

ಬೆಂಗಳೂರು: ಮೇಲಿನವರ ಆದೇಶವಿಲ್ಲದೆ ಕಾಂಗ್ರೆಸ್ ಮಹಿಳಾ ಸಂಸದರು ಈ ರೀತಿ ನಡೆದುಕೊಳ್ಳಲು ಸಾಧ್ಯವೇ ಇಲ್ಲ. ಇವೆಲ್ಲದರ ಸೂತ್ರಧಾರ ರಾಹುಲ್ ಗಾಂಧಿ. ಸಂಸತ್ತಿನ ಘನತೆಗೆ ಚ್ಯುತಿ ತರುವ ಅಥವಾ ಸಾಂವಿಧಾನಿಕ ಅಧಿಕಾರವನ್ನು ಬೆದರಿಸುವ ಯಾವುದೇ ಪ್ರಯತ್ನವು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಬಜೆಟ್ ಅಧಿವೇಶನದ ವೇಳೆ ಫೆ.4ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆ ಕಲಾಪದಿಂದ ದೂರವುಳಿದದ್ದು ಯಾಕೆಂಬ ವಿಚಾರ ಆಡಳಿತ-ಪ್ರತಿ ಪಕ್ಷಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಈ ನಡುವಲ್ಲೇ ಮೋದಿ ಮೇಲೆ ಕಾಂಗ್ರೆಸ್ ಮಹಿಳಾ ಸಂಸದರು ದಾಳಿಗೆ ಸಿದ್ಧರಾಗಿದ್ದರು ಎಂದು ಆರೋಪಿಸಿರುವ ಕೇಂದ್ರ ಸರ್ಕಾರ ಸಾಕ್ಷಿಯ ರೂಪದಲ್ಲಿ ವೀಡಿಯೋವೊಂದನ್ನೂ ಬಿಡುಗಡೆ ಮಾಡಿದೆ.
ಈ ವಿಡಿಯೋ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಕಾಂಗ್ರೆಸ್ನ ಮಹಿಳಾ ಸಂಸದರು ಉದ್ದೇಶಪೂರ್ವಕವಾಗಿ ಪ್ರಧಾನಿ ಕುರ್ಚಿಯತ್ತ ಮುನ್ನುಗ್ಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಅಷ್ಟೇ ಅಲ್ಲ, ಪರಸ್ಪರರಿಗೆ ಕೈ ಸನ್ನೆಗಳನ್ನು ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಆಕಸ್ಮಿಕ ಘಟನೆಯಲ್ಲ, ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ ಸಂಚು ಎಂದು ಹೇಳಿದೆ.
ಇಂತಹ ವರ್ತನೆ ಹಿಂದೆಂದೂ ಕಂಡಿಲ್ಲ, ಇದು ಕೇವಲ ಪ್ರತಿಭಟನೆಯಲ್ಲ, ಪೂರ್ವನಿಯೋಜಿತ ಪ್ರಚೋದನೆ ಎಂಬುದು ಸ್ಪಷ್ಟ. ಇಂತಹ ಅಶಿಸ್ತಿನ ನಡವಳಿಕೆಯು ಸಂಸತ್ತಿನ ಇತಿಹಾಸದಲ್ಲೇ ಹಿಂದೆಂದೂ ನಡೆದಿಲ್ಲ. ಇಂತಹ ವರ್ತನೆಗಳು ಮೇಲಿನವರ ಆದೇಶವಿಲ್ಲದೆ ನಡೆಯಲು ಸಾಧ್ಯವೇ ಇಲ್ಲ. ಇವೆಲ್ಲದರ ಸೂತ್ರಧಾರ ರಾಹುಲ್ ಗಾಂಧಿಯವರೇ ಎಂಬುದು ಗೋಚರಿಸುತ್ತಿದೆ. ಸಂಸತ್ತಿನ ಘನತೆಗೆ ಚ್ಯುತಿ ತರುವ ಅಥವಾ ಸಾಂವಿಧಾನಿಕ ಅಧಿಕಾರವನ್ನು ಬೆದರಿಸುವ ಯಾವುದೇ ಪ್ರಯತ್ನವು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ. ಈ ಕುಕೃತ್ಯ ನಡೆಸಿದ ಕಾಂಗ್ರೆಸ್, ದೇಶದ ಜನತೆಯ ಮುಂದೆ ಉತ್ತರ ನೀಡಲೇಬೇಕು ಎಂದು ಆಗ್ರಹಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಹತಾಶೆಗೊಳಗಾಗಿದೆ. ಸ್ಪೀಕರ್ ಓಂ ಬಿರ್ಲಾ ಅವರ ತ್ವರಿತ ಹಸ್ತಕ್ಷೇಪದಿಂದಾಗಿ ಸದನದಲ್ಲಿ ಮೋದಿ ಅವರನ್ನು ಗುರಿಯಾಗಿಸಿಕೊಳ್ಳುವ ಅವರ ದುರುದ್ದೇಶಪೂರಿತ ಮತ್ತು ನಾಚಿಕೆಗೇಡಿನ ಪ್ರಯತ್ನ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಘಟನೆಯು ಕಾಂಗ್ರೆಸ್ ಮತ್ತು ಅದರ ನಾಯಕತ್ವದ ನಿಜವಾದ ಹೇಡಿತನವನ್ನು ಬಹಿರಂಗಪಡಿಸುತ್ತದೆ, ಸಣ್ಣ ರಾಜಕೀಯ ಲಾಭಕ್ಕಾಗಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮತ್ತು ಜನರ ಆದೇಶವನ್ನು ಅವಮಾನಿಸುವ ಮಟ್ಟಕ್ಕೂ ಕಾಂಗ್ರೆಸ್ ಇಳಿಯಲು ಸಿದ್ಧವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಹ್ಲಾದ್ ಜೋಶಿಯವರು ಪ್ರತಿಕ್ರಿಯಿಸಿ, ಲೋಕಸಭೆಯ ಗೌರವ ಕಾಪಾಡುವುದು ಸಂಸದರ ಮೊದಲ ಕರ್ತವ್ಯವಾಗಿದ್ದು, ಇತ್ತೀಚಿನ ಸದನದಲ್ಲಿ ನಡೆದ ಘಟನೆಗಳು ಆತಂಕಕಾರಿ ಮತ್ತು ಸಂಪೂರ್ಣವಾಗಿ ಅಸ್ವೀಕಾರ್ಯವಾದದ್ದು ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ಸಂಸದರು ಎಲ್ಲ ಮಿತಿಗಳನ್ನು ಮೀರಿ ಪ್ರಧಾನಿ ಆಸನದವರೆಗೆ ತೆರಳಿ ಗಲಾಟೆ ನಡೆಸಿದ್ದಾರೆ. ಇದು ಉದ್ದೇಶಪೂರ್ವಕ ಪ್ರಚೋದನೆಯ ಪ್ರಯತ್ನ. ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ಗಳನ್ನು ಸಂಸತ್ತಿನೊಳಗೆ ತರುವ ಮೂಲಕ ಕಾಂಗ್ರೆಸ್ ನಾಯಕತ್ವ ಯಾವ ಮಟ್ಟಕ್ಕೂ ಇಳಿಯಲು ಸಿದ್ಧವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಸಣ್ಣ ರಾಜಕೀಯ ಲಾಭಕ್ಕಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವು ಸಂಸತ್ತಿನ ಗೌರವವನ್ನು ಹಾಳುಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಯದವೀರ್ ಒಡೆಯರ್ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ ಸಂಸದರು ಸದನದಲ್ಲಿ ಅಶಿಸ್ತಿನಿಂದ ವರ್ತಿಸಿ ಗಲಾಟೆ ನಡೆಸಿದ್ದು, ಇದು ವಿರೋಧ ಪಕ್ಷದ ರಾಜಕೀಯವಲ್ಲ, ಸಂಸದೀಯ ಪ್ರಜಾಪ್ರಭುತ್ವವನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ಸಂಸತ್ತಿನ ಗೌರವ ಮತ್ತು ಶಿಸ್ತು ಕಾಪಾಡುವುದು ಪ್ರತಿಯೊಬ್ಬ ಸಂಸದನ ಮೂಲ ಕರ್ತವ್ಯವಾಗಿದ್ದು, ಇಂತಹ ಘಟನೆಗಳು ಸಂಸದೀಯ ಪರಂಪರೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.
Advertisement