24 ಗಂಟೆ ಉಚಿತ ವಿದ್ಯುತ್ ನೀಡಿ: ಸರ್ಕಾರಕ್ಕೆ ಎಎಪಿ ನೂತನ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹ

ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಆಮ್ ಆದ್ಮಿ ಪಕ್ಷದ ಗ್ಯಾರಂಟಿಗಳನ್ನು ನಕಲು ಮಾಡಿಲ್ಲ, ಕದ್ದಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನೂತನ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಶನಿವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಚಂದ್ರು.
ಮುಖ್ಯಮಂತ್ರಿ ಚಂದ್ರು.
Updated on

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಆಮ್ ಆದ್ಮಿ ಪಕ್ಷದ ಗ್ಯಾರಂಟಿಗಳನ್ನು ನಕಲು ಮಾಡಿಲ್ಲ, ಕದ್ದಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನೂತನ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಶನಿವಾರ ಹೇಳಿದ್ದಾರೆ.

ಆಪ್ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಲಿದೆ ಎಂದು ಹೇಳಿದರು.

ಇದೇ ವೇಳೆ ಸರಕಾರ 24 ಗಂಟೆ ಉಚಿತ ವಿದ್ಯುತ್, ಸೂಕ್ತ ಬೆಂಬಲ ಬೆಲೆ, ಯುವಕರಿಗೆ ಉದ್ಯೋಗ, ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ, ಆರೋಗ್ಯ ನೀಡಬೇಕು ಎಂದು ಆಗ್ರಹಿಸಿದರು.

ಇದುವರೆಗೂ ರಾಷ್ಟ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಭ್ರಷ್ಟಾಚಾರ, ದುರಾಡಳಿತದಿಂದಾಗಿ ಮತ ನೀಡಿದ ನಾವುಗಳೆಲ್ಲರೂ ಸಾಲಗಾರರಿಗೆ ಲಕ್ಷಾಂತರ ಕೋಟಿ ಬಡ್ಡಿ ಕಟ್ಟುತ್ತಾ ಬಂದಿದ್ದೇವೆ. ಇದರಿಂದಾಗಿ ನಾವೆಲ್ಲರೂ ಬಡ್ಡಿ ಮಕ್ಕಳಾಗಿದ್ದೇವೆ. ರಾಜ್ಯದ ಸಾಲ 5.5 ಲಕ್ಷ ಕೋಟಿ ಮುಟ್ಟಿದೆ. 35 ಸಾವಿರ ಕೋಟಿ ರೂಪಾಯಿಗಳಷ್ಟು ಬಡ್ಡುಯನ್ನು ಕಟ್ಟಬೇಕಾಗಿದೆ. ಹೀಗಿರುವಾಗ ನಾವೆಲ್ಲ ಬಡ್ಡಿ ಮಕ್ಕಳು ಅಲ್ಲದೆ ಮತ್ತೇನು? ಎಂದು ಪ್ರಶ್ನಿಸಿದರು.

"ದೆಹಲಿ ರಾಜ್ಯದಲ್ಲಿ  ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್  ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಅಲ್ಲಿನ  ಪ್ರಜೆಗಳಿಗೆ ಉಚಿತ ವಿದ್ಯುತ್, ಉಳಿಯುವ ನೀರು, ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಎಲ್ಲ ಸವಲತ್ತುಗಳನ್ನು ಉಚಿತವಾಗಿ ನೀಡುತ್ತಿದ್ದರೂ ಕೂಡ ಸಾಲರಹಿತ ಬಜೆಟ್ ಮಂಡಿಸುತ್ತಿರುವುದು ಆಮ್ ಆದ್ಮಿ ಪಕ್ಷದ ವಿಶೇಷತೆಯಾಗಿದೆ ಎಂದು ಹೇಳಿದರು.

ಇದೇ ವೇಳೆ ಕೌಟಿಲ್ಯನ ಅರ್ಥಶಾಸ್ತ್ರ ದ ಬಗ್ಗೆ ಮಾತನಾಡಿದ ಅವರು, "ಗಳಿಕೆ- ಉಳಿಕೆ-ಬಳಕೆ" ಬಜೆಟ್‌ನ ಮೂಲ ಸ್ವರೂಪವಾಗಿದೆ. ದೇಶದಲ್ಲಿ ಗಳಿಕೆ ತೆರಿಗೆ ರೂಪದಲ್ಲಿ  ಅತಿ ಹೆಚ್ಚಾಗಿದ್ದರೂ ಭ್ರಷ್ಟರ ಅಕ್ರಮ, ದುರಾಡಳಿತಗಳಿಂದಾಗಿ  ಅವರುಗಳ ಸ್ವಾರ್ಥ ಗಳಿಕೆ ಹೆಚ್ಚಾಗಿದ್ದು, ಉಳಿಕೆ ಶೂನ್ಯಕ್ಕೆ ತಲುಪುತ್ತಿರುವುದು ದುರಂತ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ  ಆಮ್ ಆದ್ಮಿ ಪಕ್ಷದ  ಗ್ಯಾರೆಂಟಿಗಳನ್ನು ಕಾಪಿ ಮಾಡಿಲ್ಲ. ನೀಚತನದಿಂದ ಕದ್ದಿದೆ. ಇವರುಗಳ ಬಣ್ಣ ಆರು ತಿಂಗಳಲ್ಲಿ ಬಟಾ ಬಯಲಾಗಲಿದೆ ಎಂದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಮಹಾಮೈತ್ರಿಕೂಟದಲ್ಲಿ ಒಂದಾಗಿದ್ದೇವೆ. ಕರ್ನಾಟಕವನ್ನು ಭ್ರಷ್ಟರ ಕೈಯಿಂದ ಕಿತ್ತೊಗೆಯುವುದೇ ನಮ್ಮ ಗುರಿ. ರಾಜ್ಯದಲ್ಲಿ ಮುಂಬರುವ ಜಿಲ್ಲಾ-ತಾಲೂಕು ಪಂಚಾಯಿತಿ, ಬಿಬಿಎಂಪಿ ಹಾಗೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದೇವೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲಿರುಳು ಶ್ರಮಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com