ಬೆಂಗಳೂರು: ಉಡುಪಿಯಲ್ಲಿ ವಿದ್ಯಾರ್ಥಿನಿಯರ ವಾಶ್ ರೂಂ ವಿಡಿಯೋ ಚಿತ್ರೀಕರಣ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಾದಾತ್ಮಕ ಪೋಸ್ಟ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಚ್.ಎಸ್. ಮತ್ತೆ ಸರ್ಕಾರದ ವಿರುದ್ಧ ಟ್ವೀಟ್ ವಾರ್ ಮುಂದುವರೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆಂಬ ಆರೋಪದಡಿ ಶಕುಂತಲಾ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದರು. ಇದೀಗ ಅದೇ ವಿಚಾರವಾಗಿ ಶಕುಂತಲಾ ಅವರು ಮತ್ತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಟ್ವೀಟ್ ವಾರ್ ಮುಂದುವರೆಸಿದ್ದು, ತಮ್ಮನ್ನು ಬಂಧಿಸಿದ್ದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸರಣಿ ವಿರುದ್ಧ ಟ್ವೀಟ್ ಮಾಡಿದ್ದಾರೆ.
‘ಸರ್ಕಾರದ ವಿರುದ್ಧ, ಮುಖ್ಯಮಂತ್ರಿಗಳ ಧೋರಣೆಯ ವಿರುದ್ದ ಮಾತನಾಡಿದರೆ ಮಹಿಳೆಯರು ಎಂಬುದನ್ನು ನೋಡದೆ ಮನೆಗಳ ಮೇಲೆ ಏಕಾಏಕಿ ದಾಳಿ ಮಾಡಿಸಿ ಬಂಧಿಸಲು ಅದೇಶಿಸುವ ಲಜ್ಜೆಗೆಟ್ಟ ಸರ್ಕಾರವಿದು’ ಎಂದು ಟೀಕಿಸಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ‘ಸಾಮಾನ್ಯ ಕಾರ್ಯಕರ್ತೆಯ ಬೆನ್ನೆಲುಬಾಗಿ ನಿಂತು ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿಸಿದ ರಾಜ್ಯ ಬಿಜೆಪಿ ನಾಯಕರು, ತುಮಕೂರು ಬಿಜೆಪಿ ಮುಖಂಡರು, ಪದಾಧಿಕಾರಿಗಳು, ರಾಜ್ಯ ಕಾನೂನು ಮತ್ತು ಸಾಮಾಜಿಕ ಮಾಧ್ಯಮ ಪ್ರಕೋಷ್ಠಕ್ಕೆ, ಹಾಗೂ ಸಾಮಾಜಿಕ ಜಾಲತಾಣದಲ್ಲಿ ನನ್ನ ಪರನಿಂತ ನನ್ನೆಲ್ಲಾ ಸಹೋದರ ಸಹೋದರಿಯರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಏನಿದು ವಿವಾದ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆಂಬ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಚ್.ಎಸ್. ಅವರನ್ನು ಇತ್ತೀಚೆಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ವಶಕ್ಕೆ ಪಡೆದು ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು ಎಂದು ಹೇಳಲಾಗಿದೆ.
ಉಡುಪಿ ವಿದ್ಯಾರ್ಥಿನಿಯರ ವಾಶ್ ರೂಂ ವಿಡಿಯೋ ಚಿತ್ರೀಕರಣ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದ ತುಮಕೂರು ಮೂಲದ ಶಕುಂತಲಾ, ಅವಹೇಳನಕಾರಿಯಾಗಿ ಮತ್ತೊಂದು ಪೋಸ್ಟ್ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಹನುಮಂತರಾಯ ದೂರು ನೀಡಿದ್ದರು. ಮಹಿಳೆಯ ಗೌರವಕ್ಕೆ ಧಕ್ಕೆ ತಂದ (ಐಪಿಸಿ 509) ಆರೋಪದಡಿ ಶಕುಂತಲಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿದ್ದವು.
ಅಂತೂ ಕೊನೆಗೂ ತಮ್ಮದು ಹಿಟ್ಲರ್ ಸರ್ಕಾರ ಅಂತ ನಿರೂಪಿಸಿತು ಕಾಂಗ್ರೆಸ್ ಸರ್ಕಾರ.
ಸರ್ಕಾರದ ವಿರುದ್ಧ, ಮುಖ್ಯಮಂತ್ರಿಗಳ ಧೋರಣೆಯ ವಿರುದ್ದ ಮಾತನಾಡಿದರೆ ಮಹಿಳೆಯರು ಎಂಬುದ ನೋಡದೆ ಮನೆಗಳ ಮೇಲೆ ಏಕಾಏಕಿ ದಾಳಿ ಮಾಡಿಸಿ ಬಂಧಿಸಲು ಅದೇಶಿಸುವ ಲಜ್ಜೆಗೆಟ್ಟ ಸರ್ಕಾರವಿದು..@INCIndia
— ಶಕುಂತಲ
Advertisement