾ ಧರ್ಮ ಅಥವಾ ಸಂಸ್ಕೃತಿಯ ವಿರುದ್ಧವಿಲ್ಲ. ನಮ್ಮ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಆಚರಿಸುವ ಹಕ್ಕಿದೆ. ಎಲ್ಲರೂ ಸಾಮರಸ್ಯದಿಂದ ಬದುಕುವ ಹಕ್ಕಿದೆ.

ಮತಾಂತರ ಮತ್ತು ಗೋಹತ್ಯೆ ವಿರೋಧಿ ಕಾನೂನುಗಳನ್ನು ಹಿಮ್ಮೆಟ್ಟಿಸುವಿರಾ?
ಸಂವಿಧಾನದ 21ನೇ ವಿಧಿಯ ಪ್ರಕಾರ ಯಾವುದೇ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವಿರುವುದರಿಂದ ಮತಾಂತರಕ್ಕೆ ಅವಕಾಶವಿದೆ. ಪ್ರಜೆಗಳಿಗೆ ಮತಾಂತರಗೊಳ್ಳುವ ಹಕ್ಕಿದೆ, ಆದರೆ. ಅದು ಬಲವಂತದಿಂದ ಆಗಬಾರದು. ಬಿಜೆಪಿ ಜಾರಿಗೊಳಿಸಿದ ಮತಾಂತರ ವಿರೋಧಿ ಕಾನೂನು ಕಲಂ 21 ರ ಉಲ್ಲಂಘನೆಯಾಗಿದೆ.

ಲಿಂಗಾಯತ ಸಮುದಾಯ 65 ಟಿಕೆಟ್ ನಿರೀಕ್ಷಿಸಿದ್ದರೂ ಬಿಜೆಪಿ 68 ಸ್ಥಾನಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ಸಮುದಾಯದ ಪ್ರತಿನಿಧಿಗಳಿಗೆ ಕಡಿಮೆ ಟಿಕೆಟ್ ನೀಡಿದೆ. ಈ ಬಗ್ಗೆ ನಿಮ್ಮ ನಿಲುವೇನು?
ಬಿಜೆಪಿ ಬೇರೆ, ಕಾಂಗ್ರೆಸ್ ಬೇರೆ. ಕಳೆದ ಬಾರಿಯ 47ಕ್ಕೆ ಹೋಲಿಸಿದರೆ 51 ಸ್ಥಾನಗಳನ್ನು ನೀಡಿದ್ದೇವೆ. ಸಾಮಾಜಿಕ ನ್ಯಾಯವನ್ನು ಅನುಸರಿಸಿದ್ದೇವೆ. ಕುರುಬರಿಗೆ 14 ಸ್ಥಾನ ನೀಡಿದ್ದೇವೆ, ಅವರು ಏಳು ಸ್ಥಾನ ನೀಡಿದ್ದಾರೆ. ಮುಸ್ಲಿಮರಿಗೆ ಒಂದೇ ಒಂದು ಸೀಟು ಕೊಟ್ಟಿಲ್ಲ. ನಾವು ಅದನ್ನು ಜಾತ್ಯತೀತ ಪಕ್ಷ ಎಂದು ಕರೆಯಬಹುದೇ? ಮೈಸೂರು, ಕೊಡಗು, ಹಾಸನ ಮತ್ತು ಚಾಮರಾಜನಗರದಲ್ಲಿ ಬಿಜೆಪಿ ಕೂಡ ಲಿಂಗಾಯತರಿಗೆ ಹೆಚ್ಚಿನ ಟಿಕೆಟ್ ನೀಡಿಲ್ಲ. ವೀರಶೈವ-ಲಿಂಗಾಯತರು ಎಲ್ಲೆಲ್ಲಿ ಗೆಲ್ಲಬಹುದೋ ಅಲ್ಲೆಲ್ಲಾ ಟಿಕೆಟ್ ನೀಡಿದ್ದೇವೆ. ಅಲ್ಪಸಂಖ್ಯಾತರಿಗೆ 15 ಹಾಗೂ ಕ್ರೈಸ್ತರಿಗೆ ಎರಡು ಟಿಕೆಟ್ ನೀಡಿದ್ದೇವೆ.

ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಲಕ್ಷ್ಮಣ್ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದಿರಿ. ಈಗ ಅವರು ಕಾಂಗ್ರೆಸ್'ಗೆ ಸೇರ್ಪಡೆಗೊಂಡಿದ್ದಾರೆ. ಇದೀಗ ಅವರು ಮಿಸ್ಟರ್ ಕ್ಲೀನ್ ಆಗಿದ್ದಾರೆಯೇ?
ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ. ಅವರು ವ್ಯಕ್ತಪಡಿಸಿದ ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ.

ಮುಸ್ಲಿಮರ ಓಲೈಕೆಯಲ್ಲಿ ಕಾಂಗ್ರೆಸ್ ತೊಡಗಿದೆ ಎಂದು ಬಿಜೆಪಿ ಆರೋಪಿಸಿದೆ?
ನಾನು ಯಾವುದೇ ತುಷ್ಟೀಕರಣ ರಾಜಕಾರಣ ಮಾಡುವುದಿಲ್ಲ. ನಾನು ಎಲ್ಲಾ ಜಾತಿ ಮತ್ತು ಧರ್ಮದ ಜನರನ್ನು ಪ್ರೀತಿಸುತ್ತೇನೆ. ಮುಸ್ಲಿಂ ತುಷ್ಟೀಕರಣ ಎಂದರೇನು? ಅವರ ಪರವಾಗಿ ಮಾತನಾಡುವುದು ಮತ್ತು ಅವರ ಭದ್ರತೆ ಮತ್ತು ನ್ಯಾಯಕ್ಕಾಗಿ ಪ್ರತಿಪಾದಿಸುವುದೇ? ಅವರ ಉನ್ನತಿಗೆ ಕಾರ್ಯಕ್ರಮಗಳನ್ನು ನೀಡಿದರೆ ತುಷ್ಟೀಕರಣವಾಗುತ್ತದೆಯೇ? ಆ ಸಮುದಾಯವು ಅನೇಕ ಬಡವರನ್ನು ಹೊಂದಿಲ್ಲವೇ? ಸಾಚಾರ್ ಸಮಿತಿಯ ವರದಿಯನ್ನು ಗಮನಿಸಿದರೆ ಅವರ ಸ್ಥಿತಿಗತಿಗಳು ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಎಷ್ಟರಮಟ್ಟಿಗೆ ಹಿಂದುಳಿದಿವೆ, ಎಷ್ಟು ಮಂದಿ ಶ್ರೀಮಂತರಾಗಿದ್ದಾರೆ ಎಂಬುದು ತಿಳಿಯುತ್ತದೆ.

ಚುನಾವಣೆ ಹತ್ತಿರ ಬರುತ್ತಿದ್ದು, ನಿಮ್ಮ ಆಹಾರಕ್ರಮ ಹೇಗಿರುತ್ತದೆ? ನಿಮ್ಮ ಬೆಳಗಿನ ಚಟುವಟಿಕೆಗಳು ಹೇಗಿರುತ್ತವೆ? ಮಾಂಸಾಹಾರ ಸೇವಿಸುವುದನ್ನು ಬಿಟ್ಟಿದ್ದೇನೆ. ಚುನಾವಣೆ ಮುಗಿಯುವವರೆಗೂ ಸಸ್ಯಾಹಾರ ಹಾಗೂ ಮೊಟ್ಟೆಯನ್ನೇ ಸೇವನೆ ಮಾಡುತ್ತೇನೆ. ನಾನು ಹುಟ್ಟು ಮಾಂಸಾಹಾರಿಯಾದ ಕಾರಣ ಚುನಾವಣೆ ಪೂರ್ಣಗೊಂಡ ಬಳಿಕ ಮತ್ತೆ ಮಾಂಸಾಹಾರ ಸೇವನೆ ಪ್ರಾರಂಭಿಸುತ್ತೇನೆ. ನನ್ನ ಪ್ರಯಾಣದ ಸಮಯದಲ್ಲಿ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಕಾರಣದಿಂದ ಅದನ್ನೂ ನಿಲ್ಲಿಸಿದ್ದೇನೆ. ಬೆಳಗಿನ ವಾಕಿಂಗ್'ಗೆ ಸಮಯವಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com