ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನೋಡಬಯಸುತ್ತೇನೆ: ಲಕ್ಷ್ಮೀ ಹೆಬ್ಬಾಳ್ಕರ್

ಮಹಿಳೆಯರು ರಾಜಕೀಯ ಏಣಿಯನ್ನು ವೇಗವಾಗಿ ಏರುವುದು ಸುಲಭವಲ್ಲ. ಆದರೆ, ಭವಿಷ್ಯದಲ್ಲಿ ಕರ್ನಾಟಕದಲ್ಲಿ ಮಹಿಳಾ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯನ್ನು ನೋಡಬೇಕೆಂದು ಬಯಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ತಿಳಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಮಹಿಳೆಯರು ರಾಜಕೀಯ ಏಣಿಯನ್ನು ವೇಗವಾಗಿ ಏರುವುದು ಸುಲಭವಲ್ಲ. ಆದರೆ, ಭವಿಷ್ಯದಲ್ಲಿ ಕರ್ನಾಟಕದಲ್ಲಿ ಮಹಿಳಾ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯನ್ನು ನೋಡಬೇಕೆಂದು ಬಯಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ತಿಳಿಸಿದ್ದಾರೆ.

ರಾಜ್ಯದಲ್ಲಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಕುತೂಹಲಕಾರಿಯಾಗಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರ ರಾಜಕೀಯ ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯ ರಮೇಶ್ ಜಾರಕಿಹೊಳಿ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಯತ್ನಿಸುತ್ತಿದ್ದಾರೆ. 

ಒಂದು ಕಾಲದಲ್ಲಿ ಆಪ್ತರು ಎಂದು ಗುರುತಿಸಿಕೊಂಡಿದ್ದ ಇಬ್ಬರ ನಡುವೆ ಹೆಬ್ಬಾಳ್ಕರ್ 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಕೂಡಲೇ ಪೈಪೋಟಿ ಆರಂಭವಾಯಿತು. ಮತ್ತು 2018 ರಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಚುನಾವಣೆಯ ಸಮಯದಲ್ಲಿ ಪೈಪೋಟಿ ಉತ್ತುಂಗಕ್ಕೇರಿತು.

ಬೆಳಗಾವಿ ರಾಜಕೀಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹಸ್ತಕ್ಷೇಪವೂ ಜಾರಕಿಹೊಳಿ ಅವರನ್ನು ಕೆರಳಿಸಲು ಕಾರಣ ಎನ್ನಲಾಗಿದೆ. ಅವರು, ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

ಈ ವಿಚಾರವಾಗಿ ಪಿಟಿಐ ಜೊತೆ ಮಾತನಾಡಿದ ಹೆಬ್ಬಾಳ್ಕರ್, 'ಜಾರಕಿಹೊಳಿ ಅವರು ಕೇವಲ ತಮ್ಮ ಪಕ್ಷದ ಕೆಲಸವನ್ನು ಮಾಡುತ್ತಿದ್ದಾರೆ. ಇದು ವೈಯಕ್ತಿಕ ವಿಷಯವಲ್ಲ, ನಾನು ಅದನ್ನು ಎಂದಿಗೂ ಹಾಗೆ ತೆಗೆದುಕೊಳ್ಳುವುದಿಲ್ಲ. ನಾನು ಇಂದು ಈ ಚುನಾವಣೆಯಲ್ಲಿ ಸಾಕಷ್ಟು ವಿಶ್ವಾಸ ಹೊಂದಿದ್ದೇನೆ ಮತ್ತು ಆರಾಮದಾಯಕ ಗೆಲುವು ದೊರಕುತ್ತದೆ ಎಂದು ಹೇಳಿದರು.

ಮಹಿಳೆಯರಿಗೆ ರಾಜಕೀಯದಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳವುದು ಅಥವಾ ಮಾಡುವುದು ಹೋರಾಟವಾಗಿದೆ. ಮಹಿಳಾ ನಾಯಕಿಯರು ತಮ್ಮ ಗುರಿಯನ್ನು ತಲುಪಲು ಪುರುಷರಿಗಿಂತ ಹೆಚ್ಚು ಶ್ರಮಿಸಬೇಕು. ನಾವು ಎತ್ತರಕ್ಕೆ ಬಂದರೂ ನಮ್ಮನ್ನು ತಿರಸ್ಕಾರದಿಂದ ನೋಡಲಾಗುತ್ತದೆ. ಪಿತೃಪ್ರದಾನ ಸಮಾಜದಲ್ಲಿ, ಮಹಿಳೆಯ ನೈತಿಕತೆಯ ಮೇಲೆ ಪ್ರಶ್ನೆಗಳನ್ನು ಎತ್ತುವುದು ಸಾಮಾನ್ಯವಾಗಿದೆ ಎಂದು ಅವರು ಹೇಳಿದರು.

