ಬೆಂಗಳೂರಿನ HMT ಭೂಮಿ ಲಪಟಾಯಿಸಿದವರು ಯಾರು? "ಧೈರ್ಯವಿದ್ದರೆ ಆ ಗಗನಚುಂಬಿ ಕಟ್ಟಡಗಳ ಮುಟ್ಟುಗೋಲು ಹಾಕಿ": ರಾಜ್ಯ ಸರ್ಕಾರಕ್ಕೆ HDK ಸವಾಲು..!

ಎಚ್‌ಎಂಟಿಗೆ ಸೇರಿದ ಭೂಮಿಯಲ್ಲಿ ಈಗ ಬಹುಮಹಡಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿದೆ, ಇದರಲ್ಲಿ ಮಾಜಿ ಎಚ್‌ಎಂಟಿ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಪ್ರಭಾವಿ ವ್ಯಕ್ತಿಗಳ ನಡುವೆ ಹೊಂದಾಣಿಕೆ ನಡೆದಿರುವ ಶಂಕೆಯಿದೆ.
H D Kumaraswamy and D K Shivakumar
ಹೆಚ್ ಡಿ ಕುಮಾರಸ್ವಾಮಿ-ಡಿ ಕೆ ಶಿವಕುಮಾರ್
Updated on

ಬೆಂಗಳೂರು: ಎಚ್‌ಎಂಟಿ ಸಂಸ್ಥೆಯ 175 ಎಕರೆ ಭೂಮಿಯನ್ನು ಖಾಸಗಿ ಬಿಲ್ಡರ್‌ಗಳಿಗೆ ‘ಅಕ್ರಮವಾಗಿ ವರ್ಗಾವಣೆ’ ಮಾಡಿರುವ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಗುರುವಾರ ಎಚ್‌ಎಂಟಿಯ ವಿವಿಧ ಭೂ ಪ್ರದೇಶಗಳನ್ನು ಪರಿಶೀಲಿಸಿ, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, 1999ರಿಂದ 2004ರ ಅವಧಿಯಲ್ಲಿ ಬೆಂಗಳೂರಿನ 175 ಎಕರೆ ಎಚ್‌ಎಂಟಿ (HMT) ಭೂಮಿಯನ್ನು ಅಕ್ರಮವಾಗಿ ಖಾಸಗಿ ವಲಯಕ್ಕೆ ವರ್ಗಾಯಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಅಕ್ರಮಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವರದಿ ಬಂದ ಬಳಿಕ ವಿವರವಾದ ತನಿಖೆ ಆರಂಭಿಸಲಾಗುವುದು ಎಂದು ಹೇಳಿದರು.

ಎಚ್‌ಎಂಟಿಗೆ ಸೇರಿದ ಭೂಮಿಯಲ್ಲಿ ಈಗ ಬಹುಮಹಡಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿದೆ, ಇದರಲ್ಲಿ ಮಾಜಿ ಎಚ್‌ಎಂಟಿ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಪ್ರಭಾವಿ ವ್ಯಕ್ತಿಗಳ ನಡುವೆ ಹೊಂದಾಣಿಕೆ ನಡೆದಿರುವ ಶಂಕೆಯಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಕಾನೂನು ಪಾಲಿಸುವ ಧೈರ್ಯವಿದ್ದರೆ, ಸಾರ್ವಜನಿಕ ಸಂಸ್ಥೆಯಾದ ಎಚ್‌ಎಂಟಿ ಜಾಗವನ್ನು ವಶಪಡಿಸಿಕೊಳ್ಳುವ ಬದಲು, ಖಾಸಗಿ ಬಿಲ್ಡರ್‌ಗಳು ಒತ್ತುವರಿ ಮಾಡಿಕೊಂಡು ಅಪಾರ್ಟ್‌ಮೆಂಟ್ ಕಟ್ಟಿರುವ 175 ಎಕರೆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದರು.

ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದ ಅವರು, ಪ್ರಸ್ತುತ ಬಿದದಿ ಟೌನ್‌ಶಿಪ್ ಯೋಜನೆಯ ಪರವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೇ 1999ರಿಂದ 2004ರ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗ ಎಚ್‌ಎಂಟಿ ಭೂಮಿ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು. ಈ ಸಂಬಂಧ ನಕ್ಷೆಗಳು ಮತ್ತು ದಾಖಲೆಗಳನ್ನು ಪ್ರದರ್ಶಿಸಿದ ಅವರು, ಭೂ ವ್ಯವಹಾರಗಳಿಗೆ ನೆರವಾದವರು ಹಾಗೂ ಲಾಭ ಪಡೆದವರ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದರು.

