ಭಾರತ್ ಜೋಡೋ ಯಾತ್ರೆಗೆ ಶ್ಲಾಘನೆ, ದೇಶಕ್ಕೆ ಐಕ್ಯತೆ ಎಷ್ಟು ಮುಖ್ಯ ಎಂಬುದನ್ನು ರಾಹುಲ್ ಜನರಿಗೆ ಅರಿವು ಮೂಡಿಸಿದ್ದಾರೆ: ಕಪಿಲ್ ಸಿಬಲ್

ಭಾರತ್ ಜೋಡೋ ಯಾತ್ರೆಯನ್ನು ಶ್ಲಾಘಿಸಿದ ಕಾಂಗ್ರೆಸ್‌ನ ಮಾಜಿ ನಾಯಕ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ರಾಹುಲ್ ಗಾಂಧಿ ಅವರು ಸಮಾಜದ ವಿಭಿನ್ನ ಅಂಶಗಳನ್ನು ಒಟ್ಟುಗೂಡಿಸಲು ಸಮರ್ಥರಾಗಿದ್ದಾರೆ ಮತ್ತು ದೇಶದಲ್ಲಿ ಏಕತೆ ಮೂಡಿಸುವುದು ಎಷ್ಟು ಮುಖ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿದ್ದಾರೆ ಎಂದು ಭಾನುವಾರ ಹೇಳಿದರು.
ಕಪಿಲ್ ಸಿಬಲ್
ಕಪಿಲ್ ಸಿಬಲ್

ನವದೆಹಲಿ: ಭಾರತ್ ಜೋಡೋ ಯಾತ್ರೆಯನ್ನು ಶ್ಲಾಘಿಸಿದ ಕಾಂಗ್ರೆಸ್‌ನ ಮಾಜಿ ನಾಯಕ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ರಾಹುಲ್ ಗಾಂಧಿ ಅವರು ಸಮಾಜದ ವಿಭಿನ್ನ ಅಂಶಗಳನ್ನು ಒಟ್ಟುಗೂಡಿಸಲು ಸಮರ್ಥರಾಗಿದ್ದಾರೆ ಮತ್ತು ದೇಶದಲ್ಲಿ ಏಕತೆ ಮೂಡಿಸುವುದು ಎಷ್ಟು ಮುಖ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿದ್ದಾರೆ ಎಂದು ಭಾನುವಾರ ಹೇಳಿದರು.

ಕಳೆದ ವರ್ಷ ಕಾಂಗ್ರೆಸ್ ತೊರೆದಿದ್ದ ಸಿಬಲ್, ಪಕ್ಷದ ಭಾರತ್ ಜೋಡೋ ಯಾತ್ರೆಯು ಯಶಸ್ವಿಯಾಗಿದೆ ಮತ್ತು ಕಾಂಗ್ರೆಸ್ಸೇತರ ಅಂಶಗಳ ಬೆಂಬಲವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸಿಬಲ್, ಭಾರತ್ ಜೋಡೋ ಯಾತ್ರೆಯು 'ಅದ್ಭುತ ಕಲ್ಪನೆ'. ರಾಹುಲ್ ಗಾಂಧಿ ಅವರು ತಮ್ಮ ಯಾತ್ರೆಯ ಸಮಯದಲ್ಲಿ, ಸಮಾಜದ ವಿಭಿನ್ನ ಅಂಶಗಳನ್ನು ಒಟ್ಟುಗೂಡಿಸಲು ಸಮರ್ಥರಾದರು ಮತ್ತು ನಮ್ಮ ದೇಶದಲ್ಲಿ ಏಕತೆಯನ್ನು ಖಾತ್ರಿಪಡಿಸುವುದು ಎಷ್ಟು ಮುಖ್ಯ ಮತ್ತು ವೈವಿಧ್ಯತೆಯನ್ನು ಗೌರವಿಸುವುದು ನಮ್ಮ ಹೃದಯದಲ್ಲಿದೆ ಎಂಬುದು ಅವರಿಗೆ ಅರಿವಾಯಿತು ಎಂದು ನಾನು ಭಾವಿಸುತ್ತೇನೆ. ದೇಶವು ಮುಂದೆ ಸಾಗುತ್ತಿದೆ ಎಂದು ಹೇಳಿದರು.

ಹೌದು, ಭಾರತ್ ಜೋಡೋ ಯಾತ್ರೆಯು ಶ್ಲಾಘಿಸಲೇಬೇಕಾದ ಸಂಗತಿ. ಈಗ ಅದರ ರಾಜಕೀಯ ಪ್ರಭಾವಕ್ಕೆ ಸಂಬಂಧಿಸಿದಂತೆ, ಜನರು ಯಾತ್ರೆಯ ಹಿಂದಿನ ಪರಿಕಲ್ಪನೆಯನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಮತ್ತು ಅದನ್ನು ಶುದ್ಧ ರಾಜಕೀಯ ಕಾರ್ಯಕ್ಕೆ ಸಂಬಂಧಿಸುವಂತೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಸಿಬಲ್ ಹೇಳಿದರು.

