ಪೇಪರ್ ಹರಿದು ಸ್ಪೀಕರ್ ಪೀಠದತ್ತ ಎಸೆದ ಪ್ರತಿಪಕ್ಷಗಳ ಸದಸ್ಯರು: ಹನಿಟ್ರ್ಯಾಪ್ ಗದ್ದಲದ ನಡುವೆಯೇ ಶಾಸಕರ ವೇತನ ಹೆಚ್ಚಳಕ್ಕೆ ಅಂಗೀಕಾರ
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಬಿಜೆಪಿ ಸದಸ್ಯರು ಇಂದು ವಿಧಾನಸಭೆಯ ಬಾವಿಗಿಳಿದು, ಬಜೆಟ್ ಹಾಗೂ ಮಸೂದೆಗಳ ಪ್ರತಿಗಳನ್ನು ಹರಿದು ಪ್ರತಿಭಟನೆ ನಡೆಸಿದರು, ಇದರ ಮದ್ಯೆಯೇ ರಾಜ್ಯ ಬಜೆಟ್ ಮತ್ತು ಶಾಸಕರ ವೇತನ ಹೆಚ್ಚಳ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಬಜೆಟ್ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಉತ್ತರ ನೀಡಲು ಮುಂದಾದರು. ಈ ವೇಳೆ ಬಿಜೆಪಿ-ಜೆಡಿಎಸ್ ಶಾಸಕರು, ನಿನ್ನೆ ವಿಧಾನಸಭೆಯಲ್ಲಿ ಸಚಿವ ಕೆ.ಎನ್.ರಾಜಣ್ಣ ಬಹಿರಂಗಪಡಿಸಿದ ಹನಿಟ್ರ್ಯಾಪ್ ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಬಯಸಿದರು.
ಬಿಜೆಪಿ ಶಾಸಕರ ಈ ವರ್ತನೆಯಿಂದ ಕೋಪಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು, ಪ್ರತಿಭಟನಾಕಾರರನ್ನು ಹೊರಹಾಕಲು ಮಾರ್ಷಲ್ಗಳಿಗೆ ಸೂಚಿಸಿದರು.
ಪ್ರತಿಭಟನೆಯ ನಡುವೆಯೇ, ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳ ವೇತನ, ಪಿಂಚಣಿ ಮತ್ತು ಭತ್ಯೆಯನ್ನು ಹೆಚ್ಚಿಸುವ ಬಜೆಟ್ ಮತ್ತು ಮಸೂದೆಗಳನ್ನು ವಿಧಾನಸಭೆ ಅಂಗೀಕರಿಸಿತು.
ವಿಧಾನಸಭೆಯಲ್ಲಿ ಬಜೆಟ್ ಅಂಗೀಕಾರಗೊಳ್ಳುತ್ತಿದ್ದಂತೆ ವಿರೋಧ ಪಕ್ಷದ ಬಿಜೆಪಿ ಶಾಸಕರು ಸ್ಪೀಕರ್ ಕುರ್ಚಿ ಇರುವ ವೇದಿಕೆಯ ಮೇಲೆ ಹತ್ತಿ ಸ್ಪೀಕರ್ ಯು ಟಿ ಖಾದರ್ ಅವರ ಮೇಲೆ ಕಾಗದಪತ್ರಗಳನ್ನು ಎಸೆದು ಪ್ರತಿಭಟನೆ ನಡೆಸಿದರು. ಸ್ಪೀಕರ್ ಕುರ್ಚಿಯನ್ನು ಸುತ್ತುವರೆದಿದ್ದ ಬಿಜೆಪಿ ಶಾಸಕರನ್ನು ಮಾರ್ಷಲ್ಗಳು ಬಲವಂತವಾಗಿ ಹೊರಹಾಕಬೇಕಾಯಿತು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದ ಬಿಜೆಪಿ, ಸಾರ್ವಜನಿಕ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಶೇಕಡಾ ನಾಲ್ಕು ಮೀಸಲಾತಿ ನೀಡುತ್ತಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿತು.
ಸ್ಪೀಕರ್ ಕುರ್ಚಿಯನ್ನು ಸುತ್ತುವರೆದಿದ್ದ ಬಿಜೆಪಿ ಸದಸ್ಯರ ವಿರುದ್ಧ ಕೋಪಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲವು ಸಚಿವರು, ಮಾರ್ಷಲ್ಗಳಿಗೆ ಬಿಜೆಪಿ ಸದಸ್ಯರನ್ನು ಅಲ್ಲಿಂದ ಹೊರ ಹಾಕುವಂತೆ ಸೂಚಿಸಿದರು.
ಇದಕ್ಕೂ ಮೊದಲು, ಸಚಿವರೊಬ್ಬರನ್ನು "ಹನಿ ಟ್ರ್ಯಾಪ್" ಮಾಡಲು ಯತ್ನಿಸಲಾಗಿದೆ ಎಂಬ ಆರೋಪದ ವಿರುದ್ಧ ಬಿಜೆಪಿ ಸದನದ ಬಾವಿಯಿಂದಲೇ ಪ್ರತಿಭಟನೆ ನಡೆಸಿತು ಮತ್ತು ಮುಖ್ಯಮಂತ್ರಿಗಳು ಬಜೆಟ್ ಚರ್ಚೆಗೆ ತಮ್ಮ ಉತ್ತರವನ್ನು ಓದುತ್ತಿದ್ದಾಗಲೂ ಬಿಜೆಪಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