ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ: ದೆಹಲಿಯಲ್ಲಿ ಶಕ್ತಿ ಪ್ರದರ್ಶನ, ವರಿಷ್ಠರ ಭೇಟಿಗೆ ಹಾತೊರೆಯುತ್ತಿರುವ ನಾಯಕರು..!

ಎಐಸಿಸಿ ಕಚೇರಿ, ಪಕ್ಷದ ಹಿರಿಯ ನಾಯಕರ ನಿವಾಸಗಳು ಹಾಗೂ ಸಭೆ ನಡೆಯುವ ಸ್ಥಳಗಳು ಇದೀಗ ಸಚಿವ ಸ್ಥಾನದ ಆಕಾಂಕ್ಷಿಗಳ ರಾಜಕೀಯ ಲಾಬಿಯ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
Structures getting ready for the posters in front of Vidhana Soudha and posters of designated CM DK Shivakumar ahead of swearing-in, in Bengaluru on Monday.
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಧಾನಸೌಧದ ಮುಂಭಾಗದಲ್ಲಿ ಪೋಸ್ಟರ್‌ಗಳನ್ನು ಸಿದ್ಧಪಡಿಸುತ್ತಿರುವುದು.
Updated on

ಬೆಂಗಳೂರು/ನವದೆಹಲಿ: ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರದ ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಮಂತ್ರಿಗಿರಿಗಾಗಿ ಪೈಪೋಟಿ ತೀವ್ರಗೊಂಡಿದೆ.

ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿರುವ ಶಾಸಕರು ಮತ್ತು ಮಾಜಿ ಸಚಿವರು ದೆಹಲಿಯಲ್ಲಿ ಬೀಡುಬಿಟ್ಟು ಪಕ್ಷದ ವರಿಷ್ಠರ ಭೇಟಿಗೆ ಹಾತೊರೆಯುತ್ತಿದ್ದಾರೆ,

ಎಐಸಿಸಿ ಕಚೇರಿ, ಪಕ್ಷದ ಹಿರಿಯ ನಾಯಕರ ನಿವಾಸಗಳು ಹಾಗೂ ಸಭೆ ನಡೆಯುವ ಸ್ಥಳಗಳು ಇದೀಗ ಸಚಿವ ಸ್ಥಾನದ ಆಕಾಂಕ್ಷಿಗಳ ರಾಜಕೀಯ ಲಾಬಿಯ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ಹೊಸ ಸರ್ಕಾರದ ಸಚಿವ ಸಂಪುಟ ರಚನೆಗೆ ಸಂಬಂಧಿಸಿದ ಚಟುವಟಿಕೆಗಳು ಗರಿಗೆದರಿರುವ ಹಿನ್ನೆಲೆಯಲ್ಲಿ, ಕಳೆದ ಒಂದು ವಾರದಿಂದ ಅನೇಕ ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿದ್ದಾರೆ. ಸಚಿವ ಸ್ಥಾನಕ್ಕಾಗಿ ತಮ್ಮ ಅರ್ಹತೆ, ರಾಜಕೀಯ ಅನುಭವ ಮತ್ತು ಕ್ಷೇತ್ರದ ಪ್ರಾತಿನಿಧ್ಯದ ಕುರಿತು ಪಕ್ಷದ ವರಿಷ್ಠರ ಮುಂದೆ ಮನವರಿಕೆ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ, ವಿಸರ್ಜಿತ ಸಚಿವ ಸಂಪುಟದ ಬಹುತೇಕ ಮಾಜಿ ಸಚಿವರು, ಹಿರಿಯ ಶಾಸಕರು ಹಾಗೂ ಮೊದಲ ಬಾರಿಗೆ ಆಯ್ಕೆಯಾಗಿರುವ ಶಾಸಕರು ಸಹ ಸಚಿವ ಸ್ಥಾನಕ್ಕಾಗಿ ತೀವ್ರ ಲಾಭಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಹಲವರು ತಮ್ಮ ರಾಜಕೀಯ ಸಾಧನೆಗಳ ವಿವರ, ಶಿಫಾರಸು ಪತ್ರಗಳು ಹಾಗೂ ವಿವಿಧ ದಾಖಲೆಗಳೊಂದಿಗೆ ಎಐಸಿಸಿ ನಾಯಕರನ್ನು ಭೇಟಿಯಾಗುತ್ತಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಂದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡುತ್ತಿದ್ದಾರೆ. ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡರೆ ಪಕ್ಷಕ್ಕೆ ಹೇಗೆ ಲಾಭವಾಗಲಿದೆ ಎಂಬುದನ್ನು ವಿವರಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

Structures getting ready for the posters in front of Vidhana Soudha and posters of designated CM DK Shivakumar ahead of swearing-in, in Bengaluru on Monday.
ಸಚಿವ ಸ್ಥಾನ ಸಿಕ್ಕರೆ ಹಿಂದೆ ಸರಿಯಲ್ಲ; ಅಧಿಕಾರವಿದ್ದರೆ ಜನರ ಕೆಲಸಕ್ಕೆ ವೇಗ: ಸಮರ್ಥ್ ಶಾಮನೂರು

