
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ತಮ್ಮ ಕುಟುಂಬದ ವಿಚಾರವೆತ್ತಿದ್ದಕ್ಕೇ ಜೆಡಿಎಸ್ ಶಾಸಕ, ಹಾಗೂ ಮಾಜಿ ಸಚಿವ ಎಚ್ ರೇವಣ್ಣ ಕೆಂಡಾಮಂಡಲರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಸದನದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ವಾಲ್ಮೀಕಿ ಹಗರಣದ ಬಗ್ಗೆ ಎಸ್ಐಟಿ ಮಾಡಿದ್ದಾರೆ. ಆದರೆ ಎಸ್ಐಟಿ ಏನು ಮಾಡುತ್ತಿದೆ. ಹೆಚ್.ಡಿ ರೇವಣ್ಣನವರನ್ನ ಕೂಡಲೇ ಅರೆಸ್ಟ್ ಮಾಡಿದರು. ಆದ್ರೆ ಈ ಪ್ರಕರಣದಲ್ಲಿ ನಿಧಾನ ಏಕೆ? ರೇವಣ್ಣಗೆ ಒಂದು ಕಾನೂನು ಬೇರೆಯವರಿಗೆ ಒಂದಾ ಎಂದು ಆರ್.ಅಶೋಕ್ ಪ್ರಶ್ನೆ ಮಾಡಿದರು.
ಈ ವೇಳೆ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರು ರೇವಣ್ಣ ಅವರ ಪ್ರಕರಣ ಇದಕ್ಕಿಂತ ಸಣ್ಣದಾ? ನೂರಾರು ಮಹಿಳೆಯರಿಗೆ ಅನ್ಯಾಯ ಆಗಿದೆಯಲ್ಲ. ಅದು ಇದಕ್ಕಿಂತ ಸಣ್ಣ ಪ್ರಕರಣವೇ ಎಂದು ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಕೆದಕಿದರು. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರು ಪ್ರಜ್ವಲ್ ಪ್ರಕರಣ ಇಡೀ ಜಗತ್ತಿಗೆ ಗೊತ್ತಾಗಿದೆ. ಅಧ್ಯಕ್ಷರೇ ಹಣ ಹೋಗುತ್ತೆ ಬರುತ್ತೆ. ಆದರೆ ಹೋಗಿರುವ ಮಾನ ವಾಪಸ್ ಬರುತ್ತಾ? ಈ ಪ್ರಕರಣದಿಂದ ಕರ್ನಾಟಕ ಮಾನ ಹಾಳಾಯ್ತು ಎಂದರು. ಆಗ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ಜೋರಾಯ್ತು.
ಎಚ್ ಡಿ ರೇವಣ್ಣ ಕೆಂಡಾಮಂಡಲ
ಸದನದಲ್ಲಿ ಆಡಳಿತ, ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುವಾಗ ಮಾಜಿ ಸಚಿವ ಹೆಚ್.ಡಿ ರೇವಣ್ಣ ಎದ್ದು ನಿಂತರು. ಅಧ್ಯಕ್ಷರೇ ನನ್ನ ಹೆಸರು ಪ್ರಸ್ತಾಪ ಆಗಿದೆ ಚರ್ಚೆ ಮಾಡ್ತೇನೆ. ಸಭಾಧ್ಯಕ್ಷರೇ ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ. ಆದರೆ ಯಾರೋ ಹೆಣ್ಣು ಮಗಳಿಂದ ದೂರು ಬರೆಸುತ್ತಾರೆ. ಡಿಜಿ ಆಫೀಸ್ನಲ್ಲಿ ಯಾರೋ ಹೆಣ್ಣುಮಗಳಿಂದ ಕಂಪ್ಲೇಂಟ್ ಬರೆಸುತ್ತಾರೆ. ಅವನೇನು ಡಿಜಿ ಆಗೋಕೆ ಲಾಯಕ್ ಏನ್ರೀ? ಎಂದು ರೇವಣ್ಣ ಅವರು ಆವೇಶದಲ್ಲಿ ಮಾತನಾಡಿದರು. ಆಗ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.
Advertisement