'ಭಾರತ್ ಜೋಡೋ' ಎಂಬುದು ಒಂದು ತುದಿಯಾಗಿದ್ದು, ಇನ್ನೊಂದೆಡೆ ನಮಗೆ ತಿಳಿದಿರುವ ಎರಡು ಸಿದ್ಧಾಂತಗಳ ಪೈಕಿ ಯಾವುದನ್ನು ಜನರು ಆರಿಸಿಕೊಳ್ಳಬೇಕು ಎಂಬುದನ್ನು ಜನರಿಗೆ ತೋರಿಸುವುದೇ ಯಾತ್ರೆಯ ಉದ್ದೇಶವಾಗಿದೆ ಎಂದರು.

ಕಾಂಗ್ರೆಸ್ ನಲ್ಲಿ ದೊಡ್ಡ ಪ್ರಮಾಣದ ಸಾಂಸ್ಥಿಕ ಸುಧಾರಣೆಗಳನ್ನು ಕೋರಿ 2020ರಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ಜಿ 23 ನಾಯಕರಲ್ಲಿ ಒಬ್ಬರಾಗಿದ್ದ ಸಿಬಲ್, ಕಳೆದ ವರ್ಷ ಪಕ್ಷವನ್ನು ತೊರೆದಿದ್ದರು ಮತ್ತು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಮರು ಆಯ್ಕೆಯಾದರು. ಪಕ್ಷ ತೊರೆದ ನಂತರ, ಸಿಬಲ್ ತಮ್ಮ ಹಿಂದಿನ ಪಕ್ಷದ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದರು.

ಭಾರತ್ ಜೋಡೋ ಯಾತ್ರೆಯು ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಬಲ್, 'ಪರಿಕಲ್ಪನಾತ್ಮಕವಾಗಿ, ಖಚಿತವಾಗಿ ಮತ್ತು ಸಾರ್ವಜನಿಕfರಲ್ಲಿ ಕಾಂಗ್ರೆಸ್ಸೇತರ ಅಂಶಗಳ ಬೆಂಬಲವನ್ನು ನಾನು ನೋಡುತ್ತೇನೆ. ಅದು ಯಶಸ್ವಿಯಾಗಿದೆ ಎಂದು ನಾನು ಹೇಳುತ್ತೇನೆ ಎಂದು ತಿಳಿಸಿದರು.

ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಮಾತನಾಡಿದ ಸಿಬಲ್, ಲೋಕಸಭೆ ಚುನಾವಣೆಯು ಹೆಚ್ಚು ದೂರವಿಲ್ಲ. ಪ್ರತಿಪಕ್ಷಗಳ ನಾಯಕರು ಒಗ್ಗೂಡಬೇಕಾಗಿದೆ. ಅದು ಹೇಗೆ ಸಂಭವಿಸುತ್ತದೆ ಎಂಬುದರ ಬಗ್ಗೆ ನಾನು ಕಾಮೆಂಟ್ ಮಾಡಲು ಸಾಧ್ಯವಿಲ್ಲ. ವಿವಿಧ ರಾಜಕೀಯ ಪಕ್ಷಗಳ ನಡುವಿನ ರಾಜಕೀಯ ಸಹಯೋಗದ ಹೊರತಾಗಿ ಇಂದು ನಮಗೆ ಬೇಕಾಗಿರುವುದು ಜನಾಂದೋಲನವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಮುಂದೆ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಬಲ್, ನಾನು ನ್ಯಾಯಾಲಯದಲ್ಲಿ ಯಾತ್ರೆಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ ಎಂದರು.

ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ದೆಹಲಿ ರಾಜ್ಯಗಳಲ್ಲಿ ಸಂಚರಿಸಿ ಸದ್ಯ ಪಂಜಾಬ್‌ನಲ್ಲಿರುವ ಭಾರತ್ ಜೋಡೋ ಯಾತ್ರೆಯು ಶ್ರೀನಗರದಲ್ಲಿ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡುವುದರೊಂದಿಗೆ ಜನವರಿ 30 ರಂದು ಕೊನೆಗೊಳ್ಳಲಿದೆ.

ಶ್ರೀನಗರದಲ್ಲಿ ನಡೆಯಲಿರುವ ಯಾತ್ರೆಯ ಅಂತಿಮ ಕಾರ್ಯಕ್ರಮಕ್ಕೆ ಹಲವು ವಿರೋಧ ಪಕ್ಷದ ನಾಯಕರು ಮತ್ತು ಮುಖಂಡರನ್ನು ಆಹ್ವಾನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com