ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಒಲಂಪಿಕ್ ಗೆ ಅರ್ಹತೆ ಕಲ್ಪಿಸುವ ವಿಶ್ವ ಅಥ್ಲೆಟಿಕ್ಸ್ ರಿಲೇ ಕನಸಿಗೂ ಕುತ್ತು ಬಂದಿದೆ.
ಪೋಲ್ಯಾಂಡ್ ನಲ್ಲಿ ಮೇ.1 ಹಾಗೂ 2 ರಂದು ವಿಶ್ವ ಅಥ್ಲೆಟಿಕ್ಸ್ ರಿಲೇ ನಡೆಯಲಿದ್ದು ಕೋವಿಡ್-19 ಹೆಚ್ಚಾಗುತ್ತಿರುವ ಕಾರಣದಿಂದಾಗಿ ಭಾರತದಿಂದ ಆಂಸ್ಟರ್ಡ್ಯಾಮ್ ಗೆ ವಿಮಾನ ಸಂಪರ್ಕ ಸ್ಥಗಿತಗೊಂಡಿದೆ. ಈ ಕಾರಣದಿಂದಾಗಿ ಸ್ಟಾರ್ ಅಥ್ಲೀಟ್ ಗಳಾದ ಹಿಮಾದಾಸ್ ಹಾಗೂ ಡುಟಿ ಚಂದ್ ಅವರು ಒಲಂಪಿಕ್ ಗೆ ಅರ್ಹತೆ ಕಲ್ಪಿಸುವ ಕ್ರೀಡಾ ಕೂಟದಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಮಹಿಳೆಯರ 4x100m ಹಾಗೂ ಪುರುಷರ ವಿಭಾಗದ 4x400m ತಂಡಗಳು ಆಂಸ್ಟರ್ಡ್ಯಾಮ್ ಗೆ ಕೆಎಲ್ಎಂ ವಿಮಾನದಲ್ಲಿ ಗುರುವಾರ ಬೆಳಗಿನ ಜಾವ ತೆರಳಬೇಕಿತ್ತು. ಆದರೆ ಡಚ್ ಸರ್ಕಾರ ಭಾರತದಿಂದ ಬರುವ ವಿಮಾನಗಳನ್ನು ಸೋಮವಾರದ ಸಂಜೆಯಿಂದಲೇ ಸ್ಥಗಿತಗೊಳಿಸಿದೆ.
ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ಪೋಲ್ಯಾಂಡ್ ಗೆ ತೆರಳುವುದಕ್ಕೆ ಯುರೋಪ್ ನ ಮೂಲಕ ಪರ್ಯಾಯ ವಿಮಾನ ವ್ಯವಸ್ಥೆ ಮಾಡುವುದಕ್ಕೆ ಯತ್ನಿಸುತ್ತಿದೆ. ನಮ್ಮ ತಂಡ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುವುದರ ಬಗ್ಗೆ ಅನುಮಾನಗಳಿವೆ, ಭಾರತದಿಂದ ವಿಮಾನಗಳನ್ನು ಹಲವಾರು ಯುರೋಪಿಯನ್ ರಾಷ್ಟ್ರಗಳು ನಿರ್ಬಂಧಿಸಿವೆ. ಆದ್ದರಿಂದ ಭಾರತೀಯ ತಂಡ ಭಾಗವಹಿಸುವುದು ಅನುಮಾನವಾಗಿದೆ ಎಂದು ಹಿರಿಯ ಎಎಫ್ಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement