ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಸಿ ಸೋಮವಾರದಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರಿ ಬಸ್ ಗಳ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಮುಂದುವರೆದಿದೆ.
ಪ್ರಮುಖವಾಗಿ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಮುಷ್ಕರದ ಬಿಸಿ ಜೋರಾಗಿಯೇ ತಟ್ಟಿದ್ದು, ಕರಾವಳಿ ಪ್ರದೇಶದಲ್ಲಿ ಮುಷ್ಕರದ ಎಫೆಕ್ಟ್ ಕಡಿಮೆಯಾಗಿತ್ತು ಎಂಬ ಮಾತುಗಳು ಕೇಳಿಬಂದಿವೆ. ಈ ಭಾಗದ ಪ್ರದೇಶದಲ್ಲಿ ಸರ್ಕಾರಿ ಬಸ್ ಸೇವೆಗಳಿಗಿಂತ ಹೆಚ್ಚಾಗಿ ಖಾಸಗಿ ಬಸ್ ಗಳ ಸಂಖ್ಯೆ ಅಧಿಕವಾಗಿದ್ದೇ ಮುಷ್ಕರ ವಿಫಲವಾಗಲು ಕಾರಣ ಎಂದು ಹೇಳಲಾಗುತ್ತಿದೆ.
ಇನ್ನು ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ಗಳು ರಸ್ತೆಗೆ ಇಳಿಯದ ಹಿನ್ನಲೆಯಲ್ಲಿ ಖಾಸಗಿ ವಾಹನಗಳು ಮತ್ತು ಆಟೋ ಚಾಲಕರ ಆಟಾಟೋಪ ಹೆಚ್ಚಾಗಿದ್ದು, ಪ್ರಯಾಣಿಕರಿಂದ ದುಪ್ಪಟ್ಟು ಹಣ ಪೀಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. 30 ರು.ಗಳ ಪ್ರಯಾಣಕ್ಕೆ 100 ರಿಂದ 200 ರು.ಗಳ ವರೆಗೆ ಹಣ ಪಡೆಯಲಾಗುತ್ತಿದ್ದು, ಖಾಸಗಿ ವಾಹನಗಳು ಮತ್ತು ಆಟೋಚಾಲಕ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಮುಷ್ಕರದ ಎಫೆಕ್ಟ್; ಕಲ್ಲು ತೂರಾಟದಿಂದ ಇಲಾಖೆಗೆ 17 ಕೋಟಿ ನಷ್ಟ
ಸಾರಿಗೆ ನೌಕರರ ಮುಷ್ಕರದಿಂದಾಗಿ ನಿನ್ನೆ ಒಂದೇ ದಿನ ಸಾರಿಗೆ ಇಲಾಖೆಗೆ ಬರೊಬ್ಬರಿ 17 ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ. ಮುಷ್ಕರದಲ್ಲಿ ಪಾಲ್ಗೊಳ್ಳದ ಆರೋಪದ ಮೇರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಂಚರಿಸುತ್ತಿದ್ದ ಸಾರಿಗೆ ಇಲಾಖೆಯ ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿರುವಂತೆ ಸುಮಾರು 151 ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಇಲಾಖೆಯ ನಾಲ್ಕು ನಿಗಮಗಳಿಗೆ ಒಟ್ಟು 17 ಕೋಟಿ ನಷ್ಟವಾಗಿದೆ ಎಂದು ಅಧಿಕಾಗಿಳು ತಿಳಿಸಿದ್ದಾರೆ.
Advertisement