2028ರ ವಿಧಾನಸಭೆ ಚುನಾವಣೆಗೆ ಮುನ್ನ ಅಧಿಕಾರದ ಪ್ರಮುಖ ಹುದ್ದೆ ಪಡೆಯಲು ಇದು ಕೊನೆಯ ಅವಕಾಶ ಎಂದು ಹಲವಾರು ಶಾಸಕರು ಭಾವಿಸಿದ್ದಾರೆ. ಹೀಗಾಗಿ, ಮಾಜಿ ಸಚಿವರು ಮತ್ತೆ ಸಚಿವ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದರೆ, ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಹಾಗೂ ಪ್ರಾದೇಶಿಕ ನಾಯಕರು ತಮ್ಮ ಸಮುದಾಯ ಮತ್ತು ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಈ ಬಾರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟ ರಾಜ್ಯ ಕಾಂಗ್ರೆಸ್‌ನ ಭವಿಷ್ಯದ ರಾಜಕೀಯ ಶಕ್ತಿಯ ಸಮೀಕರಣವನ್ನು ನಿರ್ಧರಿಸಲಿದೆ ಎಂಬ ನಂಬಿಕೆ ಶಾಸಕರಲ್ಲಿ ಮೂಡಿದೆ.

ಮುಂದಿನ ಹಲವು ವರ್ಷಗಳ ಕಾಲ ಪಕ್ಷದಲ್ಲಿ ಯಾರು ಪ್ರಭಾವಿ ನಾಯಕರು ಎಂಬುದನ್ನು ಈ ಸಚಿವ ಸಂಪುಟವೇ ನಿರ್ಧರಿಸಬಹುದು ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.

ವಿಸರ್ಜಿತ ಸಚಿವ ಸಂಪುಟದ ಹಲವರು ತಾವು ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಇದ್ದೇವೆ ಎಂಬುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ವಿಧಾನಸಭೆಯ ಮುಖ್ಯ ಸಚೇತಕ ಸಲೀಂ ಅಹ್ಮದ್ ಸಚಿವ ಸಂಪುಟ ವಿಸ್ತರಣೆ ಹಂತ ಹಂತವಾಗಿ ನಡೆಯುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ. ಮೊದಲ ಹಂತದಲ್ಲಿ 10ರಿಂದ 12 ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದರ ಜೊತೆಗೆ ಖರ್ಗೆ ಕೂಡ ಪೂರ್ಣ ಪ್ರಮಾಣದ 34 ಸದಸ್ಯರ ಸಚಿವ ಸಂಪುಟ ರಚನೆಗೆ ಸುಮಾರು ಒಂದು ತಿಂಗಳ ಕಾಲ ಹಿಡಿಯಬಹುದು ಎಂದು ಹೇಳಿದ್ದಾರೆ. ಹೀಗಾಗಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಮುಂದಿನ ಕೆಲವು ವಾರಗಳವರೆಗೂ ಮುಂದುವರಿಯುವ ಸಾಧ್ಯತೆ ಇದೆ.

ಸಚಿವ ಸ್ಥಾನ ಹಂಚಿಕೆಯಲ್ಲಿ ಪ್ರಾದೇಶಿಕ ಮತ್ತು ಜಾತಿ ಸಮೀಕರಣಗಳೂ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿಂದೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದ ಜಿಲ್ಲೆಗಳ ಶಾಸಕರು ಈ ಬಾರಿ ತಮ್ಮ ಜಿಲ್ಲೆಗಳಿಗೆ ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕೆಲವು ಶಾಸಕರು ಎಲ್ಲಾ ಸಮುದಾಯಗಳಿಗೆ ನ್ಯಾಯಯುತ ಪ್ರಾತಿನಿಧ್ಯ ಸಿಗಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಈ ಭಾರೀ ಲಾಬಿ ಕಾಂಗ್ರೆಸ್ ಪಕ್ಷದ ಶಕ್ತಿಯನ್ನೂ ಮತ್ತು ಆಂತರಿಕ ಸವಾಲುಗಳನ್ನೂ ಒಂದೇ ವೇಳೆ ಬಿಂಬಿಸುತ್ತಿದೆ. ಒಂದು ಕಡೆ ಅಧಿಕಾರಕ್ಕಾಗಿ ನಾಯಕರಲ್ಲಿರುವ ಉತ್ಸಾಹವನ್ನು ಇದು ತೋರಿಸುತ್ತಿದ್ದರೆ, ಮತ್ತೊಂದೆಡೆ ವೈಯಕ್ತಿಕ ಮಹತ್ವಾಕಾಂಕ್ಷೆ, ಗುಂಪುಗಾರಿಕೆ ಪಕ್ಷದೊಳಗೆ ಅಸಮಾಧಾನ ಹೆಚ್ಚುತ್ತಿರುವುದನ್ನು ಬಹಿರಂಗಪಡಿಸುತ್ತಿದೆ. ಸಚಿವ ಸಂಪುಟ ರಚನೆ ಪೂರ್ಣಗೊಳ್ಳುವವರೆಗೆ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com