ಸಂಪುಟ ಸಚಿವರೊಂದಿಗೆ ಸಿಎಂ ಸಿದ್ದು ಡಿನ್ನರ್ ಮೀಟಿಂಗ್: ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚೆ?

ರಾಜ್ಯದಲ್ಲಿ ಕೈ ಪಾಳಯದ ನಾಯಕರು ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಸಂಪುಟ ಸಚಿವರ ಜೊತೆಗೆ ಡಿನ್ನರ್ ಮೀಟಿಂಗ್ ನಡೆಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಕೈ ಪಾಳಯದ ನಾಯಕರು ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಸಂಪುಟ ಸಚಿವರ ಜೊತೆಗೆ ಡಿನ್ನರ್ ಮೀಟಿಂಗ್ ನಡೆಸಿದರು.

ಈ ವಿಶೇಷ ಭೋಜನಕೂಡದಲ್ಲಿ ಬಹುತೇಕ ಎಲ್ಲಾ ಸಚಿವರು ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೊದಲು ಶಾಸಕರು ಹಾಗೂ ಸಚಿವರ ನಡುವೆ ಸಮನ್ವಯತೆ ಸಮಸ್ಯೆ ಉಂಟಾಗಿದ್ದ ಸಮಯದಲ್ಲಿ ಅ.28ರಂದು ಮೊದಲ ಬಾರಿಗೆ ಸಚಿವರಿಗೆ ಭೋಜನ ಕೂಡ ಏರ್ಪಡಿಸಿದ್ದರು.

ಗುರುವಾರ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಎಲ್ಲಾ ಸಚಿವರಿಗೆ ಭೋಜನಕೂಟ ಏರ್ಪಡಿಸಿದ್ದರ. ಗುರುವಾರ ಬೆಳಿಗ್ಗೆ ಸಚಿವ ಸಂಪುಟ ಸಭೆ ಇದ್ದಿದ್ದರಿಂದ ಎಲ್ಲಾ ಸಚಿವರೂ ಬೆಂಗಳೂರಿನಲ್ಲಿಯೇ ಇದ್ದರು. ಈ ಕಾರಣಕ್ಕೆ ಭೋಜನಕೂಟಕ್ಕೆ ಎಲ್ಲಾ ಸಚಿವರುಗಳಿಗೂ ಆಹ್ವಾನ ನೀಡಲಾಗಿತ್ತು.

ಭೋಜನ ಕೂಟದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಸಿದ್ಧತೆ, ರ್ಕಾರಕ್ಕೆ ಡ್ಯಾಮೆಜ್ ಆಗುವ ರೀತಿ ಸಚಿವರು ಹೇಳಿಕೆ ನೀಡದಂತೆ, ಕಾರ್ಯಕರ್ತರನ್ನು ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಲು ತಯಾರಿ, ಕಾರ್ಯಕರ್ತರ ಆತ್ಮವಿಶ್ವಾಸ ದ್ವಿಗುಣಗೊಳಿಸಿ ಚುನಾವಣೆಗೆ ಸಜ್ಜುಗೊಳಿಸಲು ತಂತ್ರಗಾರಿಕೆ ಹೀಗೆ ಲೋಕಾ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಲವು ಅಂಶಗಳನ್ನ ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆಗೆ ಸಮರ್ಥವಾಗಿ ಕೆಲಸ ಮಾಡಬೇಕು. ಹಂಚಿಕೆ ಮಾಡಿರುವ ಉಸ್ತುವಾರಿ ಕ್ಷೇತ್ರಗಳ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಂಪುಟ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಈ ವಿಚಾರದಲ್ಲಿ ನಾವು ತುಂಬ ಎಚ್ಚರಿಕೆಯಿಂದ ಇರಬೇಕಾಗಿದೆ. ಹೇಳಿಕೆಗಳನ್ನು ಕೊಡುವಾಗಲೂ ಸಂದರ್ಭ ನೋಡಿಕೊಂಡು ಮಾತನಾಡಬೇಕು. ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗದಂತೆ ನಿಗಾ ವಹಿಸಬೇಕು ಎಂದೂ ಹೇಳಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ಪೈಪೋಟಿ ನೀಡಲು ಎಲ್ಲ ರೀತಿಯಲ್ಲೂ ನಮ್ಮ ಪಕ್ಷ ಸಮರ್ಥವಾಗಿದೆ. ಆದರೆ, ಬಿಜೆಪಿಯವರು ಅಯೋಧ್ಯೆಯ ವಿಷಯವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಗೊಂದಲಕ್ಕೆ ಅವಕಾಶ ಆಗದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದೂ ಸಚಿವರಿಗೆ ಮುಖ್ಯಮಂತ್ರಿ ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಡಿನ್ನರ್ ಮೀಟಿಂಗ್​​ನಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಕೆ ಪಾಟೀಲ್, ಶಿವರಾಜ್ ತಂಗಡಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com