ಅಜ್ಲಾನ್ ಶಾ ಕಪ್: ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5-1 ಅಂತರದ ಜಯ

ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಮಂಗಳವಾರ ಪಾಕಿಸ್ತಾನ ತಂಡವನ್ನು ಭಾರತ 5-1 ಅಂತರದಿಂದ ಭರ್ಜರಿಯಾಗಿ ಮಣಿಸಿ ತನ್ನ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದ ಕ್ಷಣ
ಪಾಕಿಸ್ತಾನ ವಿರುದ್ಧದ ಪಂದ್ಯದ ಕ್ಷಣ
Updated on

ಕೌಲಾಲಂಪುರ: ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಮಂಗಳವಾರ ಪಾಕಿಸ್ತಾನ ತಂಡವನ್ನು ಭಾರತ 5-1 ಅಂತರದಿಂದ ಭರ್ಜರಿಯಾಗಿ ಮಣಿಸಿ  ತನ್ನ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಕನ್ನಡಿಗ ಎಸ್‌ವಿ ಸುನೀಲ್(10, 41ನೇ ನಿಮಿಷ) ಆಕರ್ಷಕ 2 ಗೋಲು ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇದರಿಂದ ಭಾರತ  ಅಂಕಪಟ್ಟಿಯಲ್ಲಿ 9 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದು, ಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಕೆನಡ ವಿರುದ್ಧದ ಕಳೆದ ಪಂದ್ಯದ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ  ಭಾರತ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕಿಳಿಯಿತು. ಇದಕ್ಕೆ ತಕ್ಕಂತೆ ಮನ್‌ಪ್ರೀತ್ ಸಿಂಗ್ 4ನೇ ನಿಮಿಷದಲ್ಲೇ ಚುರುಕಿನ ಫೀಲ್ಡ್ ಗೋಲು ಸಿಡಿಸಿ ಭಾರತ ತಂಡಕ್ಕೆ ಮುನ್ನಡೆ ತಂದಿತ್ತರು.  ಆದರೆ ಪಾಕಿಸ್ತಾನ 7ನೇ ನಿಮಿಷದಲ್ಲಿ ಮಹಮದ್ ಇರ್ಫಾನ್ ಮೂಲಕ ಗೋಲು ಸಿಡಿಸಿ ಅಷ್ಟೇ ವೇಗದಲ್ಲಿ ತಿರುಗೇಟು ನೀಡಿತು.

ಬಳಿಕ ಮತ್ತೆ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದ ಭಾರತದ ಆಟಗಾರರು ಸಾಕಷ್ಟು ಸಮಯ ಚೆಂಡು ಪಾಕ್ ಆಟಗಾರರ ಸ್ಟಿಕ್‌ಗೆ ಸಿಗದಂತೆ ನೋಡಿಕೊಂಡರು. ಕೊನೇ ಕ್ಷಣದಲ್ಲಿ ರೂಪಿಂದರ್ ಪಾಲ್  ಸಿಂಗ್ ಸಿಕ್ಕ ಪೆನಾಲ್ಟಿ ಶೂಟೌಟ್ ಅನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಆದರೆ  ಉಪನಾಯಕ ಸುನೀಲ್ ಫೀಲ್ಡ್‌ನಲ್ಲಿ ತಮ್ಮ ಚುರುಕಿನ ಆಟದ ಮೂಲಕ ಪಾಕ್ ತಂಡವನ್ನು  ಒತ್ತಡಕ್ಕೆ ಸಿಲಕಿಸಿದರಲ್ಲದೇ, 10ನೇ ನಿಮಿಷದಲ್ಲಿ 25 ಯಾರ್ಡ್ ದೂರದಿಂದ ಮಿಂಚಿನ ಗೋಲು ಸಿಡಿಸಿ ಮೊದಲ ಕ್ವಾರ್ಟರ್ ಅವಧಿಯಲ್ಲಿ 2-1 ಮುನ್ನಡೆ ತಂದಿತ್ತರು. ಬಳಿಕ ತೃತೀಯ ಕ್ವಾರ್ಟರ್  ಮುಕ್ತಾಯಕ್ಕೆ 4 ನಿಮಿಷಗಳಿದ್ದಾಗ ಕೊಡಗಿನ ಕುವರ ಸುನೀಲ್ ತಮ್ಮ 2ನೇ ಗೋಲು ಸಿಡಿಸಿ ಜಯ ಖಚಿತಪಡಿಸಿದರು. 50ನೇ ನಿಮಿಷದಲ್ಲಿ ತಲ್ವಿಂದರ್ ಸಿಂಗ್ ಮತ್ತೊಂದು ಗೋಲು ಬಾರಿಸಿ  ಗೆಲುವಿನ ಅಂತರ ಹಿಗ್ಗಿಸಿದರು.

ಅಂತಿಮವಾಗಿ ಪಂದ್ಯದ ಮುಕ್ತಾಯದ ವೇಳೆಗೆ ಭಾರತ ತಂಡ 5-1 ಗೋಲುಗಳ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ತನ್ನ ಫೈನಲ್ ಕನಸನ್ನು  ಜೀವಂತವಾಗಿರಿಸಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com