ಹೈದರಾಬಾದ್: ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತದ ಕಿಡಾಂಬಿ ಶ್ರೀಕಾಂತ್ ಅವರಿಗೆ ಗೋಪಿ ಚಂದ್ ಅಕಾಡೆಮಿ 3 ಲಕ್ಷ ನಗದು ಬಹುಮಾನವನ್ನು ಘೋಷಣೆ ಮಾಡಿದೆ.
ಈ ಹಿಂದೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮುಕ್ತಾಯವಾದ ಆಸ್ಟ್ರೇಲಿಯನ್ ಓಪನ್ ಸಿರೀಸ್ ನ ಪೈನಲ್ ನಲ್ಲಿ ಶ್ರೀಕಾಂತ್ ವಿಶ್ವದ ಅಗ್ರ ಶ್ರೇಯಾಂಕದ ಚೀನಾದ ಚೆನ್ ಲಾಂಗ್ ರನ್ನು 22-20, 21-16 ಅಂತರದಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಆ ಮೂಲಕ ತಮ್ಮ ವೃತ್ತಿ ಜೀವನದ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಅಂತೆಯೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಶ್ರೀಕಾಂತ್ ಭಾಜನರಾದರು.
ಶ್ರೀಕಾಂತ್ ಅವರ ಸಾಧನೆಗೆ ಮೆಚ್ಚಿ ಈ ಹಿಂದೆ ಬ್ಯಾಡ್ಮಿಂಟನ್ ಅಸೋಸಿಯೋಷನ್ ಆಫ್ ಇಂಡಿಯಾ 5 ಲಕ್ಷ ನಗದು ಬಹುಮಾನ ಘೋಷಣೆ ಮಾಡಿತ್ತು. ಅಂತೆಯೇ ಖ್ಯಾತ ವಾಹನ ತಯಾರಿಕಾ ಸಂಸ್ಥೆ ಮಹೇಂದ್ರ ಸಂಸ್ಥೆಯ ಮಾಲೀಕರಾದ ಆನಂದ್ ಮಹೀಂದ್ರ ಅವರು ಶ್ರೀಕಾಂತ್ ಗೆ ಟಿಯುವಿ-300 ಕಾರು ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ಖ್ಯಾತ ಮಾಜಿ ಬ್ಯಾಡ್ಮಿಂಟನ್ ತಾರೆ ಪುಲ್ಲೆಲಾ ಗೋಪಿಚಂದ್ ನೇತೃತ್ವದ ಗೋಪಿಚಂದ್ ಅಕಾಡೆಮಿ ಸಂಸ್ಥೆ ಶ್ರೀಕಾಂತ್ ಗೆ ಮೂರು ಲಕ್ಷ ನಗದು ಬಹುಮಾನ ಘೋಷಣೆ ಮಾಡಿದೆ.
ವಿಶೇಷವೆಂದರೆ ಶ್ರೀಕಾಂತ್ ಕೂಡ ಗೋಪಿಚಂದ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದು, ಆಸ್ಟ್ರೇಲಿಯನ್ ಓಪನ್ ಸಿರೀಸ್ ವೇಳೆ ಗೋಪಿಚಂದ್ ರಿಂದ ಸಲಹೆ ಪಡೆದಿದ್ದರು. ಈ ಬಗ್ಗೆ ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವತಃ ಗೋಪಿಚಂದ್ ಅವರೇ ಹೇಳಿಕೊಂಡಿದ್ದು, "ಗೋಪಿ ಸರ್ ಮಾರ್ಗದರ್ಶನ ವಿಲ್ಲದೇ ಹೋಗಿದ್ದರೆ ನನ್ನಿಂದ ಈ ಸಾಧನೆ ಅಸಾಧ್ಯವಾಗುತ್ತಿತ್ತು. ಟೂರ್ನಿಯುದ್ದಕ್ಕೂ ಗೋಪಿ ಸರ್ ಅವರು ಸಲಹೆ ನೀಡುತ್ತಿದ್ದರು. ಪ್ರತೀ ಭಾರಿಯೂ ಗೋಪಿ ಸರ್ ಕಠಿಣ ಪರಿಶ್ರಮ ಪಡುವಂತೆ ಪ್ರೇರೇಪಿಸುತ್ತಿದ್ದರು ಎಂದು ಹೇಳಿದದು.
ಅಂತೆಯೇ ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಗೋಪಿಚಂದ್ ಅವರ ಪಾತ್ರ ಪ್ರಮುಖವಾಗಿದ್ದು, ಅವರ ಕೋಚಿಂಗ್ ಪರಿಣಾಮವಾಗಿಯೇ ಇಂದು ಭಾರತೀಯ ಬ್ಯಾಡ್ಮಿಂಟನ್ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ಶ್ಲಾಘಿಸಿದರು.
Advertisement