ಎಚ್‌ಎಂಟಿ ಮತ್ತು ಕರ್ನಾಟಕ ಸರ್ಕಾರದ ನಡುವಿನ ಭೂ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಈ ವಿಚಾರದಲ್ಲಿ ಸಚಿವರು ಅನಗತ್ಯ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

H D Kumaraswamy and D K Shivakumar
'CM ಡಿ.ಕೆ ಶಿವಕುಮಾರ್ ಅವರು ಡ್ರಾಮಾ ಡೈಲಾಗ್ ರೀತಿ ಮಾತಾಡ್ತಾರೆ': ನಿಖಿಲ್ ಕುಮಾರಸ್ವಾಮಿ; Video

1958ರಿಂದ 1960ರ ಅವಧಿಯಲ್ಲಿ ಎಚ್‌ಎಂಟಿ ಭೂಮಿಯನ್ನು ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಅರಣ್ಯ ಇಲಾಖೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಚ್‌ಎಂಟಿ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳು ನಡೆದಿದ್ದು, ಪುನಶ್ಚೇತನ ಪ್ಯಾಕೇಜ್ ಅನ್ನು ಶೀಘ್ರ ಜಾರಿಗೆ ತರಲು ಪ್ರಯತ್ನ ನಡೆಯುತ್ತಿದೆ ಎಂದರು.

ಈಶ್ವರ್ ಖಂಡ್ರೆಗೂ ಸವಾಲು

ಬಳಿಕ ಎಚ್‌ಎಂಟಿ ಭೂಮಿ ಅರಣ್ಯ ಭೂಮಿ ಎಂಬ ಹೇಳಿಕೆ ನೀಡಿದ್ದ ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ಬೆಂಗಳೂರು ಮತ್ತು ಬಿಡದಿಯನ್ನು ವಿಶ್ವಮಟ್ಟದ ನಗರಗಳನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಮಾತನಾಡುವ ಮೊದಲು ಎಚ್‌ಎಂಟಿ ಭೂಮಿ ಅಕ್ರಮ ವರ್ಗಾವಣೆ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಎಚ್‌ಎಂಟಿ ಭೂಮಿಯನ್ನು ಇಸ್ರೋ ಸೇರಿದಂತೆ ಹಲವು ಸಾರ್ವಜನಿಕ ವಲಯದ ಸಂಸ್ಥೆಗಳು ಬಳಸುತ್ತಿರುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ, ರಾಷ್ಟ್ರೀಯ ಹಿತಾಸಕ್ತಿಯ ಸಂಸ್ಥೆಗಳಿಗೆ ನೀಡಬೇಕಾದ ಅಮೂಲ್ಯ ಸಾರ್ವಜನಿಕ ಭೂಮಿ ಖಾಸಗಿ ಕೈಗಳಿಗೆ ಸೇರಿ, ಅದರ ಮೇಲೆ ಬಹುಮಹಡಿ ಕಟ್ಟಡಗಳು ನಿರ್ಮಾಣವಾಗಿವೆ ಎಂದು ಆರೋಪಿಸಿದರು.

ಫ್ಲ್ಯಾಟ್ ಖರೀದಿದಾರರೇ ಸಂತ್ರಸ್ತರು

2006ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಎಚ್‌ಎಂಟಿ ಭೂಮಿಯ ಮುಂದಿನ ಮಾರಾಟ ಮತ್ತು ನೋಂದಣಿಯನ್ನು ತಡೆದಿದ್ದೆ. ಅಕ್ರಮವಾಗಿ ವರ್ಗಾಯಿಸಲಾಗಿದೆ ಎನ್ನಲಾದ ಭೂಮಿಯಲ್ಲಿ ನಿರ್ಮಿಸಲಾದ ಹಲವು ಅಪಾರ್ಟ್‌ಮೆಂಟ್‌ಗಳು ಇನ್ನೂ ಕಾನೂನು ತೊಡಕಿನಲ್ಲಿ ಸಿಲುಕಿದ್ದು, ಅನೇಕ ನಿವಾಸಿಗಳಿಗೆ ಖಾತೆಗಳು ದೊರೆತಿಲ್ಲ.

"ಫ್ಲ್ಯಾಟ್ ಖರೀದಿಸಿದ ಜನರೇ ಕೊನೆಗೆ ಸಂತ್ರಸ್ತರಾಗಿದ್ದಾರೆ. ವ್ಯವಹಾರಗಳು ಕಾನೂನುಬದ್ಧವಾಗಿದ್ದರೆ ಸರ್ಕಾರ ಇದುವರೆಗೆ ಖಾತೆಗಳನ್ನು ಏಕೆ ನೀಡಿಲ್ಲ? ಎಂದು ಪ್ರಶ್ನಿಸಿದರು. ಈ ನಿಟ್ಟಿನಲ್ಲಿ ಬೇನಾಮಿ ವ್ಯವಹಾರಗಳ ಆರೋಪಗಳನ್ನೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ಅಡ್ಡಿ

ಬಳಿಕ ರಾಜ್ಯ ಸರ್ಕಾರ ಕೈಗಾರಿಕಾ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ ಅವರು, ಹೊಸ ಕೈಗಾರಿಕೆಗಳನ್ನು ತರಲು ಮುನ್ನ ಈಗಿರುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಉಳಿಸುವ ಕೆಲಸವಾಗಬೇಕು ಎಂದರು.

ದೇವದಾರಿ ಗಣಿಗಾರಿಕೆ ಯೋಜನೆಯನ್ನು ಉಲ್ಲೇಖಿಸಿದ ಅವರು, ಉಕ್ಕು ಸಚಿವರಾಗಿ ತಮ್ಮ ಮೊದಲ ಅನುಮೋದನೆಯೇ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (KIOCL) ಬಲವರ್ಧನೆಗಾಗಿ ಆರ್ಥಿಕ ನೆರವು ನೀಡುವುದಾಗಿತ್ತು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com