ಹೆಚ್ಚಾಗಿ, ಈ ಆರೋಪಗಳು ಆಧಾರರಹಿತವಾಗಿರುತ್ತವೆ ಮತ್ತು ರಾಜಕೀಯದಲ್ಲಿ ಮಹಿಳಾ ನಾಯಕಿಯರನ್ನು ನಿರುತ್ಸಾಹಗೊಳಿಸಲು ಮಾಡಲಾಗುತ್ತದೆ. ನನ್ನ ವೃತ್ತಿಜೀವನದುದ್ದಕ್ಕೂ ನಾನು ಅಂತವರನ್ನೆಲ್ಲರನ್ನೂ ಎದುರಿಸಿದ್ದೇನೆ ಮತ್ತು ಅದು ಕೆಲವೊಮ್ಮೆ ನನಗೆ ನೋವುಂಟುಮಾಡುತ್ತದೆ ಎಂದರು.

ಕರ್ನಾಟಕದ ರಾಜಕೀಯದಲ್ಲಿ ಉತ್ತಮ ನಾಯಕತ್ವದ ಶಕ್ತಿ ಹೊಂದಿರುವ ಅನೇಕ ಮಹಿಳೆಯರಿದ್ದಾರೆ. ಕಾಂಗ್ರೆಸ್‌ನಲ್ಲಿಯೂ ಅನೇಕ ಸಮರ್ಥ ಮಹಿಳಾ ನಾಯಕಿಯರಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಮಹಿಳಾ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯನ್ನು ನೋಡಲು ನಾನು ಬಯಸುತ್ತೇನೆ ಎಂದು ತಿಳಿಸಿದರು.

'ಮಹಿಳಾ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯಾಗುವ ಇಚ್ಛೆಯನ್ನು ಹೊಂದಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ, 'ಅದಕ್ಕಿನ್ನು ತುಂಬಾ ದೂರ ಪ್ರಯಾಣಿಸಬೇಕಿದೆ. ನಾನು ಬಹಳಷ್ಟು ಕೆಲಸ ಮಾಡಬೇಕಾಗಿದೆ. ನಾನು ಲಾಂಗ್ ಜಂಪ್ ಮಾಡಲು ಬಯಸುವುದಿಲ್ಲ. ನಾನು ಹೇಳಿದಂತೆ, ನಿಧಾನವಾಗಿ ಮತ್ತು ಸ್ಥಿರವಾಗಿ ಬೆಳೆಯುವುದರಲ್ಲಿ ನಾನು ನಂಬಿಕೆಯಿಟ್ಟಿದ್ದೇನೆ' ಎಂದು ಹೇಳಿದರು. 

ಕರ್ನಾಟಕದಲ್ಲಿ ಇದುವರೆಗೆ ಮಹಿಳಾ ಮುಖ್ಯಮಂತ್ರಿಯಾಗಿಲ್ಲ. 

ನಾನು ಮೊದಲ ತಲೆಮಾರಿನ ರಾಜಕಾರಣಿ ಮತ್ತು 1998 ರಿಂದ ಸರಳ ಕಾರ್ಯಕರ್ತೆಯಾಗಿ ತಳಮಟ್ಟದಿಂದ ಬೆಳೆದಿದ್ದೇನೆ ಎಂದು ಹೆಬ್ಬಾಳ್ಕರ್ ಹೇಳಿದರು.

'ನಾನು ಒಂದೆರಡು ವರ್ಷಗಳಲ್ಲಿ ಇದ್ದಕ್ಕಿದ್ದಂತೆ ಈ ಸ್ಥಾನಕ್ಕೆ ಏರಲಿಲ್ಲ. ನಾನು ಕ್ರಮೇಣ ಮತ್ತು ಸ್ಥಿರವಾಗಿ ಬೆಳೆದೆ. ಹಾಗಾಗಿ ಪಕ್ಷವು ನನ್ನ ಕೆಲಸವನ್ನು ಗುರುತಿಸುತ್ತದೆ ಮತ್ತು ಜವಾಬ್ದಾರಿಗಳನ್ನು ನೀಡುತ್ತದೆ, ಅದು ಮಂತ್ರಿಯಾಗಿರಲಿ ಅಥವಾ ಉಪ ಮಂತ್ರಿಯಾಗಿರಲಿ' ಎನ್ನುತ್ತಾರೆ ಅವರು.

ಬೆಳಗಾವಿ (ಗ್ರಾಮೀಣ) ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್, ಬಿಜೆಪಿ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಡುವೆ ತ್ರಿಕೋನ ಹಣಾಹಣಿ ಏರ್ಪಟ್ಟಿರುವುದನ್ನು ಗಮನಿಸಬಹುದು. ಬೆಳಗಾವಿ (ಗ್ರಾಮೀಣ)ದಿಂದ ಬಿಜೆಪಿ ನಾಗೇಶ್ ಮನ್ನೋಳ್ಕರ್ ಅವರನ್ನು ಕಣಕ್ಕಿಳಿಸಿದೆ. ಎಂಇಎಸ್ ಅಭ್ಯರ್ಥಿ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಅದರ ಸಕ್ರಿಯ ಕಾರ್ಯಕರ್ತ ಆರ್.ಎಂ.ಚೌಗುಲೆ ಅವರನ್ನು ಕಣಕ್ಕಿಳಿಸಿದೆ.

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಸ್ಥಾನಗಳಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ರಾಜ್ಯದಲ್ಲಿ 120 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಹೆಬ್ಬಾಳ್ಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com