ಬಾಗಲಕೋಟೆ ಕಾಂಗ್ರೆಸ್ audio ಬಾಂಬ್: ‘ಶೇ. 80 ರಷ್ಟು ಪೇಮೆಂಟ್ ಸೀಟ್’ ಆರೋಪ, ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಡಿಕೆಶಿ ಸರ್ಕಾರಕ್ಕೆ ಭಾರಿ ಮುಜುಗರ..!

ಸಂಪುಟ ವಿಸ್ತರಣೆಯಲ್ಲಿ ಶೇ. 80 ರಷ್ಟು ಸಚಿವ ಸ್ಥಾನಗಳನ್ನು ಅರ್ಹತೆ ನೋಡಿ ನೀಡಿಲ್ಲ, ಬದಲಿಗೆ "ಪೇಮೆಂಟ್ ಸೀಟುಗಳಂತೆ" ಹರಾಜು ಹಾಕಿ ಹಂಚಿಕೆ ಮಾಡಲಾಗಿದೆ ಎಂದು ಧ್ವನಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ.
AI image
AI ಸೃಷ್ಟಿತ ಚಿತ್ರ
Updated on

ಬೆಂಗಳೂರು / ಬಾಗಲಕೋಟೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಆಡಿಯೋ ಸೋರಿಕೆ ಭಾರಿ ಮುಜುಗರ ತಂದಿಟ್ಟಿದೆ.

ಮಾಜಿ ಸಚಿವ ಆರ್‌.ಬಿ. ತಿಮ್ಮಾಪುರ ಹಾಗೂ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರ ನಡುವೆ ನಡೆದಿದೆ ಎನ್ನಲಾದ 5 ನಿಮಿಷಗಳ ಖಾಸಗಿ ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಆಡಿಯೊದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ. ಆದರೆ, ಅದರಲ್ಲಿ ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಬಗ್ಗೆ ಇಬ್ಬರು ನಾಯಕರು ಅಸಮಾಧಾನ ವ್ಯಕ್ತಪಡಿಸಿರುವುದು ಹಾಗೂ ಸಚಿವ ಸ್ಥಾನ ಹಂಚಿಕೆ ಕುರಿತು ಕಾಂಗ್ರೆಸ್ ಹೈಕಮಾಂಡ್‌ನ ನಿರ್ಧಾರವನ್ನು ಪ್ರಶ್ನಿಸಿರುವುದು ಕೇಳಿ ಬಂದಿದೆ.

ಆಡಿಯೊದಲ್ಲಿ ಕೆಲವು ನಾಯಕರನ್ನು ಸಚಿವ ಸಂಪುಟಕ್ಕೆ ಸೇರಿಸಿರುವುದನ್ನು ಟೀಕಿಸಲಾಗಿದ್ದು, ಅದರಲ್ಲೂ ಬಿ. ನಾಗೇಂದ್ರ ಅವರ ಮರುನೇಮಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದುಬಂದಿದೆ.

ಸಂಪುಟ ವಿಸ್ತರಣೆಯಲ್ಲಿ ಶೇ. 80 ರಷ್ಟು ಸಚಿವ ಸ್ಥಾನಗಳನ್ನು ಅರ್ಹತೆ ನೋಡಿ ನೀಡಿಲ್ಲ, ಬದಲಿಗೆ "ಪೇಮೆಂಟ್ ಸೀಟುಗಳಂತೆ" ಹರಾಜು ಹಾಕಿ ಹಂಚಿಕೆ ಮಾಡಲಾಗಿದೆ ಎಂದು ಧ್ವನಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ.

AI image
ಆಡಿಯೋದಲ್ಲಿ ನನ್ನ ಹೆಸರು ಇರಬಹುದು, ಆದ್ರೆ...: ವೈರಲ್ ಕ್ಲಿಪ್ ಬಗ್ಗೆ ಮಾಜಿ ಸಚಿವ ಆರ್.ಬಿ ತಿಮ್ಮಾಪುರ ಸ್ಪಷ್ಟನೆ; ಹೇಳಿದ್ದೇನು?

ಪ್ರಕರಣಗಳನ್ನು ಎದುರಿಸುತ್ತಿರುವವರಿಗೆ ಸಚಿವ ಸ್ಥಾನ ನೀಡಲಾಗಿದೆ, ಆದರೆ "ಸಮರ್ಥ" ನಾಯಕರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ ಎನ್ನಲಾಗಿದೆ.

ಅಲ್ಲದೆ, ಕಾಂಗ್ರೆಸ್ ಹೈಕಮಾಂಡ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಕುರಿತೂ ಟೀಕಾತ್ಮಕ ಮಾತುಗಳು ಆಡಿಯೊದಲ್ಲಿ ಇರುವುದಾಗಿ ವರದಿಯಾಗಿದೆ.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ನೇಮಕದ ವಿಚಾರವೂ ಆಡಿಯೊದಲ್ಲಿ ಪ್ರಸ್ತಾಪವಾಗಿದ್ದು, ಸಚಿವ ವಿಜಯಾನಂದ ಕಾಶಪ್ಪನವರ್ ಅವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡದಂತೆ ತಂತ್ರ ರೂಪಿಸುವ ಕುರಿತು ಚರ್ಚಿಸಿರುವುದಾಗಿ ಹೇಳಲಾಗುತ್ತಿದೆ.

ಈ ಪ್ರಸ್ತಾಪವನ್ನು ತಡೆಯಲು ಕೆಲ ನಾಯಕರೊಂದಿಗೆ ಮಾತನಾಡುವುದಾಗಿ ಒಬ್ಬರು ಮತ್ತೊಬ್ಬರಿಗೆ ಭರವಸೆ ನೀಡಿರುವ ಧ್ವನಿಯೂ ಕೇಳಿಬಂದಿದೆ ಎನ್ನಲಾಗಿದೆ.

ಈ ಆಡಿಯೊ ವೈರಲ್ ಆದ ಬಳಿಕ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಆದರೆ, ಈ ಆಡಿಯೋ ಸತ್ಯಾಸತ್ಯತೆಯನ್ನು ಇದುವರೆಗೆ ಯಾವುದೇ ಅಧಿಕೃತ ಮೂಲ ದೃಢೀಕರಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com