ಹೊಸ ಜೀವನದ ಆರಂಭದ ಭರವಸೆ; ಉಡುಪಿಯಲ್ಲಿ ತೃತೀಯಲಿಂಗಿಗಳಿಂದ ಕ್ಯಾಂಟೀನ್ ಪ್ರಾರಂಭ
ತಮ್ಮ ಕುಟುಂಬಗಳು ಮತ್ತು ಸಾರ್ವಜನಿಕರಿಂದ ಯಾವಾಗಲೂ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಟ್ರಾನ್ಸ್ಜೆಂಡರ್ಗಳು ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಹೊಸ ಹೊಸ ಕ್ಷೇತ್ರಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳ ನಿವಾಸಿಗಳಾದ ತೃತೀಯಲಿಂಗಿಗಳ ಗುಂಪೊಂದು ಕ್ಯಾಂಟೀನ್ ಸ್ಥಾಪಿಸಿದೆ.
Published: 12th February 2023 10:58 AM | Last Updated: 13th February 2023 07:27 PM | A+A A-

ಪ್ರಾತಿನಿಧಿಕ ಚಿತ್ರ
ಮಂಗಳೂರು: ತಮ್ಮ ಕುಟುಂಬಗಳು ಮತ್ತು ಸಾರ್ವಜನಿಕರಿಂದ ಯಾವಾಗಲೂ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಟ್ರಾನ್ಸ್ಜೆಂಡರ್ಗಳು ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಹೊಸ ಹೊಸ ಕ್ಷೇತ್ರಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳ ನಿವಾಸಿಗಳಾದ ತೃತೀಯಲಿಂಗಿಗಳ ಗುಂಪೊಂದು ಕ್ಯಾಂಟೀನ್ ಸ್ಥಾಪಿಸಿದೆ.
ಉಡುಪಿಯ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಪೂರ್ವಿ, ವೈಷ್ಣವಿ, ಚಂದನಾ ಎಂಬ ಮೂವರು ಉಡುಪಿ ಬಸ್ ನಿಲ್ದಾಣದ ಬಳಿ ಕ್ಯಾಂಟೀನ್ ಮೂಲಕ ಸ್ವಾವಲಂಬಿ ಜೀವನ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.
ನಗರದಲ್ಲಿ ಆಹಾರಕ್ಕಾಗಿ ಅಲೆದಾಡುವವರಿಗಾಗಿ ಅವರು ತಮ್ಮ ಕ್ಯಾಂಟೀನ್ ಅನ್ನು ರಾತ್ರಿ 1 ರಿಂದ ಮುಂಜಾನೆ 7 ರವರೆಗೆ ನಡೆಸುತ್ತಾರೆ. ರಾತ್ರಿ ಪ್ರಯಾಣಿಕರಿಗೆ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಕ್ಯಾಂಟೀನ್ ವರದಾನವಾಗಿ ಪರಿಣಮಿಸಿದೆ. ಕ್ಯಾಂಟೀನ್ ಗ್ರಾಹಕರಿಗೆ ರುಚಿಕರವಾದ ತಿಂಡಿ ಮತ್ತು ಚಹಾವನ್ನು ಒದಗಿಸುತ್ತದೆ.
ನಗರದ ಬಹುತೇಕ ಹೋಟೆಲ್ಗಳು ರಾತ್ರಿ ಸಮಯದಲ್ಲಿ ಮುಚ್ಚಿರುವುದರಿಂದ ಜನರು ಈಗ ಟ್ರಾನ್ಸ್ಜೆಂಡರ್ಗಳು ನಡೆಸುತ್ತಿರುವ ನಗರದ ಹೃದಯಭಾಗದಲ್ಲಿನ ಕ್ಯಾಂಟೀನ್ನಲ್ಲಿ ತಿಂಡಿ ತಿನ್ನಲು ಪ್ರಾರಂಭಿಸಿದ್ದಾರೆ.
ಸಾರ್ವಜನಿಕರ ಪ್ರತಿಕ್ರಿಯೆಯು ಇದುವರೆಗೆ ಉತ್ತೇಜನಕಾರಿಯಾಗಿದೆ ಮತ್ತು ಸಾರ್ವಜನಿಕರಿಂದ ಗೌರವವನ್ನು ಪಡೆಯುತ್ತಿದ್ದೇವೆ ಎನ್ನುತ್ತಾರೆ ಮೂವರು.
ಇದನ್ನೂ ನೋಡಿ: ಮಗುವಿಗೆ ಜನ್ಮ ನೀಡಿದ ಭಾರತದ ಮೊದಲ ತೃತೀಯಲಿಂಗಿ ಜಹ್ಹಾದ್!
ಲೈಂಗಿಕ ಕೆಲಸ ಸೇರಿದಂತೆ ತೃತೀಯಲಿಂಗಿಗಳ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಉಡುಪಿ ಪೊಲೀಸರು ಇತ್ತೀಚೆಗೆ ರಾತ್ರಿ ಗಸ್ತನ್ನು ತೀವ್ರಗೊಳಿಸಿದ್ದರು.
ತೃತೀಯಲಿಂಗಿಗಳ ಸಮುದಾಯದ ಮೇಲೆ ಅಪನಂಬಿಕೆಯ ಮೋಡ ಕವಿದಿದ್ದು, ಸಾರ್ವಜನಿಕರು ತಮ್ಮ ಮೇಲೆ ಹೇರಿರುವ ಟ್ಯಾಗ್ ಅನ್ನು ತೆಗೆದುಹಾಕುವ ಪ್ರಯತ್ನದಲ್ಲಿ ಮೂವರು ಹೊಸ ಸಾಹಸಕ್ಕೆ ಇಳಿದಿದ್ದಾರೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ಎಂಬಿಎ ಪದವಿ ಪಡೆದಿರುವ ತೃತೀಯಲಿಂಗಿ ಸಮೀಕ್ಷಾ ಕುಂದರ್ ಅವರು ಕ್ಯಾಂಟೀನ್ ನಡೆಸಲು ಬಂಡವಾಳ ಹೂಡಿ ಸ್ನೇಹಿತರ ಬೆಂಬಲಕ್ಕೆ ನಿಂತಿದ್ದಾರೆ. ಮೂವರು ಅವರ ಮನೆಯಿಂದಲೇ ತಾತ್ಕಾಲಿಕವಾಗಿ ಅಡುಗೆ ತಯಾರಿಸುತ್ತಿದ್ದಾರೆ.
ಸಣ್ಣ ವ್ಯಾಪಾರವನ್ನು ನಡೆಸಲು ಸಾರ್ವಜನಿಕರಿಂದ ಸಿಗುವ ಬೆಂಬಲವು ನಿರ್ಣಾಯಕವಾಗಿದೆ. ಆದರೆ, ಅವರು ಸಕಾರಾತ್ಮಕ ಶಕ್ತಿಯಿಂದ ಕೆಲಸ ಆರಂಭಿಸಿದ್ದಾರೆ ಎಂದು ಕುಂದರ್ ಹೇಳಿದರು.