ನವೆಂಬರ್ 26 ಭಾರತದ ಸಂವಿಧಾನ ದಿನ: ವೈವಿಧ್ಯಗಳ ಸಂಗಮ ನಮ್ಮ ಸಂವಿಧಾನ; ಈ ದಿನದ ಮಹತ್ವ, ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ...
ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ನಮ್ಮ ಸಂವಿಧಾನ ವೈವಿಧ್ಯಗಳ ಸಂಗಮವಾಗಿದ್ದು, ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ...
Published: 26th November 2022 09:38 AM | Last Updated: 26th November 2022 02:16 PM | A+A A-

ಸಂಗ್ರಹ ಚಿತ್ರ
ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ನಮ್ಮ ಸಂವಿಧಾನ ವೈವಿಧ್ಯಗಳ ಸಂಗಮವಾಗಿದ್ದು, ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
ಇವತ್ತು ನವೆಂಬರ್ 26 – ಪ್ರತೀ ವರ್ಷ ಈ ದಿನದಂದು ಭಾರತದಲ್ಲಿ ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ. ರಾಷ್ಟ್ರೀಯ ಕಾನೂನು ದಿನ ಅಥವಾ ನ್ಯಾಷನಲ್ ಲಾ ಡೇ ಎಂದೂ ಕರೆಯಲಾಗುತ್ತದೆ. ಭಾರತದ ಸಂವಿಧಾನವನ್ನು ಅಳವಡಿಸಿಕೊಂಡ ಸಂದರ್ಭದ ಸ್ಮರಣೆಗಾಗಿ ಈ ದಿನವನ್ನ ಆಚರಿಸಲಾಗುತ್ತದೆ.
1949ರ ಈ ದಿನದಂದು ಭಾರತದ ಕಾನ್ಸ್ಟಿಟ್ಯೂಯೆಂಟ್ ಅಸೆಂಬ್ಲಿ (ಸಂವಿಧಾನ ರೂಪಿಸಲು ರಚಿಸಲಾಗಿದ್ದ ಸಭೆ) ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಿತು. ಅಂದರೆ ಸಂವಿಧಾನ ರಚನೆಯಾಗಿ ಸರಿಯಾಗಿ 72 ವರ್ಷ ಗತಿಸಿದೆ. ಮರು ವರ್ಷ, ಅಂದರೆ 1950, ಜನವರಿ 26ರಂದು ಸಂವಿಧಾನ ವಾಸ್ತವದಲ್ಲಿ ಜಾರಿಗೆ ಬಂದಿತು.
ಇದನ್ನೂ ಓದಿ: "ನ್ಯಾಯಾಲಯಗಳು ಜನರನ್ನು ತಲುಪಬೇಕು": ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಸಿಜೆಐ
ಕುತೂಹಲಕ ವಿಷಯ ಎಂದರೆ, ಸಂವಿಧಾನ ದಿನ ಎಂದು ಆಚರಣೆ ಶುರುವಾಗಿದ್ದು 2015ರಿಂದ. ಅದಕ್ಕೂ ಮುನ್ನ ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು. 1930ರಲ್ಲಿ ಅಂದಿನ ಕಾಂಗ್ರೆಸ್ನ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯಕ್ಕೆ ಪಣ ತೊಡಲಾಯಿತು. ಆ ಐತಿಹಾಸಿಕ ದಿನ ಕೂಡ ನ. 26 ಆಗಿದೆ.
ಇನ್ನು, ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿ ಅಥವಾ ಸಂವಿಧಾನ ರಚನಾ ಸಭೆಯನ್ನು ರೂಪಿಸಿದ್ದು 1946ರಲ್ಲಿ. ಆಗ ಭಾರತದ ಭಾಗವಾಗಿದ್ದ ಪಾಕಿಸ್ತಾನ, ಬಾಂಗ್ಲಾದೇಶದಿಂದಲೂ ಪ್ರತಿನಿಧಿಗಳು ಈ ಸಭೆಯಲ್ಲಿದ್ದರು. ವಿಭಜನೆ ಆದ ಬಳಿಕ ಅವೆರಡು ದೇಶಗಳು ಪ್ರತ್ಯೇಕ ಸಂವಿಧಾನ ರಚನೆ ಮಾಡಿದವು. ಭಾರತ 1950, ಜನವರಿ 26ರಂದು ಅಧಿಕೃತವಾಗಿ ಸಂವಿಧಾನವನ್ನು ಅಳವಡಿಕೆ ಮಾಡಿಕೊಂಡಿತು. ಆದರೆ, ಸಂವಿಧಾನವನ್ನು ಅಧಿಕೃತವಾಗಿ ಸ್ವೀಕರಿಸಿದ್ದು 1949, ನ. 26ರಂದು.
ಭಾರತದ ಸಂವಿಧಾನವನ್ನು ಬರೆಯಲು ಭಾರತದ ಸಂವಿಧಾನ ಸಭೆಯನ್ನು ಆಯ್ಕೆ ಮಾಡಲಾಯಿತು. 1947 ರಲ್ಲಿ ಭಾರತವು ಬ್ರಿಟಿಷ್ ಸರ್ಕಾರದಿಂದ ಸ್ವಾತಂತ್ರ್ಯವನ್ನು ಪಡೆದ ನಂತರ, ಸಂವಿಧಾನ ಸಭೆಯ ಸದಸ್ಯರು ರಾಷ್ಟ್ರದ ಮೊದಲ ಸಂಸತ್ತಾಗಿ ಸೇವೆ ಸಲ್ಲಿಸಿದರು. ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಬಿ.ಆರ್. ಅಂಬೇಡ್ಕರ್ (14 ಏಪ್ರಿಲ್ 1891) ಅವರ 125 ನೇ ಜನ್ಮದಿನದ ವರ್ಷವಾಗಿದ್ದು, ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸುವುದರೊಂದಿಗೆ ಕೇಂದ್ರವು 2015 ರಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿನ ಎಂದು ಘೋಷಿಸಿತು.
ಇದನ್ನೂ ಓದಿ: ಇ-ಕೋರ್ಟ್ ಯೋಜನೆಯಡಿ ವರ್ಚುವಲ್ ಜಸ್ಟಿಸ್ ಕ್ಲಾಕ್ ಸೇರಿ ವಿವಿಧ ಹೊಸ ಉಪಕ್ರಮಗಳಿಗೆ ಪ್ರಧಾನಿ ಮೋದಿ ಚಾಲನೆ
ನವೆಂಬರ್ 19, 2015 ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನವೆಂಬರ್ 26 ಅನ್ನು 'ಸಂವಿಧಾನ ದಿನ' ಎಂದು ಆಚರಿಸಲು ಭಾರತ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿತು.
ಏನಿದು ಸಂವಿಧಾನ?
ಸರ್ಕಾರ ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನ ನಿರ್ದಿಷ್ಟಪಡಿಸುತ್ತದೆ. ಎಲ್ಲಾ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ.
ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಸಂವಿಧಾನ ರಚನಾ ಸಭೆಯಲ್ಲಿ 250ಕ್ಕೂ ಹೆಚ್ಚು ಸದಸ್ಯರು ಇದ್ದರಾದರೂ ಇದರ ಪ್ರಮುಖ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಾಗಿದ್ದಾರೆ. ಹೀಗಾಗಿ, ಅವರನ್ನ ಸಂವಿಧಾನ ಕರ್ತೃ ಎಂದು ಹೇಳಲಾಗುತ್ತದೆ. ಜನಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ದಿನವನ್ನು ಬಳಸಿಕೊಳ್ಳಲಾಗುತ್ತಿದೆ.